ದಾವಣಗೆರೆ: ಸಮಾಳದ (ವೀರಗಾಸೆ ವಾದ್ಯ) ನಿನಾದಕ್ಕೆ ತಕ್ಕಂತೆ ನರ್ತಿಸುತ್ತಿದ್ದ ನಂದಿಧ್ವಜ, ಬಣ್ಣದ ವೇಷದೊಂದಿಗೆ ಹೆಜ್ಜೆ ಹಾಕುತ್ತಿದ್ದ ಕೀಲು ಕುದುರೆ, ನಾಸಿಕ್ ಡೋಲಿನ ಅಬ್ಬರಕ್ಕೆ ಹುಚ್ಚೆದ್ದು ಕುಣಿಯುವ ಯುವಪಡೆಯನ್ನು ಬಂಬೂಬಜಾರು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಸೇರಿದ್ದ ಜನರು ಕಣ್ತುಂಬಿಕೊಂಡರು.
ವಿಜಯದಶಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಗುರುವಾರ ಹಮ್ಮಿಕೊಂಡಿದ್ದ ಶೋಭಾಯಾತ್ರೆ ದಸರಾ ಮಹೋತ್ಸವದ ಜಂಬೂಸವಾರಿಯನ್ನು ನೆನಪಿಸಿತು. ಹತ್ತಾರು ಕಲಾತಂಡ, ಸ್ತಬ್ಧಚಿತ್ರಗಳೊಂದಿಗೆ ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿದರು.
ನಗರದ ಬೇತೂರು ರಸ್ತೆಯ ವೆಂಕಟೇಶ್ವರ ದೇಗುಲದ ಆವರಣದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ದೊರೆಯಿತು. ವಿಶೇಷ ಅಲಂಕೃತ ಟ್ರ್ಯಾಕ್ಟರ್ನಲ್ಲಿ ಆಸೀನವಾಗಿದ್ದ ಮೂರ್ತಿಗೆ ಜನರು ಭಕ್ತಿ ಸಮರ್ಪಿಸಿದರು. ಮಧ್ಯಾಹ್ನ 12.15ಕ್ಕೆ ಆರಂಭವಾದ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಜನರು ಧಾವಿಸಿದ್ದರು.
ವೆಂಕಟೇಶ್ವರ ವೃತ್ತದಿಂದ ಹೊರಟ ಶೋಭಾಯಾತ್ರೆಯು ಬಂಬೂಬಜಾರ್, ಜಗಳೂರು ಬಸ್ ನಿಲ್ದಾಣ, ಹಾಸಬಾವಿ ವೃತ್ತ, ಚೌಕಿಪೇಟೆ, ಹೊಂಡದ ವೃತ್ತದ ಮೂಲಕ ಪಿ.ಬಿ. ರಸ್ತೆಯಲ್ಲಿ ಸಾಗಿ ಹೈಸ್ಕೂಲ್ ಮೈದಾನದ ಬೀರಲಿಂಗೇಶ್ವರ ದೇವಾಲಯ ತಲುಪಿತು. ಶೋಭಾಯಾತ್ರೆಯಲ್ಲಿ ಹಿಂದುತ್ವದ ಪ್ರತಿಪಾದಕರಾದ ಗೋಲ್ವಾಲ್ಕರ್, ಹೆಡಗೇವಾರ್, ವೀರ ಸಾವರ್ಕರ್ ಚಿತ್ರಗಳು ಗಮನ ಸೆಳೆದವು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಬಸವಣ್ಣ, ಅಕ್ಕಮಹಾದೇವಿ, ಭಕ್ತ ಕನಕದಾಸ, ಕಿತ್ತೂರು ರಾಣಿ ಚನ್ನಮ್ಮ, ಬಾಲಗಂಗಾಧರನಾಥ ಸ್ವಾಮೀಜಿ, ಕೆಂಪೇಗೌಡ, ಶಿವ ಪಾರ್ವತಿ, ಸಿದ್ದೇಶ್ವರ ಸ್ವಾಮೀಜಿ, ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ, ಮಹರ್ಷಿ ವಾಲ್ಮೀಕಿ, ವೀರಮದಕರಿ ನಾಯಕರ ಸ್ತಬ್ಧಚಿತ್ರಗಳು ಶೋಭಾಯಾತ್ರೆಯಲ್ಲಿ ಸಾಗಿದವು. ಕಿತ್ತೂರು ರಾಣಿ ಚನ್ನಮ್ಮ, ಶಿವಾಜಿ ವೇಷಧರಿಸಿದ ಮಕ್ಕಳು ಹೆಜ್ಜೆಹಾಕಿದರು.
