ADVERTISEMENT

ಕೊರೊನಾ ಸೋಂಕಿತರಲ್ಲಿ ಇಬ್ಬರು ಗುಣಮುಖರಾಗಿ ಬಿಡುಗಡೆ

ಇನ್ನೊಬ್ಬರ ವರದಿಗಾಗಿ ಕಾಯುತ್ತಿದ್ದೇವೆ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2020, 16:37 IST
Last Updated 6 ಏಪ್ರಿಲ್ 2020, 16:37 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಟ್ಟ ಮೂವರಲ್ಲಿ ಇಬ್ಬರು ಗುಣಮುಖರಾಗಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಗಯಾನದಿಂದ ಬಂದಿದ್ದ ಚಿತ್ರದುರ್ಗ ಜಿಲ್ಲೆಯ ಮಹಿಳೆ (ಪೇಸೆಂಟ್‌ ನಂಬರ್‌ 42) ಮತ್ತು ಅವರ ಸಂಬಂಧಿ ಷಿಕಾಗೋದಿಂದ ಬಂದಿದ್ದ ಯುವಕ (ಪೇಷಬಿಡುಗಡೆಗೊಂಡವರು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

‘24 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಗಂಟಲ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಎರಡೂ ನೆಗೆಟಿವ್‌ ಎಂದು ಫಲಿತಾಂಶ ಬಂದಿದೆ. ಹಾಗಾಗಿ ಇಬ್ಬರೂ ಗುಣಮುಖರಾಗಿದ್ದಾರೆ ಎಂದು ಟ್ರೀಟಿಂಗ್‌ ಫಿಜಿಶಿಯನ್‌ ತಿಳಿಸಿದ್ದರು. ಅದನ್ನು ನಾವು ಸರ್ಕಾರದ ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದೆವು. ಕೇಂದ್ರ ಸರ್ಕಾರದ ಆರೋಗ್ಯ ಮಂತ್ರಾಲಯದ ಡಿಶ್ಚಾರ್ಜ್‌ ಪಾಲಿಸಿ ಫಾರ್‌ ಕೋವಿಡ್‌ 19 ಪಾಲಿಸಿ ಪ್ರಕಾರ ಬಿಡುಗಡೆ ಮಾಡಬಹುದು ಎಂದು ತಿಳಿಸಿದರು. ಅದರಂತೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಅವರಿಬ್ಬರನ್ನು ಜಿಎಂಐಟಿ ಗೆಸ್ಟ್‌ ಹೌಸ್‌ನಲ್ಲಿ ಇನ್‌ಸ್ಟಿಟ್ಯೂಶನಲ್‌ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಇನ್ನು 14 ದಿನ ಪ್ರತಿ ದಿನ ಅವರ ಆರೋಗ್ಯದ ಬಗ್ಗೆ ವರದಿ ನೀಡಬೇಕು. ಆಸ್ಪತ್ರೆಯಿಂದ ಬಿಡುಗಡೆಗೊಂಡ ಮುಂದಿನ ಒಂದು ವಾರ ಆರೋಗ್ಯವನ್ನು ಹೇಗೆ ನೋಡಿಕೊಳ್ಳಬೇಕು ಎಂದು (ಫಾಲೋಅಪ್‌ ಟ್ರೀಟ್‌ಮೆಂಟ್‌) ಅವರಿಗೆ ಸಲಹೆ ನೀಡಲಾಗಿದೆ ಎಂದರು.

ಇನ್ನೊಬ್ಬರ ಬಿಡುಗಡೆ ಶೀಘ್ರ: ‘ಫ್ರಾನ್ಸ್‌ನಿಂದ ಬಂದಿರುವ ಇನ್ನೊಬ್ಬ ಯುವಕನಿಗೆ ಸಂಬಂಧಿಸಿದಂತೆ ಕೂಡ 24 ಗಂಟೆಗಳಲ್ಲಿ ಎರಡು ಬಾರಿ ಗಂಟಲ ದ್ರವ ಕಳುಹಿಸಲಾಗಿದೆ. ಮೊದಲನೇಯದ್ದು ನೆಗೆಟಿವ್‌ ಎಂದು ಬಂದಿದೆ. ಎರಡನೇಯ ವರದಿಗೆ ಕಾಯುತ್ತಿದ್ದೇವೆ. ಅದೂ ನೆಗೆಟಿವ್‌ ಎಂದು ಬಂದರೆ ಆ ಯುವಕ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಮಾರ್ಚ್‌ 21ಕ್ಕೆ ಸಾವು: ಅವಲೋಕನದಲ್ಲಿದ್ದು, ಬೇರೆ ಕಾರಣಕ್ಕೆ ಮೃತಪಟ್ಟವರು ಎಂದು ಒಬ್ಬರನ್ನು ತೋರಿಸಲಾಗಿದೆ. ಅದು ಮಾರ್ಚ್‌ 21ಕ್ಕೆ ಉಸಿರಾಟದ ಸಮಸ್ಯೆಯಿಂದ ಮೃತಪಟ್ಟವರದ್ದಾಗಿದೆ. ಅವರಲ್ಲಿ ಕೊರೊನಾ ಸೋಂಕು ನೆಗೆಟಿವ್‌ ಎಂದು ಫಲಿತಾಂಶ ಬಂದಿತ್ತು ಎಂದು ಸ್ಪಷ್ಟಪಡಿಸಿದರು.

ತೃಪ್ತಿ ಬೇಡ: ‘ನಮ್ಮಲ್ಲಿ ಕೊರೊನಾ ಸಮಸ್ಯೆ ಇಲ್ಲ. ಹಾಗಾಗಿ ಏನೂ ಆಗಲ್ಲ ಎಂದು ಯಾರೂ ತೃಪ್ತಿ ಪಟ್ಟುಕೊಳ್ಳಬಾರದು. ಎಲ್ಲರೂ ನಿಯಮ ಪಾಲನೆ ಮಾಡಬೇಕು. ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತವು ಅಗತ್ಯಕ್ಕಿಂತ ಅಧಿಕ ತಯಾರಿಗಳನ್ನು ಮಾಡಿಕೊಂಡಿದೆ. ಅನಿವಾರ್ಯವಾಗಿ ಅಕ್ಕಪಕ್ಕದ ಜಿಲ್ಲೆಗಳು ದಾವಣಗೆರೆಯನ್ನು ಅವಲಂಬಿಸುವ ಪರಿಸ್ಥಿತಿ ಬಂದರೂ ಎದುರಿಸಲು ಸನ್ನದ್ಧರಾಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.