ADVERTISEMENT

ಪ್ರತಿಭೆಗಳು ಪಲಾಯನ ಮಾಡದೇ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲಿ: ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2023, 15:57 IST
Last Updated 1 ಡಿಸೆಂಬರ್ 2023, 15:57 IST
ಹೊನ್ನಾಳಿಯ ಶ್ರೀಸಾಯಿ ಗುರುಕುಲ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ವಚನಾನಂದ ಸ್ವಾಮೀಜಿ ಉದ್ಘಾಟಿಸಿದರು 
ಹೊನ್ನಾಳಿಯ ಶ್ರೀಸಾಯಿ ಗುರುಕುಲ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ವಚನಾನಂದ ಸ್ವಾಮೀಜಿ ಉದ್ಘಾಟಿಸಿದರು    

ಹೊನ್ನಾಳಿ: ‘ನಮ್ಮ ನಡುವಣ ಪ್ರತಿಭೆಗಳು ವಿದೇಶಗಳಿಗೆ ಪಲಾಯನ ಮಾಡದೇ, ನಮ್ಮ ದೇಶದ ಅಭಿವೃದ್ಧಿಗಾಗಿ ಏನಾದರೂ ಕೊಡುಗೆ ನೀಡುವಂತಾಗಬೇಕು’ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಎಚ್. ಕಡದಕಟ್ಟೆಯ ಶ್ರೀ ಸಾಯಿ ಗುರುಕುಲ ವಸತಿಯುತ ಸಿಬಿಎಸ್‍ಇ ಶಾಲಾ-ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು.

‘ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಜ್ಯೋತಿ ಪ್ರಧಾನ ಮತ್ತು ಅಕ್ಷತೆ ಹಾಕುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅನುಕರಣೀಯ. ತಾನು ಗೆಲ್ಲುವುದರ ಜೊತೆಗೆ ಇತರರನ್ನೂ ಗೆಲ್ಲಿಸಬೇಕೆಂಬ ಮನೋಭಾವ ಮಕ್ಕಳಲ್ಲಿ ಒಡಮೂಡಬೇಕು. ಈ ದಿಸೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಕೆಲಸ ಮಾಡಬೇಕು. ಇದರಿಂದ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ’ ಎಂದು ತಿಳಿಸಿದರು.

ADVERTISEMENT

‘ಯೋಗ, ಧ್ಯಾನ, ಪ್ರಾಣಾಯಾಮವನ್ನು ನಿಯಮಿತವಾಗಿ ಮಾಡುವುದರಿಂದ ರೋಗಮುಕ್ತ ಜೀವನ ನಡೆಸಬಹುದು. ದೇಶಿಯ ಆಹಾರವನ್ನು ಸೇವಿಸುವುದರ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರೂ ಬಿಡುವು ಮಾಡಿಕೊಂಡು ಬೆಳಿಗ್ಗೆ ಹಾಗೂ ಸಂಜೆ ಕಾಲ್ನಡಿಗೆ, ಯೋಗಾಸನ, ಧ್ಯಾನ ಮಾಡುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನಮ್ಮ ಸಂಸ್ಥೆಯಲ್ಲಿ ವೀರ ಯೋಧರ ನಿಧಿ ಸ್ಥಾಪನೆ ಮಾಡಿದ್ದೇವೆ. ಇದನ್ನು ಸೈನಿಕರ ಕಲ್ಯಾಣಕ್ಕೆ ವಿನಿಯೋಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಪಾಲಕರು ತಮ್ಮ ಮಕ್ಕಳ ಜನ್ಮದಿನದಂದು ಸಿಹಿ ಹಂಚುವ ಬದಲು ಆ ಹಣವನ್ನು ನಿಧಿಗೆ ನೀಡಬೇಕು’ ಎಂದು ಸಾಯಿ ಗುರುಕುಲ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಶಾಸಕ ಡಿ.ಜಿ.ಶಾಂತನಗೌಡ ಮನವಿ ಮಾಡಿದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರಾಂಶುಪಾಲ ಎಚ್.ಎಂ.ದರ್ಶನ್ ವಾರ್ಷಿಕ ವರದಿ ಮಂಡಿಸಿದರು. ಎ.ಜಿ.ಹರೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಉಪಾಧ್ಯಕ್ಷರಾದ ಶಂಕ್ರಪ್ಪಗೌಡ, ಕಾರ್ಯದರ್ಶಿ ಸೌಮ್ಯ ಪ್ರದೀಪ್, ಸಹಕಾರ್ಯದರ್ಶಿ ಎಚ್.ಬಿ.ಅರುಣ್, ಖಜಾಂಚಿ ಡಿ.ಜಿ.ಸೋಮಪ್ಪ, ಟ್ರಸ್ಟಿಗಳಾದ ಗೌರಮ್ಮ, ವಾಣಿ ಸುರೇಂದ್ರಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.