ADVERTISEMENT

ಅಳಗವಾಡಿ: ಹತ್ತಿ ಬೆಳೆಯ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 6:50 IST
Last Updated 2 ಜನವರಿ 2012, 6:50 IST

ನವಲಗುಂದ: ಬೋಲ್‌ಗಾರ್ಡ್ ತಂತ್ರಜ್ಞಾನದ ಕ್ರಾಂತಿಯಿಂದಾಗಿ ರೈತರು ಹೆಚ್ಚಾಗಿ ಹತ್ತಿ ಬೆಳೆಯುತ್ತಿದ್ದು, ಅದರ ಲಾಭ ಪಡೆಯುತ್ತಿದ್ದಾರೆ ಎಂದು ಮಹಿಕೊ ಮಾನ್ಸೆಂಟೊ ಕಂಪನಿಯ ವಲಯ ವ್ಯವಸ್ಥಾಪಕ ಬಸವರಾಜ ರಾಂಪೂರೆ ಅಭಿಪ್ರಾಯಪಟ್ಟರು.

ಅವರು ಈಚೆಗೆ ಅಳಗವಾಡಿಯಲ್ಲಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋಆಪರೆಟಿವ್ ಲಿ, ಕೃಷಿ ಇಲಾಖೆ ಹಾಗೂ ಹುಬ್ಬಳ್ಳಿಯ ಜಿಇಒ ಸೀಡ್ಸ್  ಮತ್ತು ಅಳಗವಾಡಿಯ ಪಿಎಸಿಎಸ್ ಆಶ್ರಯದಲ್ಲಿ ಇಪ್ಕೋ ಸಂಸ್ಥೆಯಿಂದ ವಿತರಿಸಲಾದ ಜಿಇಓ ಬಿ.ಟಿ.ಹತ್ತಿ-596 ಬೆಳೆಯ ಕ್ಷೇತ್ರೊತ್ಸವದಲ್ಲಿ  ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿದರು.

ಬೋಲ್‌ಗಾರ್ಡ್ ಹೊಸ ತಂತ್ರಜ್ಞಾನದಿಂದಾಗಿ ಅಮೇರಿಕನ್, ಗುಲಾಬಿ ಬಣ್ಣ ಹಾಗೂ ಚುಕ್ಕೆ ಕಾಯಿ ಕೊರೆಯುವ ಹುಳಗಳನ್ನು ತಡೆಗಟ್ಟುತ್ತದೆ. ಇದರಿಂದಾಗಿ ಔಷದಿ ಸಿಂಪರಣೆ ಕಡಿಮೆ, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ, ಹತ್ತಿ ಬಿಡಿಸಲು ಸುಲಭ, ಹೆಚ್ಚು ಇಳುವರಿ, ಉತ್ತಮ ಗುಣಮಟ್ಟದ ಹತ್ತಿಯಿಂದಾಗಿ ಉತ್ತಮ ಗುಣಮಟ್ಟದ ನೂಲು ಸಿಗುತ್ತಿರುವುದರಿಂದ ರೈತರಿಗೆ ಹೆಚ್ಚಿನ ಲಾಭವಾಗುತ್ತಿದೆ.  ಶೇ.90 ರಷ್ಟು ರೈತರು ಬೋಲ್‌ಗಾರ್ಡ್-2 ತಂತ್ರಜ್ಞಾನದ ಹತ್ತಿ ಬೀಜಗಳನ್ನು ಬಿತ್ತನೆ ಮಾಡಿದ್ದಾರೆ. ಇದರಿಂದಾಗಿ ಪ್ರಪಂಚದಲ್ಲಿಯೇ ಹತ್ತಿ ಉತ್ಪಾದನೆಯಲ್ಲಿ ಭಾರತ 2ನೇ ಸ್ಥಾನದಲ್ಲಿದೆ ಎಂದು ಅವರು ತಿಳಿಸಿದರು.

ಬೋಲ್‌ಗಾರ್ಡ್-2 ಆರ್‌ಆರ್‌ಎಫ್ ಎಂಬ ಹೊಸ ತಂತ್ರಜ್ಞಾನದ ಮೇಲೆ ಸಂಶೋಧನೆ ನಡೆಯುತ್ತಿದ್ದು, ಈ ತಂತ್ರಜ್ಞಾನದಿಂದಾಗಿ ಹತ್ತಿ ಬೆಳೆಯ ನಡುವೆ ಬರುವ ಕಳೆಗಳನ್ನು ಸುಲಭವಾಗಿ ನಾಶಪಡಿಸುತ್ತದೆ ಎಂದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಕ್ಷೇತ್ರೋತ್ಸವವನ್ನು ಉದ್ಘಾಟಿಸಿದರು. ಅಳಗವಾಡಿಯ ರವಿ ಈರೇಶನವರ, ವಸಂತ ಮಜ್ಜಗಿ ಹಾಗೂ ನಾಗರಾಜ ಪೂಜಾರ ಹೊಲದಲ್ಲಿ  ಈ ಕ್ಷೇತ್ರೊತ್ಸವವನ್ನು ಏರ್ಪಡಿಸಲಾಗಿತ್ತು. ನೂರಾರು ರೈತರು ಪಾಲ್ಗೊಂಡು ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದುಕೊಂಡರು.

ಅಳಗವಾಡಿ ಪಿಎಸಿಎಸ್‌ನ ಅಧ್ಯಕ್ಷ ವಿ.ಎಂ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮಾರುಕಟ್ಟೆಯ ಅಭಿವೃದ್ಧಿ ಅಧಿಕಾರಿ ಮಾರುತಿ ಗುರುವಣ್ಣವರ, ಸಹಾಯಕ ಕೃಷಿ ನಿರ್ದೇಶಕ ವಿ.ವಿ.ವಿಠ್ಠಲರಾವ್, ಎಸ್.ಎಂ.ನದಾಫ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.