ADVERTISEMENT

ಲಾಕ್‌ಡೌನ್‌ ನಡುವೆ ಅನಗತ್ಯ ಓಡಾಟ: 83 ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 15:25 IST
Last Updated 31 ಮಾರ್ಚ್ 2020, 15:25 IST
ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ನೇತೃತ್ವದಲ್ಲಿ ವಾಹನಗಳನ್ನು ಜಪ್ತಿ ಮಾಡಲಾಯಿತು.ಪ್ರಜಾವಾಣಿ ಚಿತ್ರ
ದಾವಣಗೆರೆಯ ಅಂಬೇಡ್ಕರ್ ವೃತ್ತದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ರಾಜೀವ್ ನೇತೃತ್ವದಲ್ಲಿ ವಾಹನಗಳನ್ನು ಜಪ್ತಿ ಮಾಡಲಾಯಿತು.ಪ್ರಜಾವಾಣಿ ಚಿತ್ರ   

ದಾವಣಗೆರೆ: ಅನ್ಯತ್ಯವಾಗಿ ಸಂಚರಿಸುವವರಿಗೆ ಬೆಳ್ಳಂಬೆಳಿಗ್ಗೆ ಶಾಕ್ ಕಾದಿತ್ತು. ‘ಮನೆಯಿಂದ ಯಾರೂ ಹೊರಗೆ ಬರಬೇಡಿ’ ಎಂದು ವಾರದ ಹಿಂದೆಯಷ್ಟೇ ಕೈಮುಗಿದು ಮನವಿ ಮಾಡಿದ್ದ ಪೊಲೀಸರು ಮಂಗಳವಾರ ‘ದಂಡ’ ಪ್ರಯೋಗ ಮಾಡಿದರು.

ಅಂಬೇಡ್ಕರ್ ವೃತ್ತ ಸೇರಿ ವಿವಿಧ ವೃತ್ತಗಳಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ 65 ದ್ವಿಚಕ್ರ, 17 ತ್ರಿಚಕ್ರ ಹಾಗೂ ಕಾರುಗಳನ್ನು ವಶಪಡಿಸಿಕೊಂಡ ಪೊಲೀಸರು

ವಾಹನಗಳನ್ನು ಜಪ್ತಿ ಮಾಡಿ ಬಡಾವಣೆ ಠಾಣೆಗೆ ತೆಗೆದುಕೊಂಡು ಐಎಂಎ ಕೇಸ್ ದಾಖಲಿಸಿ ಮತ್ತೆ ರಸ್ತೆಗೆ ಇಳಿಯದಂತೆ ಎಚ್ಚರಿಕೆ ನೀಡಿ ಕಳುಹಿಸಿದರು.

ADVERTISEMENT

ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ನಿಷೇಧಿಸಿದ್ದರೂ ವಾಹನ ಸಂಚಾರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಫೀಲ್ಡಿಗಿಳಿದು ಜನರಿಗೆ ಬಿಸಿ ಮುಟ್ಟಿಸಿದರು.

‘ಪ್ರಮುಖ ವೃತ್ತಗಳಲ್ಲಿ ಸಂಚರಿಸುತ್ತಿದ್ದವರಿಗೆ ಗಾಡಿ ಜಪ್ತಿ ಮಾಡಿ ಎಚ್ಚರಿಕೆ ನೀಡಿ‌ ಕಳುಹಿಸಲಾಗಿದೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಕಾನೂನು ಕ್ರಮ ಅನಿವಾರ್ಯವಾಗುತ್ತದೆ’ ಎಂದು ಎಎಸ್‌ಪಿ ರಾಜೀವ್ ತಿಳಿಸಿದರು.

ನಗರ ಡಿವೈಎಸ್‌ಪಿ ಯು.ನಾಗೇಶ್ ಐತಾಳ್, ಸರ್ಕಲ್ ಇನ್‌ಸ್ಪೆಕ್ಟರ್ ತಿಮ್ಮಣ್ಣ, ಸಿಪಿಐ ಲಕ್ಷ್ಮಣನಾಯ್ಕ, ಬಡಾವಣೆ ಠಾಣೆ ಪಿಎಸ್‌ಐ ವೀರಭದ್ರಪ್ಪ ಕುಶಲಾಪುರ ಇದ್ದರು.

ಪಾಲಿಕೆ ಸದಸ್ಯರಿಂದ ಪಾಸ್ ದುರ್ಬಳಕೆ

ಪಾಲಿಕೆ ಸದಸ್ಯರೊಬ್ಬರು ವಾಹನದ ಪಾಸ್ ದುರ್ಬಳಕೆ ಮಾಡಿಕೊಂಡಿರುವುದು ಪೊಲೀಸ್ ತಪಾಸಣೆ ವೇಳೆ ಪತ್ತೆಯಾಗಿರುವ ವಿಡಿಯೊ ಹರಿದಾಡಿದೆ.

ಪಾಲಿಕೆಯಿಂದ ಸದಸ್ಯರಿಗೆ ನೀಡಿರುವ ಪಾಸ್‌ನಲ್ಲಿ ವಾಹನದ ಸಂಖ್ಯೆ ನಮೂದಿಸಿರಲಿಲ್ಲ. ತುರ್ತು ಇರುವವರು ಓಡಾಡುವುದಕ್ಕಾಗಿ ಪೊಲೀಸ್‌ ಇಲಾಖೆಯಿಂದ ವಾಹನದ ನಂಬರ್ ನಮೂದಿಸಿ ಪಾಸ್ ವಿತರಣೆ ಮಾಡಲಾಗಿದೆ. ಆ ಪಾಸ್ ಪಡೆದುಕೊಂಡಿರುವ ಸದಸ್ಯ ತೋರಿಸಿದಾಗ ಸಿಕ್ಕಿಬಿದ್ದಿದ್ದಾರೆ.

ನಗರದ ಕೆಇಬಿ ವೃತ್ತದಲ್ಲಿ ವಾಹನಗಳ ತಪಾಸಣೆ ವೇಳೆ ಸಿಕ್ಕಿಬಿದ್ದಾಗ ಕ್ಷಮೆಯಾಚಿಸಿದ್ದಾರೆ. ಪಾಸ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.