ಹುಬ್ಬಳ್ಳಿ: `ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶ ನದಲ್ಲಿ ಮಂಡಿಸಲಾದ ಗೋಹತ್ಯೆ ಪ್ರತಿಬಂಧಕ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕಬೇಕು. ಇಲ್ಲವಾದಲ್ಲಿ ಕರ್ನಾಟಕ ಬಂದ್ ಮೂಲಕ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು' ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.
ರಾಜ್ಯದಲ್ಲಿ 48 ವರ್ಷಗಳ ಹಿಂದೆಯೇ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಇದಕ್ಕೆ ಇನ್ನಷ್ಟು ಶಕ್ತಿ ತುಂಬಲು ಹೊಸ ಮಸೂದೆಯನ್ನು ಸರ್ಕಾರ ರೂಪಿಸಿದೆ. ವಿರೋಧಪಕ್ಷ ಗಳ ಸದಸ್ಯರು ಸಹ ಅಧಿವೇಶನದಲ್ಲಿ ಸಭಾತ್ಯಾಗ ಮಾಡುವ ಮೂಲಕ ಮಸೂದೆ ಅಂಗೀಕಾರಗೊಳ್ಳಲು ಬೆಂಬಲ ಸೂಚಿಸಿದ್ದಾರೆ ಎಂದು ಅವರು ಹೇಳಿದರು.
ಗೋಹತ್ಯೆ ಪ್ರತಿಬಂಧಕ ಮಸೂದೆಯು ಯಾವೊಂದು ಪಕ್ಷಕ್ಕೆ ಸೀಮಿತವಾದ ಮಸೂದೆಯಾಗಿಲ್ಲ. ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಈ ಮಸೂದೆಯನ್ನು ರೂಪಿಸುವಂತೆ ಸೂಚಿಸಿದೆ.
ಹೀಗಿದ್ದು ರಾಜ್ಯದ ವಿರೋಧ ಪಕ್ಷಗಳ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ.
ಮಸೂದೆ ವಿರೋಧ ವ್ಯಕ್ತಪಡಿಸುವುದು ಮುಂದುವರಿಸಿದರೆ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಮತ್ತೊಮ್ಮೆ ಅಜ್ಞಾತವಾಸ ಅನುಭವಿಸ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಕೋಮುವಾದಿ ಮಸೂದೆಯಲ್ಲ: ಗೋಹತ್ಯೆ ನಿಷೇಧದ ಹಿಂದೆ ಯಾವುದೇ ಕೋಮುವಾದಿ ಅಜೆಂಡಾ ಇಲ್ಲ. ಹೀಗಾಗಿ ಇದು ದಲಿತರು, ಮುಸ್ಲಿಮರ ವಿರೋಧಿಯೂ ಅಲ್ಲ. ಗೋಹತ್ಯೆ ನಿಷೇಧಕ್ಕೆ ಆ ಸಮುದಾಯಗಳ ಬಹುತೇಕರ ಸಹಮತವೂ ಇದೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.
ಈಗಾಗಲೇ 11 ರಾಜ್ಯಗಳಲ್ಲಿ ಗೋಹತ್ಯೆ ನಿಷೇಧವಿದೆ. ಹೀಗಾಗಿ ರಾಜ್ಯದಲ್ಲಿಯೂ ಇದಕ್ಕೆ ನಿಷೇಧ ಹೇರಲು ರಾಜ್ಯಪಾಲರು ಅಂಕಿತ ಹಾಕಬೇಕು. ಇಲ್ಲದಿದ್ದಲ್ಲಿ ಎಲ್ಲ ಮಠಾಧೀ ಶರು ಒಟ್ಟಾಗಿ ಸೇರಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಪಿಂಜರಪೋಳ ಸಂಸ್ಥೆಯ ಮೇಘರಾಜ ಕವಾಟ, ಕರುಣಾಮಂದಿರ ಗೋಶಾಲೆಯ ಬೆಹರ್ಲಾಲ್ ಜೈನ್ ಹಾಗೂ ಸುನಂದಾದೇವಿ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.