ADVERTISEMENT

ಗ್ರಾ.ಪಂ. ಸದಸ್ಯರ ಬೇಡಿಕೆ ಈಡೇರಿಕೆಗೆ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 4:29 IST
Last Updated 6 ಡಿಸೆಂಬರ್ 2021, 4:29 IST
ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣೆ ಪ್ರಚಾರ ಸಭೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು. ಅಭ್ಯರ್ಥಿ ಕೆ.ಎಸ್. ನವೀನ್ ಇದ್ದರು.
ಹರಿಹರ ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಭಾನುವಾರ ನಡೆದ ಬಿಜೆಪಿ ಚುನಾವಣೆ ಪ್ರಚಾರ ಸಭೆಯನ್ನು ಸಂಸದ ಜಿ.ಎಂ.ಸಿದ್ದೇಶ್ವರ ಉದ್ಘಾಟಿಸಿದರು. ಅಭ್ಯರ್ಥಿ ಕೆ.ಎಸ್. ನವೀನ್ ಇದ್ದರು.   

ಹರಿಹರ: ‘ಚುನಾವಣೆಯಲ್ಲಿ ಗೆದ್ದು ಬೆಂಗಳೂರು ಸೇರಿಕೊಳ್ಳುವ ವ್ಯಕ್ತಿ ನಾನಲ್ಲ. ಎಲ್ಲರಿಗೂ ಲಭ್ಯನಾಗಿ ಕ್ಷೇತ್ರದ ಹಳ್ಳಿಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತೇನೆ. ಗ್ರಾಮ ಪಂಚಾಯಿತಿ ಸದಸ್ಯರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದು ಈಡೇರಿಸುವ ಜವಾಬ್ದಾರಿ ನನ್ನದು’ ಎಂದು ವಿಧಾನಪರಿಷತ್‌ ಚುನಾವಣಾ ಬಿಜೆಪಿ ಅಭ್ಯರ್ಥಿಕೆ.ಎಸ್. ನವೀನ್ ಹೇಳಿದರು.

ತಾಲ್ಲೂಕಿನ ಸಾರಥಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ನಾನು ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದೇನೆ. ಸ್ಥಳೀಯನಾದ ನನಗೆ ಮತ ನೀಡಿ. ಆಮಿಷಕ್ಕೆ ಒಳಗಾಗ ಬೇಡಿ.ಗ್ರಾಮಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದೆ. ಬೆಂಗಳೂರಿನಿಂದ ಬಂದು ಮತ ಪಡೆದು ಮರಳಿ ಅಲ್ಲಿಗೆ ಹೋಗುವವರಿಗೆ ನಿಮ್ಮ ಮತವನ್ನು ಹಾಕಬೇಡಿ. ನಿಮ್ಮ ಜೊತೆ ಇರುವ ನನಗೆ ಬೆಂಬಲಿಸಿ’ ಎಂದು ಮನವಿ ಮಾಡಿದರು.

ಸಭೆ ಉದ್ಘಾಟಿಸಿದ ಸಂಸದ ಜಿ.ಎಂ ಸಿದ್ದೇಶ್ವರ, ‘ಕೋವಿಡ್ ನಿರ್ವಹಣೆಗೆ ಹೆಚ್ಚು ಅನುದಾನ ವ್ಯಯವಾಗಿದೆ. ಪರಿಣಾಮ ಅಭಿವೃದ್ಧಿಗೆ ಅನುದಾನದ ಕೊರತೆ ಇದೆ. ಇತ್ತೀಚಿಗೆ ತೆರಿಗೆ ಹಣ ಸಂಗ್ರಹವಾಗುತ್ತಿದ್ದು, ಅಭಿವೃದ್ಧಿಗೆ ವೇಗ ಸಿಗಲಿದೆ. ಸಾರಥಿ-ಚಿಕ್ಕಬಿದರಿ ಸಂಪರ್ಕ ರಸ್ತೆ ಅಭಿವೃದ್ಧಿ ಪಡಿಸಲಾಗುವುದು’ ಎಂದರು.

ADVERTISEMENT

ಮಾಜಿ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ‘ನವೀನ್ ಎರಡು ಬಾರಿ ಅಲ್ಪ ಮತಗಳಿಂದ ಸೋತಿದ್ದಾರೆ. ಕಳೆದ ಬಾರಿ 400 ಮತಗಳು ತಿರಸ್ಕೃತವಾದವು. ಈ ಬಾರಿ ಗೊಂದಲ ಮಾಡಿಕೊಳ್ಳದೆ ಮತ ಚಲಾವಣೆ ಮಾಡಬೇಕು’ ಎಂದು ಕೋರಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್, ಮುಖಂಡರಾದ ಬಿ.ಎಸ್. ಜಗದೀಶ್, ಎಲ್.ಎನ್. ಕಲ್ಲೇಶ್, ತಾಲ್ಲೂಕು ಅಧ್ಯಕ್ಷ ಲಿಂಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಣ್ಣೇಶ್ ಐರಣಿ, ಚಂದ್ರಶೇಖರ್ ಪೂಜಾರ್, ಪ್ರಮೀಳಾ ನಲ್ಲೂರು, ರೂಪಾ ಕಾಟ್ವೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.