ಸಿರಿಗೆರೆ: ಸಮೀಪದ ವಿಜಾಪುರ ಗ್ರಾಮದಲ್ಲಿ ಅಂದಾಜು 50 ವರ್ಷಗಳ ಹಿಂದೆ ನಿರ್ಮಾಣಗೊಂಡಿದ್ದ ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕಿ (ಎ.ಎನ್.ಎಂ) ಕಟ್ಟಡ ವಿಷಜಂತುಗಳ ಆವಾಸಸ್ಥಾನವಾಗಿದ್ದು, ಸುತ್ತಮುತ್ತಲ ನಿವಾಸಿಗಳಿಗೆ ಆತಂಕ ಮೂಡಿಸಿದೆ.
ಸುತ್ತಲಿನ ಹತ್ತಾರು ಗ್ರಾಮಗಳ ಜನರಿಗೆ ಔಷಧ ಸೇರಿ ಇತರ ಸೌಲಭ್ಯ ಒದಗಿಸಲು ಇಲಾಖೆಯು ಈ ಕಟ್ಟಡವನ್ನು ನಿರ್ಮಿಸಿತ್ತು. ಅಲ್ಲಿ ವಾಸ ಇರುತ್ತಿದ್ದ ಆರೋಗ್ಯ ಸಹಾಯಕಿಯರು ಚಿಕಿತ್ಸೆ ಕೋರಿ ಬರುವ ರೋಗಿಗಳಿಗೆ ಔಷಧ ನೀಡುತ್ತಿದ್ದರು.
ಈಗ ಕೆಲವು ವರ್ಷಗಳಿಂದ ಇಲಾಖೆಯು ಈ ಕಟ್ಟಡದ ದುರಸ್ತಿ ಹಾಗೂ ಸ್ವಚ್ಛತೆ ಕಡೆ ಗಮನ ನೀಡಿಲ್ಲ. ಮುರಿದು ಬಿದ್ದಿರುವ ಬಾಗಿಲು, ಕಿಟಕಿಗಳು, ಸೋರುವ ತಾರಸಿ, ಸುಣ್ಣ– ಬಣ್ಣ ಕಾಣದೆ ನಿಸ್ತೇಜವಾಗಿರುವ ಗೋಡೆಗಳು, ಆವರಣದ ತುಂಬೆಲ್ಲಾ ಬೆಳೆದಿರುವ ಗಿಡಗಂಟಿಗಳು, ತಿಪ್ಪೆಯಂತೆ ಸುರಿದಿರುವ ಕಸ ಕಟ್ಟಡದ ದುಃಸ್ಥಿತಿಯನ್ನು ಸಾರುತ್ತವೆ.
ಈ ಗ್ರಾಮಕ್ಕೆ ಇಲಾಖೆಯು ಒಬ್ಬ ಆರೋಗ್ಯ ಸಹಾಯಕಿಯನ್ನು ನೇಮಿಸಿದೆ. ಪಾಳು ಬಿದ್ದಿರುವ ಕಟ್ಟಡದಲ್ಲಿ ವಾಸಿಸಲಾಗದೆ ಗ್ರಾಮದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುವ ಸ್ಥಿತಿ ಒದಗಿದೆ. ಕಟ್ಟಡ ದುರಸ್ತಿಗೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ನಾಗರಿಕರಿಗೆ ಆರೋಗ್ಯ ಇಲಾಖೆಯಿಂದ ಹಲವು ಸೌಲಭ್ಯಗಳನ್ನು ನೀಡಲು ಮುಂದಾಗಿರುವ ಸರ್ಕಾರ ಗ್ರಾಮಾಂತರ ಮಟ್ಟದಲ್ಲಿನ ಜನರ ಆರೋಗ್ಯವನ್ನು ಈ ರೀತಿ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಕೂಡಲೇ ಈ ಕಟ್ಟಡ ದುರಸ್ತಿ ಮಾಡಬೇಕು. ಇಲ್ಲವೇ ತೆರವುಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಕೋರಿದ್ದಾರೆ.
ಗ್ರಾಮದ ಆರೋಗ್ಯ ಸಹಾಯಕಿಯರ ಕಟ್ಟಡ ಶೋಚನೀಯ ಸ್ಥಿತಿಯಲ್ಲಿದೆ. ಗ್ರಾಮದ ಮಧ್ಯೆಯೇ ಈ ಕಟ್ಟಡ ಇದ್ದು ಪಾಳು ಬಿದ್ದುದರಿಂದ ಭೂತ ಬಂಗಲೆಯಂತಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.-ಎ.ಎಸ್. ಸುನಿಲ್ ಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ
ವಿಜಾಪುರದಲ್ಲಿನ ಎಎನ್ಎಂ ಕಟ್ಟಡ ಶಿಥಿಲಗೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಹೊಸ ಕಟ್ಟಡ ನಿರ್ಮಿಸಲು ಪ್ರಸ್ತಾವ ಸಿದ್ಧಗೊಳಿಸಿ ಮೇಲಧಿಕಾರಿಗಳಿಗೆ ಸಲ್ಲಿಸಲಾಗುವುದು.-ಡಾ.ಬಿ.ವಿ.ಗಿರೀಶ್, ತಾಲ್ಲೂಕು ಆರೋಗ್ಯ ಅಧಿಕಾರಿಗಳು ಚಿತ್ರದುರ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.