ADVERTISEMENT

ಅನಂತ ಪದ್ಮನಾಭ ದೇವಾಲಯದಲ್ಲಿ ಬೆಳ್ಳಿಗಣಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 6:50 IST
Last Updated 3 ಸೆಪ್ಟೆಂಬರ್ 2011, 6:50 IST

ಹುಬ್ಬಳ್ಳಿ: ಅಲ್ಲಿ ಕಣ್ಣು ಕೋರೈಸುವ ವಜ್ರಖಚಿತ ಆಭರಣಗಳು, ಹೊಳೆಯುವ ಮುತ್ತುರತ್ನಗಳು ಜೊತೆಗೆ ಚಿನ್ನಾಭರಣಗಳು... ಆಗಾಗ ಬೆಂಕಿ ಉಗುಳುತ್ತ ನಿಧಿ ಕಾಯುವ ಸರ್ಪ. ಈ ಶೇಷಶಯನನ ಆಚೆಗೆ ಬೆಳ್ಳಿ ಗಣಪ. ಜೊತೆಗೆ ಚಿನ್ನದ ಗಣಪನ ದರ್ಶನ. ಇವುಗಳ ಕಾವಲಿಗೆ ನಿಂತ ಆನೆಗಳು.

ಇದು ಕೇರಳದ ರಾಜಧಾನಿ ತಿರುವನಂತಪುರದಲ್ಲಿಯ ಅನಂತಪದ್ಮನಾಭ ದೇವಾಲಯದ ಚಿತ್ರಣ. ತನ್ನ ಸಂಪತ್ತಿನಿಂದ ಈಚೆಗಷ್ಟೇ ವಿವಾದ ಕೇಂದ್ರವಾಗಿರುವ ಅನಂತಪದ್ಮನಾಭ ದೇವಾಲಯವನ್ನು ಈಗ ನಗರದ ಶಿಂಪಿಗಲ್ಲಿಯಲ್ಲಿಯೇ ನೋಡಬಹುದು. ಧ್ವನಿಸುರುಳಿಯಲ್ಲಿಯ ಚೆಂಡೆಯ ಸದ್ದಿನೊಂದಿಗೆ ಆರಂವಾಗುವ ಈ ಮನಮೋಹಕ ದೃಶ್ಯಾವಳಿ ಐದು ನಿಮಿಷಗಳ ಕಾಲಾವಧಿಯದು. ಈ ದೃಶ್ಯಾವಳಿ ನೋಡಲು, ಈ ದೇವಾಲಯ ಮಾದರಿ ನೋಡಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಇದರಿಂದ ಸರತಿ ಸಾಲು ಹೆಚ್ಚುತ್ತಿದೆ.

ಶಿಂಪಿಗಲ್ಲಿಯ ಮಾರುತಿ ಯುವಕ ಸೇವಾ ಸಂಘದ ಈ ಬಾರಿಯ ಕೊಡುಗೆ ಅನಂತಪದ್ಮನಾಭ ದೇವಾಲಯ ಮಾದರಿ. ಇದನ್ನು ವಿಜಯ್ ದಂಡಗಿ ರೂಪಿಸಿದ್ದಾರೆ. `ದೇಶದ ಅಪರೂಪದ ಹಾಗೂ ವಿವಾದಿತ ದೇವಸ್ಥಾನದ  ದರ್ಶನವನ್ನು ನಮ್ಮ ಹುಬ್ಬಳ್ಳಿ ಜನತೆಗೆ ಇಲ್ಲಿಯೇ ಮಾಡಿಸುವ ಉದ್ದೇಶದಿಂದ ಅನಂತ ಪದ್ಮನಾಭ ದೇವಾಲಯ ಮಾದರಿ ಆಯ್ಕೆ ಮಾಡಿಕೊಂಡೆ~ ಎನ್ನುತ್ತಾರೆ ವಿಜಯ್ ದಂಡಗಿ.

`ಅನಂತ ಪದ್ಮನಾಭನ ದೇವಸ್ಥಾನದ ಮುಂಭಾಗವನ್ನು ಹೋಲುವ ಇಲ್ಲಿನ ಚಿತ್ರಣಕ್ಕೆ ಒಟ್ಟು ಒಂಬತ್ತು ಲಕ್ಷ ರೂಪಾಯಿ ವೆಚ್ಚವಾಗಿದೆ. ಅತ್ಯಂತ ಸೂಕ್ಷ್ಮವಾದ ಬೆಳಕಿನ ವಿನ್ಯಾಸ ಮಾಡಲಾಗಿದೆ. ಭಕ್ತಿಸಂಗೀತದ ಹಿನ್ನೆಲೆಯಲ್ಲಿ ಈ ಕಲಾಕೃತಿಯ ವೀಕ್ಷಣೆ ಖುಷಿ ನೀಡುತ್ತದೆ. ಮುಂಬೈನ ಎಂಜಿನಿಯರ್ ನಿತ್ಯಾನಂದ ಬೆಳಕಿನ ವಿನ್ಯಾಸ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ. ಹಗಲು ಹೊತ್ತಿನಲ್ಲೂ ವೀಕ್ಷಣೆಗೆ ಅವಕಾಶವಿದೆ. ಆದರೆ ರಾತ್ರಿ  ನೋಡುವುದೇ ಚೆಂದ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ~ ಎನ್ನುತ್ತಾರೆ ದಂಡಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.