ಹರಪನಹಳ್ಳಿ: ತಾಲ್ಲೂಕಿನ ಮಾಚಿಹಳ್ಳಿ ತಾಂಡದಲ್ಲಿ ಗೋಕಟ್ಟೆ ಬಳಿ ಆಟವಾಡುತ್ತಿದ್ದಾಗ ಕಾಲುಜಾರಿ ಬಿದ್ದು ಇಬ್ಬರು ಬಾಲಕರು ಶುಕ್ರವಾರ ಸಂಜೆ ಮೃತಪಟ್ಟಿದ್ದಾರೆ.
ಗ್ರಾಮದ ಆರ್.ಕುಬೇಂದ್ರನಾಯ್ಕ, ಸಾಕಿಬಾಯಿ ಪುತ್ರ ಗಗನ್ (9), ಪ್ರೇಮಿಬಾಯಿ ಮತ್ತು ಪರಮೇಶ್ವರನಾಯ್ಕ ಪುತ್ರ ಪೂಜಾರ ಧನರಾಜ್ (12) ಮೃತಪಟ್ಟವರು. ಅದೇ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 3 ನೇ ಮತ್ತು 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
ಶಾಲೆ ಸಮಯ ಮುಕ್ತಾಯದ ಬಳಿಕ ಮನೆಗೆ ಬಂದಿದ್ದ ಬಾಲಕರು ಗ್ರಾಮಕ್ಕೆ ಹೊಂದಿಕೊಂಡ ಗೋಕಟ್ಟೆ ಬಳಿ ಮಲವಿಸರ್ಜನೆ ಹೋಗಿದ್ದರು. ಒಬ್ಬರಿಗೊಬ್ಬರು ಮಾತನಾಡುತ್ತಾ ಗೋಕಟ್ಟೆಯ ನೀರಿನಲ್ಲಿ ಆಟವಾಡುತ್ತಿದ್ದಾಗ ಮೂವರು ಬಾಲಕರು ನೀರಿಗೆ ಇಳಿದಿದ್ದಾರೆ, ಅವರಲ್ಲಿ ಇಬ್ಬರ ಬಾಲಕರು ಆಳವಾದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ, ಒಬ್ಬ ಮೇಲೆ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗೋಕಟ್ಟೆಯ ನೀರಿನಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು, ನೀರಲ್ಲಿ ಮುಳಗುತ್ತಿದ್ದ ಬಾಲಕರನ್ನು ರಕ್ಷಿಸಲೂ ಪ್ರಯತ್ನಿಸಿದರೂ ಆದರೆ ಪ್ರಯೋಜನವಾಗಲಿಲ್ಲ. ಗ್ರಾಮಸ್ಥರು ಕೆಲವೊತ್ತಿನ ಬಳಿಕ ಬಾಲಕರ ಮೃತದೇಹವನ್ನು ಪತ್ತೆ ಹಚ್ಚಿದರು. ಮೃತದೇಹಗಳನ್ನು ತೆಲಿಗಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಯಿತು.
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಬಿಇಒ ಎಸ್.ಎಂ.ವೀರಭದ್ರಯ್ಯ, ಮಂಜುನಾಥ, ಕೊಟ್ರಗೌಡ್ರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.