ADVERTISEMENT

ದಾವಣಗೆರೆ| ವಾಹನ ಡಿಕ್ಕಿ: ಚಿರತೆ ಸಾವು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 5:46 IST
Last Updated 9 ಫೆಬ್ರುವರಿ 2023, 5:46 IST
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತಪಟ್ಟ ಚಿರತೆ
ರಾಷ್ಟ್ರೀಯ ಹೆದ್ದಾರಿಯಲ್ಲಿ ಮೃತಪಟ್ಟ ಚಿರತೆ   

ದಾವಣಗೆರೆ: ಸಮೀಪದ ಆನಗೋಡು ಕಿರು ಪ್ರಾಣಿ ಸಂಗ್ರಹಾಲಯದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ಮಧ್ಯರಾತ್ರಿ ಯಾವುದೋ ವಾಹನ ಡಿಕ್ಕಿ ಹೊಡೆದು ಎರಡು ವರ್ಷದ ಗಂಡು ಚಿರತೆಯೊಂದು ಮೃತಪಟ್ಟಿದೆ.

‘ಆನಗೋಡು ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದ ಆ ಚಿರತೆ ಹೆದ್ದಾರಿಯ ಇನ್ನೊಂದು ಬದಿಯಲ್ಲಿರುವ ಕಾಡಿಗೆ ಹೊರಟಿತ್ತು. ಆ ಸಂದರ್ಭದಲ್ಲಿ ವೇಗವಾಗಿ ಬಂದ ಯಾವುದೋ ವಾಹನ ಡಿಕ್ಕಿ ಹೊಡೆದಿದ್ದರಿಂದ ಅದು ಸ್ಥಳದಲ್ಲೇ ಅಸುನೀಗಿದೆ’ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಷಯ ತಿಳಿದ ಸಹಾಯಕ ಅರಣ್ಯ ಸಂರಕ್ಷಣಾಕಾರಿ ಮೋಹನ ಕುಮಾರ್ ಮತ್ತು ಅವರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಮೃತ ಚಿರತೆಯನ್ನು ಕಿರು ಪ್ರಾಣಿ ಸಂಗ್ರಹಾಲಯದ ಸಮೀಪ ತೆಗೆದುಕೊಂಡು ಹೋದರು.

ADVERTISEMENT

‘ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ ಚಿರತೆಯ ಅಂತ್ಯಕ್ರಿಯೆ ಮಾಡಲು ನ್ಯಾಯಾಲಯದಿಂದ ಅನುಮತಿ ಕೇಳಿದ್ದು ಅದರಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಕಾರಿ ಜಗನ್ನಾಥ್
ತಿಳಿಸಿದರು.

‘ಅರಣ್ಯ ಪ್ರದೇಶದಲ್ಲಿ ಎರಡು ಚಿರತೆಗಳು ಕಂಡು ಬಂದಿದ್ದವು. ಮೃತಪಟ್ಟಿರುವುದು ಗಂಡು ಚಿರತೆಯಾಗಿದ್ದು, ಅದರ ತಾಯಿ ಕಾಡಿನಲ್ಲಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.