ಮಾಯಕೊಂಡ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿಗೆ ಒತ್ತಾಯಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆ ಹೆಬ್ಬಾಳಿನಲ್ಲಿ ವಾಸ್ತವ್ಯ ಮುಗಿಸಿ ಭಾನುವಾರ ಬೆಳಿಗ್ಗೆ ಚಿತ್ರದುರ್ಗ ಜಿಲ್ಲೆಯತ್ತ ಹೊರಟಿತು.
ಸಮೀಪದ ಆನಗೋಡಿನಿಂದ ಶನಿವಾರ ಬೀಳ್ಕೊಟ್ಟ ಪಾದಯಾತ್ರೆಗೆ ಹೆಬ್ಬಾಳಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಹೆಬ್ಬಾಳಿಗೆ ಬಂದ ಪಾದಯಾತ್ರೆಯನ್ನು ವಿರಕ್ತ ಮಠದ ಮಹಾಂತರುದ್ರ ಸ್ವಾಮೀಜಿ ಮತ್ತು ಭಕ್ತರು ಸ್ವಾಗತಿಸಿದರು. ಡೊಳ್ಳು ಕುಣಿತ, ನಂದಿ ಧ್ವಜ, ಸಮಾಳದ ಕಲಾ ತಂಡಗಳೊಂದಿಗೆ ಬರ ಮಾಡಿಕೊಳ್ಳಲಾಯಿತು.
ಕೂಡಲ ಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರ ಪೀಠದ ವಚನಾನಂದ ಶ್ರೀಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಪಾದಯಾತ್ರೆಗೆ ಮೆರುಗು ತಂದಿತು.
ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್. ಎಂ. ಎಲ್. ತಿಪ್ಪೇಸ್ವಾಮಿ, ನೀರ್ಥಡಿ ಮಂಜುನಾಥ, ಬಸವರಾಜ್ ಮತ್ತು ಸುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಹೊರಟ್ಟಿ ಹೇಳಿಕೆ ಖಂಡನೀಯ: ಬಸವರಾಜ ಹೊರಟ್ಟಿ ಅವರು ಪಾದಯಾತ್ರೆ ಕುರಿತು ಬೇಜವಾಬ್ದಾರಿ ಹೇಳಿಕೆ ನೀಡುವುದು ಖಂಡನೀಯ ಎಂದು ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶೆಪ್ಪನವರ್ ದೂರಿದರು.
‘ಮೀಸಲಾತಿ ವಂಚಿತ ಸಮಾಜದ ನೋವು ನೀಗಲು ಪಾದಯಾತ್ರೆ ನಡೆಸುತ್ತಿದ್ದೇವೆ.ಕೆಲ ಲಿಂಗಾಯತ ಸಮುದಾಯಗಳು ಮೀಸಲಾತಿ ಪಡೆದು ಹೊಟ್ಟೆ ತುಂಬಿದವರಾಗಿದ್ದಾರೆ’ ಎಂದು ಹೇಳಿಕೆ ನೀಡುವುದು ಹೋರಾಟವನ್ನು ದಿಕ್ಕು ತಪ್ಪಿಸುವ ತಂತ್ರ ಎಂದರು .
ಮುಖ್ಯಮಂತ್ರಿ ಕುಲಶಾಸ್ತ್ರೀಯ ಅಧ್ಯಯನದ ನೆಪ ಬಿಟ್ಟು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಬೇಕು ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.