
ತ್ಯಾವಣಿಗೆ: ‘ರೈತರು ಅಡಿಕೆ ಬೆಳೆ ಮಧ್ಯೆ ಅಂತರ್ ಬೆಳೆಯಾಗಿ ಕಾಫಿ ಬೆಳೆಯುವುದರಿಂದ ಹೆಚ್ಚಿನ ಲಾಭ ಗಳಿಸಬಹುದು’ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿವಿ ಸಂಶೋಧನಾ ನಿರ್ದೇಶಕ ಬಿ.ಎಂ. ದುಷ್ಯಂತ ಕುಮಾರ್ ಹೇಳಿದರು.
ಸಮೀಪದ ಕತ್ತಲಗೆರೆ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ವತಿಯಿಂದ ಈಚೆಗೆ ರೈತರಿಗೆ ಹಮ್ಮಿಕೊಂಡಿದ್ದ ಕಾಫಿ, ಕಾಳು ಮೆಣಸು ವೈಜ್ಞಾನಿಕ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದಾವಣಗೆರೆ ಜಿಲ್ಲೆಯಲ್ಲಿ ರೈತರು ಹೆಚ್ಚಾಗಿ ಅಡಿಕೆ ಬೆಳೆಯತ್ತ ಗಮನ ಹರಿಸುತ್ತಿದ್ದು, ಈ ಬೆಳೆ ಮಧ್ಯೆ ಕಾಫಿ ಹಾಗೂ ಕಾಳುಮೆಣಸು, ಕೋಕೋ, ಬಾಳೆ ಹೀಗೆ ಅಂತರ್ ಬೆಳೆಗಳನ್ನು ಬೆಳೆಯುವುದರಿಂದ ಅಧಿಕ ಲಾಭ ಗಳಿಸಬಹುದು. ಅಲ್ಲದೇ ಅಡಿಕೆ ಬೆಳೆಗೆ ರೋಗಬಾಧೆ ಕಡಿಮೆಯಾಗುತ್ತದೆ’ ಎಂದು ತಿಳಿಸಿದರು.
‘ಒಂದು ಎಕರೆ ಅಡಕೆ ತೋಟ ಮಾಡಲು ಶೇ 30ರಷ್ಟು ಮಾತ್ರ ಜಾಗ ಬಳಕೆಯಾಗುತ್ತದೆ. ಮುಂದೊಂದು ದಿನ ಅಡಿಕೆ ಬೆಳೆ ದರ ಕುಸಿದರೆ ಅಂತರ್ ಬೆಳೆಯಾದ ಕಾಫಿ, ಕೋಕೋ, ಕಾಳುಮೆಣಸು ಬೆಳೆಗಳು ರೈತರ ನೆರವಿಗೆ ಬರಲಿವೆ’ ಎಂದು ವಿಸ್ತರಣ ಘಟಕದ ಮುಖ್ಯಸ್ಥ ಗಂಗಪ್ಪ ಗೌಡ ಬಿರಾದರ್ ತಿಳಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಕಾಫಿ, ಕಾಳುಮೆಣಸು ಸೇರಿ ಅಂದಾಜು 15,000 ಸಸಿಗಳನ್ನು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಯಿತು.
ಕತ್ತಲಗೆರೆ ಸಂಶೋಧನಾ ಕೇಂದ್ರದ ಮುಖ್ಯಸ್ಥ ಬಿ.ಎಂ. ಆನಂದ್ ಕುಮಾರ್, ವಿಸ್ತರಣಾ ಅಧಿಕಾರಿ ಗಿರಿಜೇಶ್ ಜಿ.ಕೆ, ಸಣ್ಣತಿಮ್ಮಪ್ಪ ಎಚ್.ಜಿ, ಪ್ರಕಾಶ್ ಪಾವಡಿ, ಶರಣಪ್ಪ, ಈಶ್ವರಪ್ಪ ಸುದರ್ಶನ್, ಗೀತಾ ಮಂಜುನಾಥ್ ಬಿ, ನಿರಂಜನ ಕುಮಾರ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.