ದಾವಣಗೆರೆ: ‘ಬದುಕು ಬಯಕೆ ಭಾವನೆ’ ಕೃತಿಯು ಸ್ಫೂರ್ತಿದಾಯಕ ಮತ್ತು ಜೀವನೋತ್ಸವ ಮೂಡಿಸು ವಂಥದ್ದಾಗಿದೆ. ವೈವಿಧ್ಯಮಯ ಭಾವನೆಗಳನ್ನು ಶಕ್ತಿವರ್ಧಕ ಟಾನಿಕ್ ರೂಪದಲ್ಲಿ ನೀಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿದರು.
ಕಲಾ ಕನ್ಸ್ಟ್ರಕ್ಷನ್ ಎಂಜಿನಿಯರ್ ಎಚ್. ವಿ. ಮಂಜುನಾಥ ಸ್ವಾಮಿ ಅವರ ‘ಬದುಕು ಬಯಕೆ ಭಾವನೆ’ ಪುಸ್ತಕವನ್ನು ಲಯನ್ಸ್ ಕ್ಲಬ್ನಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಯವಿಭವ ವಿದ್ಯಾಸಂಸ್ಥೆಯ ಎಂ.ಕೆ. ಬಕ್ಕಪ್ಪ ‘ಜೀವನದಲ್ಲಿ ಮನಃಶಾಂತಿ ಮತ್ತು ನೆಮ್ಮದಿ ಹುಡುಕುವವರಿಗೆ ಈ ಪುಸ್ತಕ ಮಾರ್ಗದರ್ಶನ ನೀಡಬಲ್ಲದು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಲಾವಿದ ಅರುಣ್ ಕುಮಾರ್ ಆರ್.ಟಿ. ಮಾತನಾಡಿ, ‘ಇದು ಪಾಂಡಿತ್ಯದ ಬರಹವಲ್ಲ. ಅನುಭವದ ಬರಹಗಳು. ಮಂಜಣ್ಣ ವ್ಯಕ್ತಪಡಿಸಿರುವ ವಿಷಯಗಳಲ್ಲಿ ಗಟ್ಟಿತನವಿದೆ. ಯುವ ಜನರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಸ್ಫೂರ್ತಿದಾಯಕ ವಿಷಯಗಳು ಈ ಪುಸ್ತಕದಲ್ಲಿ ಅಡಗಿವೆ’ ಎಂದು ವಿಶ್ಲೇಷಿಸಿದರು.
ಮುರುಘರಾಜೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಎಂ. ಜಯಕುಮಾರ್, ‘ಕಡುಬಡತನದಲ್ಲಿ ಬೆಳೆದ ಮಂಜುನಾಥ ಸ್ವಾಮಿ ಕಷ್ಟಪಟ್ಟು ಬದುಕನ್ನು ಕಟ್ಟಿಕೊಂಡರು. ನಂತರ ಸಮಾಜ ಸೇವೆಯ ಬಯಕೆಯನ್ನು ಹೊಂದಿ ಲಯನ್ಸ್ ಕ್ಲಬ್ ಮುಂತಾದ ಸಂಘಟನೆಗಳಲ್ಲಿ ತೊಡಗಿಸಿಕೊಂಡರು. ಈಗ ಬರವಣಿಗೆಯ ಮೂಲಕ ಭಾವನೆ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.
ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘ಮಂಜುನಾಥಸ್ವಾಮಿ ಒಳ್ಳೆಯ ವಾಗ್ಮಿ. ಅವರ ಬರಹಗಳು ಪರಿಣಾಮ ಬೀರುವಂಥವುಗಳಾಗಿವೆ. ಇನ್ನೂ ಹೆಚ್ಚು ಹೆಚ್ಚು ಪುಸ್ತಕಗಳು ಅವರು ರಚನೆ ಮಾಡಲಿ’ ಎಂದು ಹಾರೈಸಿದರು.
ಕೃತಿಕಾರ ಎಚ್.ವಿ. ಮಂಜುನಾಥ ಸ್ವಾಮಿ, ‘ಕಟ್ಟಡ ನಿರ್ಮಾಣದ ಕೆಲವು ತಾಂತ್ರಿಕ ವಿಷಯಗಳನ್ನು ಸಾಮಾನ್ಯ ಜನರಿಗೆ ತಲುಪಿಸಲು ಬರೆಯುವುದನ್ನು ಪ್ರಾರಂಭಿಸಿದೆ. ನಂತರ ವಿವಿಧ ವಿಷಯ ಗಳನ್ನು ಬರೆಯಲು ತೊಡಗಿಸಿಕೊಂಡೆ’ ಎಂದು ನೆನಪಿಸಿಕೊಂಡರು.
ಅಜಯ್ ಕುಮಾರ್ ಪ್ರಾರ್ಥನೆ ಮಾಡಿದರು. ಲಯನ್ಸ್ ಅಧ್ಯಕ್ಷ ಎಸ್. ಓಂಕಾರಪ್ಪ ಸ್ವಾಗತಿಸಿದರು. ಕಾರ್ಯದರ್ಶಿ ಕೋರಿ ಶಿವಕುಮಾರ್ ವಂದಿಸಿದರು. ಸುರಭಿ, ಶಿವಮೂರ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಬಿ.ಎಸ್. ನಾಗಪ್ರಕಾಶ್, ಎ.ಎಸ್. ಮೃತ್ಯುಂಜಯ, ಎಸ್.ವಿ. ಬಂಡಿವಾಡ, ಪತ್ರಕರ್ತ ಇ.ಎಂ. ಮಂಜುನಾಥ ಅವರೂ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.