ದಾವಣಗೆರೆ: ಶಾಂತಿ, ನೆಮ್ಮದಿ ಹಾಳು ಮಾಡುವ ಭೋಗದ ಜೀವನದಿಂದ ಹೊರಬರಲು ಯೋಗ ಅಗತ್ಯ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಶಿವಯೋಗಾಶ್ರಮದಲ್ಲಿ ಭಾನುವಾರ ಜಯದೇವ ಯೋಗ ಕೇಂದ್ರದಿಂದ ವಿಶ್ವ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಚಿತ ಯೋಗ ತರಬೇತಿ ಶಿಬಿರ, ಯೋಗ ಸಪ್ತಾಹ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಭೋಗ ಜೀವನದಿಂದ ಆಲಸ್ಯ ಹೆಚ್ಚಾಗುತ್ತದೆ. ಎಲ್ಲವೂ ನನಗೆ ಬೇಕೆಂಬ ಸ್ವಾರ್ಥ ಹೆಚ್ಚಾಗುತ್ತದೆ. ದೇಹದಲ್ಲಿ ರೋಗಗಳು ಹೆಚ್ಚು ಆವರಿಸಿಕೊಳ್ಳುತ್ತವೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬರಲು, ಸಮಾಜಮುಖಿ, ಚಿಂತನೆ, ಕಾರ್ಯಗಳಲ್ಲಿ ತೊಡಗಲು, ಉತ್ತಮ ಯೋಚನೆಗಳಿಗೆ ಯೋಗಾಸನ ಸಹಕಾರಿಯಾಗುತ್ತದೆ. ಪ್ರತಿನಿತ್ಯ ಯೋಗಾಸನ ಮಾಡುವುದರಿಂದ, ಒತ್ತಡದಿಂದ ಮುಕ್ತರಾಗಿ, ಶಾಂತಿ- ನೆಮ್ಮದಿಯೊಂಗಿದೆ ಆರೋಗ್ಯಕರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಅತಿಯಾದ ಆಹಾರ ಸೇವನೆಯೂ ರೋಗಕ್ಕೆ ಆಹ್ವಾನ ನೀಡಿದಂತೆ. ಹಿತ-ಮಿತ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಯೋಗಾಸನ ಮಾಡುವುದರಿಂದ, ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದರು.
ಯೋಗಬಂಧು ವೀರಭದ್ರಪ್ಪ, ಶಿಬಿರಾರ್ಥಿಗಳಾದ ಸುಧಾ ಕಿರುವಾಡಿ, ಸಂಜಯ್, ಸಹನಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಯದೇವ ಯೋಗ ಕೇಂದ್ರದ ಪದಾಧಿಕಾರಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು, ಶಿರಡಿ ಸಾಯಿ ಯೋಗ ಕೇಂದ್ರ, ಜೈನ್ ಯೋಗ ಕೇಂದ್ರ, ಸ್ವಾಮಿ ವಿವೇಕಾನಂದ ಬಡಾವಣೆಯ ಯೋಗ ಪಟುಗಳು ಭಾಗವಹಿಸಿದ್ದರು.
ಕರಿಬಸಪ್ಪ ಕಣಕುಪ್ಪಿ, ಬಿ.ಟಿ.ಜಯಪ್ರಕಾಶ್, ಕಿರಣ್ಕುಮಾರ್ ವಿ.ಶಣೈ, ಜೆ.ಸೋಮನಾಥ, ಶರಣಾರ್ಥಿ ಬಕ್ಕಪ್ಪ, ಅಜ್ಜಪ್ಪ, ಹಿರೇಮಠ, ಸುಮಿತ್ರಮ್ಮ, ಉಳುವಯ್ಯ, ಸವಿತಾ ಬೆಂಗೇರಿ, ವಿಜಯಕುಮಾರ್, ರೇವಣ್ಣ, ಜಿ.ಎಸ್.ವೀರಣ್ಣ, ಕೆ.ಎಂ.ಉಮಾಶಂಕರ್, ಶಾಂತಕುಮಾರ್ ಸೋಗಿ, ಮಂಜುನಾಥ ಸಿ,, ಸಂಜಯ್ಕುಮಾರ್, ಸಿದ್ದಣ್ಣ, ಪುಟ್ಟರಾಜ್, ಮಂಜುಳಮ್ಮ, ಭಾರತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.