ADVERTISEMENT

ಭಾರತದ ಹೆಮ್ಮೆಯಾದ ಖಾದಿ ಬಳಸಿ: ಆರ್. ವಿನೋತ್ ಪ್ರಿಯಾ

ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 4:36 IST
Last Updated 25 ಫೆಬ್ರುವರಿ 2022, 4:36 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ‘ಖಾದಿ ಉತ್ಸವ 2022’ದಲ್ಲಿ ಬಟ್ಟೆ ಖರೀದಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿರತರಾದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕಿ ವಿನೋತ್‌ಪ್ರಿಯಾ, ವಿವಿಧ ಅಧಿಕಾರಿಗಳು ಇದ್ದರು. –ಪ್ರಜಾವಾಣಿ ಚಿತ್ರ
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ‘ಖಾದಿ ಉತ್ಸವ 2022’ದಲ್ಲಿ ಬಟ್ಟೆ ಖರೀದಿಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿರತರಾದರು. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕಿ ವಿನೋತ್‌ಪ್ರಿಯಾ, ವಿವಿಧ ಅಧಿಕಾರಿಗಳು ಇದ್ದರು. –ಪ್ರಜಾವಾಣಿ ಚಿತ್ರ   

ದಾವಣಗೆರೆ: ದೇಶದ ಹೆಮ್ಮೆಯ ಪ್ರತೀಕವಾದ ಖಾದಿಯನ್ನು ಖರೀದಿಸಿ, ಬಳಸುವ ಮೀಲಕ ಪ್ರೋತ್ಸಾಹಿಸಬೇಕು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕಿ ಆರ್. ವಿನೋತ್ ಪ್ರಿಯಾ ತಿಳಿಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಗುರುವಾರ ರಾಜ್ಯಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಮಾರಾಟ ಹಾಗೂ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖಾದಿ ಬಟ್ಟೆಗಳ ತಯಾರಿಕೆಗೆ ಸಂಬಂದಿಸಿದಂತೆ ಅನೇಕ ಯೋಜನೆಗಳನ್ನು ಇಲಾಖೆ ತಂದಿದೆ. ಖಾದಿ ಉತ್ಪನ್ನಗಳನ್ನು ಪರಿಚಯಿಸಲು ಹಾಗೂ ಮಾರಾಟ ಮಾಡಲು ಇಲಾಖೆಯಿಂದ ಜಿಲ್ಲೆ ಹಾಗೂ ರಾಷ್ಟ್ರಮಟ್ಟದಲ್ಲಿ ಇಂತಹ ಪ್ರದರ್ಶನ ಮಳಿಗೆಗಳನ್ನು ಸ್ಥಾಪಿಸಿ ಪ್ರೋತ್ಸಾಹಿಸಲಾಗುತ್ತದೆ. ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯದೊರೆಯುತ್ತದೆ. ಯುವಕರು ಖಾದಿ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಜೀವನ ಸಾಗಿಸುವ ಜೊತೆಗೆ ಹತ್ತಾರು ಮಂದಿಗೆ ಉದ್ಯೋಗವನ್ನೂ ನೀಡಬಹುದು ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ದಾವಣಗೆರೆಯು ರಾಜ್ಯದ ಹೃದಯ ಭಾಗದಲ್ಲಿದೆ. ಇಲ್ಲಿ ಎಲ್ಲರೂ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತಾರೆ. ಖಾದಿ ಉತ್ಸವ ಕೂಡ ಉತ್ತಮ ವ್ಯವಹಾರ ಕಾಣಲಿ’ ಎಂದು ಹಾರೈಸಿದರು.

ಖಾದಿ ಕ್ಷೇತ್ರದಲ್ಲಿ 5 ಲಕ್ಷ ಜನ ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ₹ 1,700 ಕೋಟಿ ವ್ಯವಹಾರ ನಡೆಯುತ್ತಿದೆ.ರಾಜ್ಯದಲ್ಲಿ ₹ 350 ಕೋಟಿ ವ್ಯವಹಾರ ನಡೆಯುತ್ತಿದೆ. 30 ಸಾವಿರ ಕುಶಲಕರ್ಮಿಗಳು ಕೆಲಸ ಮಾಡುತ್ತಿದ್ದಾರೆ. ಇದು ಈ ಕ್ಷೇತ್ರದ ಮಹತ್ವವನ್ನು ಸಾರುತ್ತಿದೆ ಎಂದರು.

ಉದ್ಯೋಗಕ್ಕಾಗಿ ಅಲೆಯುವ ಯುವಕರು ಇಂತಹ ಮೇಳಗಳಿಗೆ ಬಂದು ಸ್ವ ಉದ್ಯೋಗದ ಬಗ್ಗೆ ತಿಳಿದುಕೊಳ್ಳಬೇಕು. ಸಂಬಳಕ್ಕಾಗಿ ಕೈ ಚಾಚುವ ಬದಲು ತಾವೇ ಉದ್ಯೋಗದಾತರಾಗುವುದನ್ನು ಇಲ್ಲಿ ಕಂಡು ಅದರಿಂದ ಪ್ರೇರಿತರಾಗಬೇಕು ಎಂದು ತಿಳಿಸಿದರು.

ರಾಜ್ಯ ಖಾತಿ ಮತ್ತ ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಿ.ವಿ. ನಾಗರಾಜ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ರಾಜ್ಯ ನಿರ್ದೇಶಕ ಡಾ.ಇ. ಮೋಹನ್ ರಾವ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಿ.ಆನಂದ್, ಲೀಡ್ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಶುಶೃತ್ ಡಿ. ಶಾಸ್ತ್ರಿ, ಸೊಸೈಟಿ ಸಂಘದ ನಿರ್ದೇಶಕ ರಾಮಪ್ಪ, ಕೆವಿಐಸಿಯ ಬಾಲಕೃಷ್ಣ ಇದ್ದರು. ಮೋತಿ ವೀರಪ್ಪ ಕಾಲೇಜು ಉಪನ್ಯಾಸಕ ಎಂ.ಡಿ.ನಾಗರಾಳ ನಿರೂಪಿಸಿದರು. ರಂಗನಾಥ ಸ್ವಾಮಿ ವಂದಿಸಿದರು.

ಮಾರ್ಚ್‌ 10ರವರೆಗೆ ಖಾದಿ ಮತ್ತು ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. 43 ಖಾದಿ ಮಳಿಗೆಗಳು ಹಾಗೂ ಅಡಿಕೆ, ಚರ್ಮ, ಮಣ್ಣು, ಬಿದಿರು ಮುಂತಾದ ಉತ್ಪನ್ನಗಳ 33 ಮಳಿಗೆಗಳು ಈ ಖಾದಿ ಉತ್ಸವದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.