ADVERTISEMENT

ದೇಶದ ಅಭಿವೃದ್ಧಿಗೆ ಕೌಶಲ ಬಳಸಿಕೊಳ್ಳಿ: ಕುಲಸಚಿವರಾದ ಡಾ.ಬಿ.ಕೆ. ತುಳಸಿಮಾಲ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2019, 10:37 IST
Last Updated 13 ಏಪ್ರಿಲ್ 2019, 10:37 IST
ದಾವಣಗೆರೆಯ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ 2018–19 ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ರ‍್ಯಾಂಕ್‌ ವಿಜೇತರ ಸನ್ಮಾನ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿದ್ದರು.
ದಾವಣಗೆರೆಯ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ 2018–19 ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ರ‍್ಯಾಂಕ್‌ ವಿಜೇತರ ಸನ್ಮಾನ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿದ್ದರು.   

ದಾವಣಗೆರೆ: ಮಹಿಳೆಯರು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಉನ್ನತ ಶಿಕ್ಷಣದ ಬಳಿಕ ಹೆಣ್ಣುಮಕ್ಕಳು ತಾವು ಕಲಿತ ಕೌಶಲಗಳನ್ನು ವ್ಯರ್ಥ ಮಾಡದೆ ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಬಿ.ಕೆ. ತುಳಸಿಮಾಲ ಹೇಳಿದರು.

ನಗರದ ಸುಶೀಲಮ್ಮ ಬಂಕಾಪುರದ ಚನ್ನಬಸಪ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜು (ಎಸ್‌.ಬಿ.ಸಿ) ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರ ನಡೆದ 2018–19 ನೇ ಸಾಲಿನ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಹಾಗೂ ರ‍್ಯಾಂಕ್‌ ವಿಜೇತರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಮಹಿಳೆಯರು ಜ್ಞಾನ, ಸಾಮರ್ಥ್ಯ ಇದ್ದರೂ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ. ಪದವಿ ನಂತರ ಅವರು ಸಾಧನೆಯತ್ತ ಗಮನ ಹರಿಸುವುದೇ ಇಲ್ಲ. ತಮ್ಮಲ್ಲಿನ ಕೌಶಲಗಳನ್ನು ಬಳಸಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ADVERTISEMENT

ಅಭಿವೃದ್ಧಿಯಲ್ಲಿ ಶಿಕ್ಷಣ ಬಹುಮುಖ್ಯ ಪಾತ್ರ ವಹಿಸುತ್ತಿದ್ದು, ಮಹಿಳಾ ಶಿಕ್ಷಣಕ್ಕೆ ಆದ್ಯತೆ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆ. ಆದರೂ ಉನ್ನತ ಶಿಕ್ಷಣಕ್ಕೆ ಬರುವ ಮಹಿಳೆಯರು ಸಂಖ್ಯೆ ಕಡಿಮೆ ಇದೆ. ಸಂಶೋಧನಾ ಕ್ಷೇತ್ರದಲ್ಲಿ ಮಹಿಳೆಯರ ಕೊರತೆ ಇದ್ದು, ಮಹಿಳೆಯರು ಈ ಬಗ್ಗೆ ಒಲವು ತೋರಬೇಕು ಎಂದು ಕಿವಿಮಾತು ಹೇಳಿ‌ದರು.

ದಾವಣಗೆರೆ ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಡಾ. ಬಸವರಾಜ ಬಣಕಾರ್, ‘ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಅದನ್ನು ಸಾಧಿಸಲು ಪ್ರಯತ್ನ ಪಡಬೇಕು. ಸಾಧಕರ, ಮಹಾತ್ಮರ ಜೀವನವನ್ನು ಆದರ್ಶವಾಗಿಟ್ಟುಕೊಂಡು ಸಾಧನೆ ಮಾಡಬೇಕು’ ಎಂದು ಸಲಹೆ ನೀಡಿದರು.

ವ್ಯಾಯಾಮ ಮಾಡುವುದು, ಮನಸ್ಸನ್ನು ನಿಯಂತ್ರಿಸುವುದು, ಉತ್ತಮ ಆಲೋಚನಾ ಶಕ್ತಿ ಬೆಳೆಸಿಕೊಳ್ಳುವ ಮೂಲಕ ಸಾಧನೆ ಮಾಡಬೇಕು ಎಂದು ಕತೆಗಳ ಮೂಲಕ ಮನಮುಟ್ಟುವಂತೆ ತಿಳಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಬಿಸಿ ಮಹಿಳಾ ಕಾಲೇಜಿನ ಅಧ್ಯಕ್ಷ ಬಿ.ಸಿ. ಉಮಾಪತಿ, ‘ಉನ್ನತ ಸಾಧನೆ ಮಾಡುವ ಜೊತೆ ಜೊತೆಗೆ ವಿದ್ಯಾರ್ಥಿಗಳು ಸಂಸ್ಕಾರವನ್ನೂ ಕಲಿಯಬೇಕು. ಏನಾದರೂ ಆಗು ನೀ.. ಮೊದಲು ಮಾನವನಾಗು.. ಎಂಬ ಕವಿವಾಣಿಯಂತೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

2016–17 ಹಾಗೂ 2017–18 ನೇ ಸಾಲಿನ ರ‍್ಯಾಂಕ್ ವಿಜೇತರಾದ ಗೋಪಿ ಎಚ್‌., ರೇಶ್ಮಾ ಎ.ಎಸ್‌., ಪೂಜಾ ಜಿ., ಮಧು ಪಿ., ಸಿದ್ಧಮ್ಮ ಕೆ., ಶ್ರಾವಂತಿ ಪಿ.ವಿ., ಕಾವ್ಯಾ ಎಸ್‌.ಆರ್‌., ಅಕ್ಷತಾ ಆರ್‌.ಜಿ., ಶ್ರೀಪೂಗಾ, ಬಿ., ಅರ್ಪಿತಾ ವಿ.ಟಿ., ಸಹನಾ ಎಂ.ಎ., ದಿವ್ಯಾ ಕೆ.ಎಸ್‌., ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾಕೂಟದಲ್ಲಿ ವಿಜೇತರಾದ ಧರಣಿ ವಿ., ತೇಜಸ್ವಿನಿ ವಿ., ಪವನ್‌ಕುಮಾರ, ಮಾನಸ ಯು.ಆರ್‌., ಲಕ್ಷ್ಮೀದೇವಿ ಜಿ.ಕೆ., ಸಿಂಧು ಬಿ.ಸಿ., ಹೀನಾ ಎಂ., ಅವರಿಗೆ ಬಹುಮಾನ ವಿತರಿಸಲಾಯಿತು.

ವಿನಾಯಕ ಎಜುಕೇಷನ್‌ ಟ್ರಸ್ಟ್‌ನ ಕಾರ್ಯದರ್ಶಿ, ಎಂ.ಎಚ್‌. ನಿಜಾನಂದ, ಟ್ರಸ್ಟಿ ಎಸ್‌.ಕೆ. ವೀರಣ್ಣ ಇದ್ದರು. ಪ್ರಾಚಾರ್ಯ ಡಾ. ಷಣ್ಮುಖ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತ ಲಕ್ಷ್ಮೀ ಸ್ವಾಗತಿಸಿದರು. ಶಿಲ್ಪಾ ಬಿ. ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.