ವೀರಗಾಸೆ, ಡೊಳ್ಳು ಕುಣಿತ, ಸಾಂಪ್ರದಾಯಿಕ ವಾದ್ಯ, ನಾಸಿಕ್ ಡೋಲ್ ಸೇರಿದಂತೆ ಹಲವು ಕಲಾತಂಡಗಳು ಶೋಭಾಯಾತ್ರೆಯಲ್ಲಿದ್ದವು. ‘ಜೈ ಶ್ರೀರಾಮ್’, ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಮೊಳಗಿದವು. ಭಗವಾಧ್ವಜಗಳು ಎಲ್ಲೆಡೆ ರಾರಾಜಿಸಿದವು. ಮೆರವಣಿಗೆಯ ಅಲ್ಲಲ್ಲಿ ನೀರು, ಮಜ್ಜಿಗೆ ಹಾಗೂ ತಂಪು ಪಾನೀಯವನ್ನು ಭಕ್ತರಿಗೆ ವಿತರಿಸಲಾಯಿತು.
ಶೋಭಾಯಾತ್ರೆಯಲ್ಲಿದ್ದ ಎರಡು ಡಿ.ಜೆ. ಯುವಕರ ಪ್ರಮುಖ ಆಕರ್ಷಣೆಯಾಗಿದ್ದವು. ವೆಂಕಟೇಶ್ವರ ವೃತ್ತದಲ್ಲಿ ಕಿವಿಡಚಿಕ್ಕುವ ಡಿ.ಜೆ ಸದ್ದಿಗೆ ಯುವಕರು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಕೊಂಚ ಮುಂದಕ್ಕೆ ಸಾಗುತ್ತಿದ್ದಂತೆ ತಾಂತ್ರಿಕ ಸಮಸ್ಯೆ ಎದುರಾಗಿ ಡಿ.ಜೆ. ಸದ್ದು ನಿಂತಿತು. ಕೆಲ ಹೊತ್ತಿನ ಬಳಿಕ ಆರಂಭವಾದ ಡಿ.ಜೆ. ಹಾಡಿಗೆ ಯುವಸಮೂಹ ಭರ್ಜರಿ ನೃತ್ಯ ಮಾಡಿತು.
ಶೋಭಾಯಾತ್ರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. 200ಕ್ಕೂ ಅಧಿಕ ಸಿ.ಸಿ.ಟಿವಿ ಕ್ಯಾಮೆರಾ, ಡ್ರೋನ್ ಕ್ಯಾಮೆರೆ ನಿಗಾ ಇಟ್ಟಿದ್ದವು. ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಕೆಎಸ್ಆರ್ಪಿ), ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್) ತುಕಡಿಗಳನ್ನು ನಿಯೋಜಿಸಲಾಗಿತ್ತು.
ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿ ಅಧ್ಯಕ್ಷ ಎಂ. ಆನಂದ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್. ರಾಜಶೇಖರ್, ಪಾಲಿಕೆ ಮಾಜಿ ಸದಸ್ಯ ಎ. ನಾಗರಾಜ್, ಬಿಜೆಪಿ ಮುಖಂಡರಾದ ಜಿ.ಎಸ್. ಅನಿತ್ ಕುಮಾರ್, ಎಸ್.ಟಿ. ವೀರೇಶ್, ಶ್ರೀನಿವಾಸ ದಾಸಕರಿಯಪ್ಪ, ಯಶವಂತರಾವ್ ಜಾಧವ್, ಬಿ.ಜೆ. ಅಜಯ ಕುಮಾರ್, ಲೋಕಿಕೆರೆ ನಾಗರಾಜ್ ಪಾಲ್ಗೊಂಡಿದ್ದರು.
‘ವೈರಿಗಳಂತೆ ಕಾಣುವ ಸಚಿವ’
‘ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಅಲ್ಪಸಂಖ್ಯಾತರ ಬಗ್ಗೆ ಮೃಧು ಧೋರಣೆ ಹೊಂದಿದ್ದಾರೆ. ಹಿಂದೂಗಳನ್ನು ವೈರಿಗಳಂತೆ ಕಾಣುತ್ತಿದ್ದಾರೆ’ ಎಂದು ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು. ‘ಕಲ್ಲುತೂರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬದಲು ವಿಶ್ವ ಹಿಂದೂ ಪರಿಷತ್ ಮುಖಂಡ ಸತೀಶ್ ಪೂಜಾರಿ ಗಡಿಪಾರು ಮಾಡಿದ್ದಾರೆ. ಒಬ್ಬ ಹೋರಾಟಗಾರನನ್ನು ಗಡಿಪಾರು ಮಾಡಿದರೆ ನೂರಾರು ಜನರು ಹುಟ್ಟಿಕೊಳ್ಳುತ್ತಾರೆ. ಈ ಗಡಿಪಾರು ಆದೇಶವನ್ನು ಕೂಡಲೇ ಹಿಂಪಡೆಯಬೇಕು’ ಎಂದು ಸುದ್ದಿಗಾರರ ಬಳಿ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.