ಹೊನ್ನಾಳಿ: ಬಿಳಿ ಪಂಚೆ, ಬಿಳಿ ಅಂಗಿ, ಮತ್ತು ಬಿಳಿ ಟೋಪಿ ಧರಿಸಿ ನಿಂತ ಅಧಿಕಾರಿಗಳು. ಯಾವುದೋ ಮದುವೆ ಸಮಾರಂಭದಂತೆ ಕಂಡ ನೋಟ. ಇದು ಪಟ್ಟಣದಲ್ಲಿ ಗುರುವಾರ ಕಂಡ ದೃಶ್ಯ. ಮತದಾರರಲ್ಲಿ ಜಾಗೃತಿ ಮೂಡಿಸಲು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಶ್ವೇತ ವಸ್ತ್ರಧರಿಸಿ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು.
ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಘವೇಂದ್ರ ನಿರ್ದೇಶನದಲ್ಲಿ ಅಧಿಕಾರಿಗಳು, ನೌಕರರು ಕಚೇರಿಯಿಂದ ಮೆರವಣಿಗೆ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಜಾಗೃತಿ ಮೂಡಿಸಿದರು.
ಅಭಿವ್ಯಕ್ತಿ ಕಲಾ ತಂಡದವರು ಬೀದಿ ನಾಟಕ ನಡೆಸಿಕೊಟ್ಟರು. ಕಲಾವಿದರಾದ ಮಲ್ಲಿಕಾರ್ಜುನ್, ಕತ್ತಿಗೆ ನಾಗರಾಜ್ ಚುನಾವಣೆ, ಮತದಾನ ಕುರಿತು ನಾಟಕ ಪ್ರದರ್ಶಿಸಿದರು.
ಸಹಾಯಕ ಚುನಾವಣಾಧಿಕಾರಿ ಸುರೇಶ ರೆಡ್ಡಿ, ತಹಶೀಲ್ದಾರ್ ಮಲ್ಲಿಕಾರ್ಜುನ್, ನ್ಯಾಮತಿ ತಹಶೀಲ್ದಾರ್ ರೇಣುಕಾ, ವ್ಯವಸ್ಥಾಪಕ ಮಹ್ಮದ್ ರಫಿ ಸೇರಿ ತಾಲ್ಲೂಕಿನ ಎಲ್ಲಾ ಪಿಡಿಒ ಹಾಗೂ ಕಾರ್ಯದರ್ಶಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.