ADVERTISEMENT

ರಾಣೆಬೆನ್ನೂರಿನ ವ್ಯಕ್ತಿ ಮೃತ್ಯು: ಮುಂದುವರಿದ ಸಾವಿನ ಸರಣಿ

ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆ * ಕೆಎಸ್‌ಆರ್‌ಟಿಸಿ ಸಿಬ್ಬಂದಿಗೂ ಸೋಂಕು

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:25 IST
Last Updated 7 ಜುಲೈ 2020, 15:25 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ದಾವಣಗೆರೆ: ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ವ್ಯಕ್ತಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿ ಸಾಯುವವರ ಸಂಖ್ಯೆ ಜಿಲ್ಲೆಯಲ್ಲಿ ಮುಂದುವರಿದೆ.

ಕಳೆದ ನಾಲ್ಕು ದಿನಗಳಲ್ಲಿ ನಾಲ್ವರು ಮೃತಪಟ್ಟಿದ್ದು, ಅದರಲ್ಲಿ ಒಬ್ಬರೇ ಸ್ಥಳೀಯರು. ಇಬ್ಬರು ಬಳ್ಳಾರಿ ಮತ್ತು ಒಬ್ಬರು ಹಾವೇರಿ ಜಿಲ್ಲೆಯವರು.

ರಾಣೆಬೆನ್ನೂರಿನ 55 ವರ್ಷದ ಪುರುಷ (ಪಿ.25830) ಶೀತಜ್ವರ, ಉಸಿರಾಟದ ಸಮಸ್ಯೆ, ಕಫ, ಎದೆನೋವಿನ ಕಾರಣದಿಂದ ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮೃತಪಟ್ಟಿದ್ದಾರೆ.

ADVERTISEMENT

ಕೆಎಸ್ಆರ್‌ಟಿಸಿ ಮೆಕ್ಯಾನಿಕ್‌ಗೂ ಕೊರೊನಾ: ಮೃತಪಟ್ಟಿರುವ ರಾಣೆಬೆನ್ನೂರು ಮಾರುತಿನಗರದ ವ್ಯಕ್ತಿ ಸೇರಿ ಒಟ್ಟು ಆರು ಮಂದಿಗೆ ಕೊರೊನಾ ಸೋಂಕು ಇರುವುದು ಮಂಗಳವಾರ ದೃಢಪಟ್ಟಿದೆ. ಅದರಲ್ಲಿ ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಲ್ಲಿ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿರುವ ನಿಟುವಳ್ಳಿ ಎಚ್‌ಕೆಆರ್‌ ಸರ್ಕಲ್‌ ನಿವಾಸಿ 43 ವರ್ಷದ ಸಿಬ್ಬಂದಿಯೊಬ್ಬರೂ (ಪಿ.25827) ಸೇರಿದ್ದಾರೆ.

ಕೆಎಸ್‌ಆರ್‌ಟಿಸಿಯ ಎಲ್ಲ ಸಿಬ್ಬಂದಿಗೆ ಗಂಟಲುದ್ರವ ಮಾದರಿ ತೆಗೆಯುವಾಗ ಇವರೂ ಪರೀಕ್ಷೆಗೆ ಒಳಗಾಗಿದ್ದರು. ಇದಾಗ ವಾರದ ನಂತರ ಫಲಿತಾಂಶ ಬಂದಿದೆ. ಪಾಸಿಟಿವ್‌ ಎಂದು ಗುರುತಿಸಲಾಗಿದೆ. ಅವರ ಜತೆ ಕೆಲಸ ಮಾಡುವ ಇತರರ ಮಾದರಿ ನೆಗೆಟಿವ್ ಎಂದು ಬಂದಿದೆ. ಅವರು ಎರಡು ವಾರಗಳ ಹಿಂದೆ ತನ್ನ ತಾಯಿಯನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಂದಿದ್ದರು. ಅಲ್ಲಿಂದ ಸೋಂಕು ಬಂದಿದೆಯೇ ಎಂಬುದು ಗೊತ್ತಾಗಿಲ್ಲ.

ಶೀತಜ್ವರಿಂದ ಬಳಲುತ್ತಿರುವ ಬಾಷಾನಗರದ 65 ವರ್ಷದ ವೃದ್ಧರಿಗೆ (ಪಿ.25825) ಅವರಿಗೆ ಸೋಂಕು ಬಂದಿದೆ. ಚೌಕಿಪೇಟೆಯ 46 ವರ್ಷದ ಪುರುಷರಿಗೂ (ಪಿ.25826) ಅವರಿಗೂ ಶೀತಜ್ವರ (ಐಎಲ್‌ಐ) ಎಂದು ಗುರುತಿಸಲಾಗಿದೆ.

ತಮಿಳುನಾಡಿನಿಂದ ಚನ್ನಗಿರಿ ತಾಲ್ಲೂಕಿನ ನಲ್ಲೂರಿಗೆ ಬಂದಿರುವ 62 ವರ್ಷದ ವೃದ್ಧೆಗೂ (ಪಿ.25828) ಕೊರೊನಾ ಇರುವುದು ಖಚಿತಗೊಂಡಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ನಿಟುವಳ್ಳಿಯ 48 ವರ್ಷದ ವ್ಯಕ್ತಿಗೆ (ಪಿ.25829) ಸೋಂಕು ಬಂದಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 365 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 311 ಮಂದಿ ಗುಣಮುಖರಾಗಿದ್ದಾರೆ. 13 ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ 41 ಪ್ರಕರಣಗಳಿವೆ. ಅದರಲ್ಲಿ 59 ಮತ್ತು 60 ವರ್ಷದ ಇಬ್ಬರು ಪುರುಷರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.