ಬಸವಾಪಟ್ಟಣ: ‘ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತಿರುವ ತಂಬಾಕು ಸೇವನೆಯನ್ನು ನಿಲ್ಲಿಸಿದರೆ ದೈಹಿಕ ಸ್ವಾಸ್ಥ್ಯ ರಕ್ಷಣೆ ಸಾಧ್ಯ’ ಎಂದು ಬಸವಾಪಟ್ಟಣ ಪೊಲೀಸ್ ಠಾಣಾಧಿಕಾರಿ ಇಮ್ತಿಯಾಜ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ತಂಬಾಕು ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಂಬಾಕಿನ ವಸ್ತುಗಳ ಸೇವನೆಯಿಂದ ಬಾಯಿ ಕ್ಯಾನ್ಸರ್, ಶ್ವಾಸಕೋಶ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತವೆ. ಜನರು ಅವುಗಳಿಂದ ದೂರವಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು, ತಂಬಾಕನ್ನು ತಿಂದು ಉಗುಳುವುದರಿಂದ ರೋಗಗಳು ಹೆಚ್ಚಾಗುತ್ತವೆ. ಇದನ್ನು ತಡೆಗಟ್ಟಲು ಇಂತಹ ಕೃತ್ಯ ಎಸಗುವವರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಹೇಳಿದರು.
ಸಂಪನ್ಮೂಲ ಅಧಿಕಾರಿ ದುಮ್ಮಿ ಮನು ಮಾತನಾಡಿ, ‘ಮುಖ್ಯವಾಗಿ ಯುವ ಜನ ತಂಬಾಕಿನ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳನ್ನು ಅರಿಯುವುದು ಅಗತ್ಯ’ ಎಂದರು.
ಪ್ರಾಂಶುಪಾಲ ಟಿ.ಮಂಜಣ್ಣ, ಪ್ರಾಧ್ಯಾಪಕರಾದ ಎಂ.ಆರ್.ಲೋಕೇಶ್, ಎಂ.ಡಿ.ರಾಘವೇಂದ್ರ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ದುರ್ಗಾ ಭವಾನಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.