ಹುಬ್ಬಳ್ಳಿ: `ಅಧಿಕಾರಕ್ಕಾಗಿ ಪಕ್ಷದ ವಿರುದ್ಧ ಬಂಡಾಯ ಏಳದೆ ತಾಳ್ಮೆಯಿಂದ ಕಾಯ್ದರೆ ಪಕ್ಷವೇ ಎಲ್ಲವನ್ನೂ ಕೊಡುತ್ತದೆ. ಮುಖ್ಯಮಂತ್ರಿಯಾಗಿ ನಿಮ್ಮ ಮುಂದೆ ನಿಂತಿರುವ ನಾನೇ ಈ ಮಾತಿಗೆ ಉದಾಹರಣೆ~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯಿಂದ ಸೋಮವಾರ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಪೌರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. `ಪಕ್ಷಕ್ಕೆ ನಾವು ಕೊಟ್ಟಿದ್ದು ಮತ್ತು ಪಕ್ಷ ನಮಗೆ ಕೊಟ್ಟಿದ್ದು ಎರಡನ್ನೂ ತೂಗಿ ನೋಡಿದಾಗ ಪಕ್ಷದಿಂದ ನಾವು ಪಡೆದ ತೂಕವೇ ಹೆಚ್ಚಾಗುತ್ತದೆ. ಅಂತಹ ಪಕ್ಷದ ವಿರುದ್ಧ ಬಂಡಾಯ ಏಳುವ ಪ್ರವೃತ್ತಿ ಸಲ್ಲ. ಅಧಿಕಾರಕ್ಕಾಗಿ ಪಕ್ಷವನ್ನು ತೊರೆದು ಹೋಗುವ ಸಂಪ್ರದಾಯವೂ ಒಳ್ಳೆಯದಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.
`ಇಂದಿನ ಜನಕ್ಕೆ ಶಾಸಕರಾದ ಕೂಡಲೇ ಮಂತ್ರಿ ಪದವಿ ಬೇಕು. ಮಂತ್ರಿಯಾದ ಮೇಲೆ ಒಳ್ಳೆಯ ಖಾತೆ ಬೇಕು. ಅದೂ ಸಿಕ್ಕರೆ ಮುಖ್ಯಮಂತ್ರಿ ಹುದ್ದೆಯೇ ಬೇಕು. ಸ್ವಚ್ಛ ನಡತೆ, ಪ್ರಾಮಾಣಿಕ ಮನೋಭಾವ ಮತ್ತು ಬದ್ಧತೆ ಇದ್ದರೆ ಸ್ಥಾನಮಾನಗಳೇ ನಮ್ಮನ್ನು ಹುಡುಕಿ ಕೊಂಡು ಬರುತ್ತವೆ~ ಎಂದು ಶೆಟ್ಟರ್ ತಿಳಿಸಿದರು.
`ಎರಡೂವರೆ ದಶಕಗಳ ನನ್ನ ರಾಜಕೀಯ ಜೀವನದಲ್ಲಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಇಷ್ಟು ಬೇಗ ಅಷ್ಟೆಲ್ಲ ಅವಕಾಶ ಸಿಕ್ಕವೇ ಎಂಬುದನ್ನು ನೆನಪಿಸಿಕೊಂಡರೆ ಸೋಜಿಗವಾಗುತ್ತದೆ. ಇದೆಲ್ಲ ತಾಳ್ಮೆಯಿಂದ ಕಾಯ್ದಿದ್ದರ ಫಲ. ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳ ಬೇಕು~ ಎಂದು ಅವರು ಭಾವುಕರಾಗಿ ನುಡಿದರು.
`ಬಹುತೇಕರಿಗೆ ರಾಜಕಾರಣ ಚಟವಾಗಿದೆ. ಅದರಿಂದಲೇ ಎಲ್ಲವನ್ನೂ ಮಾಡಿಕೊಳ್ಳುತ್ತೇವೆ ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಇದೆಲ್ಲ ತಪ್ಪು ಕಲ್ಪನೆ. ಜನರ ಸೇವೆ ಮಾಡಲು ರಾಜ ಕಾರಣ ಅತ್ಯುತ್ತಮ ಕ್ಷೇತ್ರವಾಗಿದ್ದು, ಅವರ ಸಮಸ್ಯೆಗೆ ಸ್ಪಂದಿಸಿದರೆ ಅವರೇ ನಮ್ಮನ್ನು ನಾಯಕರನ್ನಾಗಿ ರೂಪಿಸುತ್ತಾರೆ~ ಎಂದು ವಿವರಿಸಿದರು.
`ರಾಜಕೀಯದ ಬಗೆಗೆ ಕುತೂಹಲ ಇದ್ದರೂ ಕ್ರಿಯಾಶೀಲ ರಾಜಕಾರಣದ ವಿಷಯವಾಗಿ ನನಗೆ ಆಸಕ್ತಿಯೇ ಇರಲಿಲ್ಲ. ಯಡಿಯೂರಪ್ಪ ಮತ್ತು ಅನಂತಕುಮಾರ್ ಅವರ ಒತ್ತಾಯಕ್ಕೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ~ ಎಂದ ಅವರು, `ನಾನು ಪ್ರತಿನಿಧಿಸಿದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದ ಜನರ ಆಶೀರ್ವಾದಕ್ಕೆ ಭಾರಿ ಶಕ್ತಿ ಇದೆ. ಆದ್ದ ರಿಂದಲೇ ನಾನೂ ಸೇರಿದಂತೆ ಇಲ್ಲಿಂದ ಆಯ್ಕೆಯಾದ ಎಲ್ಲರೂ ದೊಡ್ಡ ಹುದ್ದೆ ಅಲಂಕರಿಸಿದ್ದೇವೆ~ ಎಂದರು.
`ರಾಜಕೀಯ ದ್ವೇಷ ಎಂದಿಗೂ ಸಲ್ಲ. ಅದನ್ನು ನಮ್ಮನ್ನೇ ನಾಶ ಮಾಡುತ್ತದೆ~ ಎಂದ ಅವರು, `ನನ್ನ ವಿರುದ್ಧ ಸ್ಪರ್ಧಿ ಸಿದ್ದ ಬಸವರಾಜ ಬೊಮ್ಮಾಯಿ ಅವ ರಿಂದ ನನಗೆ ಅಪಾರ ಬೆಂಬಲ ಸಿಕ್ಕಿದೆ. ಚುನಾ ವಣೆಗೆ ಮಾತ್ರ ಪೈಪೋಟಿ, ಆಮೇಲೆ ಯಾವಾಗಲೂ ನಾವು ಸ್ನೇಹಿತರಾಗಿದ್ದೆವು~ ಎಂದು ನೆನೆದರು.
ಈದ್ಗಾ ಮೈದಾನ, ಹೈಕೋರ್ಟ್ ಪೀಠ ಮತ್ತು ನೈರುತ್ಯ ರೈಲ್ವೆ ವಲಯ ಕ್ಕಾಗಿ ನಡೆಸಿದ ಹೋರಾಟಗಳಿಂದ ತಾವು ಬೆಳೆದು ಬಂದ ಬಗೆಯನ್ನು ಅವರು ಮೆಲುಕು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.