ADVERTISEMENT

ರಾತ್ರಿ 10ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 7:56 IST
Last Updated 16 ಸೆಪ್ಟೆಂಬರ್ 2021, 7:56 IST

ದಾವಣಗೆರೆ: ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ರಾತ್ರಿ 9ರ ವರೆಗೆ ಮಾತ್ರ ವ್ಯವಹಾರಕ್ಕೆ ಅವಕಾಶ ನೀಡಿರುವುದನ್ನು ಸಡಿಲಗೊಳಿಸಿ ರಾತ್ರಿ 10ರವರೆಗೆ ಅವಕಾಶ ನೀಡಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಲ್‌. ರಾಘವೇಂದ್ರ ಆಗ್ರಹಿಸಿದರು.

‘ದೊಡ್ಡ ವ್ಯಾಪಾರಿಗಳು ಬೇಗ ವ್ಯಾಪಾರ ಮುಗಿಸಿಕೊಂಡು ಹೋಗುತ್ತಾರೆ. ಸಣ್ಣ ವ್ಯಾಪಾರಿಗಳಿಗೆ ಕಷ್ಟವಾಗುತ್ತದೆ. ಬೀದಿ ವ್ಯಾಪಾರಿಗಳು ಅಂಗಡಿ ತೆರೆಯುವುದೇ ಸಂಜೆ ಹೊತ್ತಿಗೆ. ಅವರು ವ್ಯಾಪಾರ ಶುರು ಮಾಡಿದ ಸ್ವಲ್ಪ ಹೊತ್ತಿಗೇ ಪೊಲೀಸರು ಬಂದು 9 ಗಂಟೆ ಆಯಿತು ಎಂದು ಬಂದ್‌ ಮಾಡಿಸುತ್ತಿದ್ದಾರೆ’ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಮಕ್ಕಳ ವಿದ್ಯಾಭ್ಯಾಸಕ್ಕೆ ಬ್ಯಾಂಕ್‌ಗಳು ಸಾಲ ನೀಡಲು ಹಿಂಜರಿಯುತ್ತಿವೆ. ರಾಜ್ಯ ಸರ್ಕಾರದಿಂದ ಈ ಬಗ್ಗೆ ಯಾವುದೇ ನಿರ್ದೇಶನ ಬಂದಿಲ್ಲ ಎಂದು ಬ್ಯಾಂಕ್‌ ಅಧಿಕಾರಿಗಳು ಉತ್ತರಿಸುತ್ತಿದ್ದಾರೆ. ಎಗ್‌ರೈಸ್‌ ಅಂಗಡಿ ಸಹಿತ ಸಣ್ಣಪುಟ್ಟ ವ್ಯವಹಾರ ಮಾಡಿ ಮಕ್ಕಳ ಶಾಲಾ, ಕಾಲೇಜು ಶುಲ್ಕ ಕಟ್ಟುವಷ್ಟು ಸಂಪಾದನೆಯಾದರೂ ಮಾಡೋಣ ಅಂದರೆ ಈ ಸಮಯದ ಮಿತಿಯಿಂದ ತೊಂದರೆಯಾಗಿದೆ. ಜಿಲ್ಲಾಧಿಕಾರಿಗೆ, ಶಾಸಕರಿಗೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ’ ಎಂದು ಹೇಳಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಸಮೀರ್‌ ಹಸನ್‌, ಆದಿಲ್‌ ಖಾನ್‌, ಕರಿಯಪ‍್ಪ ಟಿ.ಎಸ್‌. ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.