ಧಾರವಾಡ: `ಕಾಂಗ್ರೆಸ್ ಬಂಡವಾಳಗಾರರ ನೆಚ್ಚಿನ ಸೇವಕ ಪಕ್ಷದವಾದರೆ, ಬಿಜೆಪಿ ಕೋಮು ದ್ವೇಷವನ್ನು ಹರಡಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದೆ. ಜೆಡಿಎಸ್ ಕೂಡ ರಾಜ್ಯಮಟ್ಟದ ಬಂಡವಾಳಶಾಹಿ ಪಕ್ಷವಾಗಿದೆ. ಜನರ ಆಶೋತ್ತರಗಳನ್ನು ಈಡೇರಿಸುವ ಬದಲು ಈ ಪಕ್ಷಗಳ ಮುಖಂಡರು ಅವಕಾಶವಾದಿ ರಾಜಕೀಯವನ್ನು ಮಾಡುತ್ತಿದ್ದು, ಇವುಗಳನ್ನು ಜನತೆ ಧಿಕ್ಕರಿಸಬೇಕು' ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಕೇಂದ್ರ ಸಮಿತಿ ಸದಸ್ಯ ಹಾಗೂ ರಾಜ್ಯ ಕಾರ್ಯದರ್ಶಿ ಕೆ.ರಾಧಾಕೃಷ್ಣ ತಿಳಿಸಿದರು.
ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಎಚ್.ಜಿ.ದೇಸಾಯಿ ಅವರ ಪರ ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
`ನಿರಂತರವಾಗಿ ಬೆಲೆ ಏರಿಕೆ, ನಿರುದ್ಯೋಗ, ಕೈಗಾರಿಕೆ ಸ್ಥಾಪನೆಯ ಹೆಸರಿನಲ್ಲಿ ಭೂಕಬಳಿಕೆ ನಡೆದೇ ಇದ್ದರೂ ಹುಸಿ ಎಡವಾದಿಗಳಾದ ಸಿಪಿಐ, ಸಿಪಿಐ (ಎಂ) ಪಕ್ಷಗಳು ಹೋರಾಟ ನಡೆಸುತ್ತಿಲ್ಲ. ಜಂಟಿಯಾಗಿ ಚುನಾವಣೆ ಎದುರಿಸುವ ಉದ್ದೇಶದಿಂದ ಅವರನ್ನು ಸಂಪರ್ಕಿಸಿರೆ ನಮ್ಮಂದಿಗೆ ಬರಲು ನಿರಾಕರಿಸಿದ ಈ ಪಕ್ಷಗಳ ಮುಖಂಡರು ಲೋಕಸತ್ತಾ ಪಕ್ಷಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ.
ಗುಜರಾತ್ನಲ್ಲಿ ಸರಣಿ ಹತ್ಯಾಕಾಂಡ ಮಾಡಿದ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ತಾವು ಬೆಂಬಲಿಸುವುದಾಗಿ ಲೋಕಸತ್ತಾ ಹೇಳಿಕೊಂಡಿದೆ. ಹಾಗಾಗಿ ಸಿಪಿಐ, ಸಿಪಿಐ (ಎಂ) ಪಕ್ಷಗಳು ಕೋಮುವಾದವನ್ನು ಬೆಂಬಲಿಸುವ ಪಕ್ಷಕ್ಕೆ ಬಲ ನೀಡಿದಂತಾಗುತ್ತದೆ' ಎಂದು ವ್ಯಂಗ್ಯವಾಡಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿದರು.
ಅಭ್ಯರ್ಥಿ ಎಚ್.ಜಿ.ದೇಸಾಯಿ, ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ, ಲಕ್ಷ್ಮಣ ಜಡಗನ್ನವರ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.