ADVERTISEMENT

ತ್ಯಾವಣಿಗೆ: 'ಕೇರಳ ಮಾದರಿಯಲ್ಲಿ ಕ್ವಿಂಟಲ್ ಭತ್ತಕ್ಕೆ ₹1,200 ಪ್ರೋತ್ಸಾಹಧನ ನೀಡಿ'

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:11 IST
Last Updated 17 ಮೇ 2025, 14:11 IST
ತ್ಯಾವಣಿಗೆ ಸಮೀಪದ ಕಾರಿಗನೂರು ಕ್ರಾಸ್‌ನಲ್ಲಿ ರೈತರು ಶನಿವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು
ತ್ಯಾವಣಿಗೆ ಸಮೀಪದ ಕಾರಿಗನೂರು ಕ್ರಾಸ್‌ನಲ್ಲಿ ರೈತರು ಶನಿವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು   

ತ್ಯಾವಣಿಗೆ: ರೈತರು ಬೆಳೆದಿರುವ ಭತ್ತಕ್ಕೆ ಸೂಕ್ತ ದರ ನೀಡಿ ಖರೀದಿಸುತ್ತಿಲ್ಲ ಎಂದು ಆರೋಪಿಸಿ, ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ವತಿಯಿಂದ ಕಾರಿಗನೂರು ಕ್ರಾಸ್ ಹಾಗೂ ಸೂಳೆಕೆರೆಯಲ್ಲಿ ಶನಿವಾರ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಲಾಯಿತು.

ಈಗಾಗಲೇ ಭತ್ತದ ಕಟಾವು ಅರ್ಧದಷ್ಟು ಮುಗಿದಿದ್ದು, ಖರೀದಿದಾರರು ರೈತರಿಂದ ಕ್ವಿಂಟಲ್ ಭತ್ತವನ್ನು ₹1,600 ರಿಂದ ₹1,900 ರವರೆಗೆ ಖರೀದಿ ಮಾಡುತ್ತಿದ್ದಾರೆ. ಈ ಸಮಯದಲ್ಲಿಯೇ ಮಳೆ ಸುರಿಯುತ್ತಿರುವುದರಿಂದ ರೈತರು ಆತಂಕದಲ್ಲಿ ಕಡಿಮೆ ದರಕ್ಕೇ ಮಾರಾಟ ಮಾಡುತ್ತಿದ್ದು, ನಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದರು.

ಎಕರೆ ಭತ್ತ ಬೆಳೆಯಲು ₹40,000ದಿಂದ ₹45,000 ಖರ್ಚಾಗುತ್ತದೆ. ಎಕರೆಗೆ 25 ಕ್ವಿಂಟಲ್ ಭತ್ತ ಬೆಳೆಯಬಹುದು. ಕಡಿಮೆ ದರಕ್ಕೆ ಮಾರಾಟ ಮಾಡುವುದರಿಂದ ರೈತರಿಗೆ ಎಕರೆಗೆ ₹6,000 ನಷ್ಟ ಆಗುತ್ತದೆ. ಕೇರಳ ಮಾದರಿಯಲ್ಲಿ ಸರ್ಕಾರ ಕ್ವಿಂಟಲ್ ಭತ್ತಕ್ಕೆ ₹1,200 ಪ್ರೋತ್ಸಹಧನ ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಕಾಯ್ದೆ ಜಾರಿಮಾಡುತ್ತಿಲ್ಲ. ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸುಗ್ರೀವಾಜ್ಞೆ ಮೂಲಕ ಕನಿಷ್ಠ ಬೆಂಬಲ ಬೆಲೆ ಜಾರಿಗೆ ತಂದು, ಕಡಿಮೆ ಬೆಲೆಗೆ ಖರೀದಿ ಮಾಡುವ ದಲ್ಲಾಳಿ ಹಾಗೂ ಕಂಪನಿಯವರನ್ನು ಕಾನೂನಿನಡಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಕರೆದು ಸಭೆ ನಡೆಸಬೇಕು. ಸಮಸ್ಯೆ ಬಗೆಹರಿಸದಿದ್ದರೆ ವಾರದೊಳಗೆ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲೋದಳ್ಳಿ ಎಸ್.ಆರ್. ರವಿಕುಮಾರ್ ಎಚ್ಚರಿಸಿದರು.

ಮುಖಂಡರಾದ ಭೀಮಾನಾಯ್ಕ, ರಾಜು, ಚಿರಂಜೀವಿ, ಅಸ್ತಪನಹಳ್ಳಿ ಗಂಡುಗಲಿ, ನಟರಾಜ, ಬಸವರಾಜ, ಮಹೇಶ್, ತಿಮ್ಮಣ್ಣ, ಪ್ರಕಾಶ್, ಕಲ್ಲೇಶ್, ತಿಪ್ಪೇಸ್ವಾಮಿ ಇತರರಿದ್ದರು.

ತ್ಯಾವಣಿಗೆ ಸಮೀಪದ ಸೂಳೆಕೆರೆಯಲ್ಲಿ ಭತ್ತಕ್ಕೆ ಸೂಕ್ತ ಬೆಲೆ ನೀಡಲು ಒತ್ತಾಯಿಸಿ ಶನಿವಾರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.