ಧಾರವಾಡ: ಇಸ್ಪೀಟ್ ಆಟದಲ್ಲಿ ತೊಡಗಿದ್ದ 20 ಜನರನ್ನು ಗ್ರಾಮೀಣ ಠಾಣೆ ಪೊಲೀಸರು ತಾಲ್ಲೂಕಿನ ಕ್ಯಾರಕೊಪ್ಪ ಗ್ರಾಮದಲ್ಲಿ ಭಾನುವಾರ ಸಂಜೆ ಬಂಧಿಸಿದ್ದಾರೆ.
ಗ್ರಾಮದ ಖುಲ್ಲಾ ಜಾಗೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಒಟ್ಟು 20 ಜನರನ್ನು ಬಂಧಿಸಿದರು. ಬಂಧಿತರಿಂದ 17,285 ನಗದು, 7 ದ್ವಿಚಕ್ರ ವಾಹನ, 13 ಮೊಬೈಲ್ ಹಾಗೂ ಜೂಜಾಟ ಸಲಕರಣೆಗಳನ್ನು ವಶಪಡಿಸಿ ಕೊಂಡಿದ್ದಾರೆ.
ಸಿಪಿಐ ರಾಮನಗೌಡ ಹಟ್ಟಿ ಮಾರ್ಗ ದರ್ಶನದಲ್ಲಿ ಪಿಎಸ್ಐ ಸುರೇಶ ಯಳ್ಳೂರ ಮತ್ತು ಸಿಬ್ಬಂದಿ ದಾಳಿ ನಡೆಸಿ ದ್ದರು.
ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪೊಲೀಸರು ಆರೋಪಿ ಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವರದಕ್ಷಿಣೆ ಕಿರುಕುಳ: ಪತಿ, ಅತ್ತೆ ಬಂಧನ
ಹುಬ್ಬಳ್ಳಿ: ವರದಕ್ಷಿಣೆ ತರುವಂತೆ ಒತ್ತಾಯಿಸಿ ಮಹಿಳೆಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಆರೋಪದಲ್ಲಿ ಆಕೆಯ ಪತಿ ಮತ್ತು ಅತ್ತೆಯನ್ನು ಮಹಿಳಾ ಠಾಣೆ ಪೊಲೀಸರು ಸೋಮವಾರ ಬಂಧಿಸಿದರು.
ಹುಬ್ಬಳ್ಳಿಯ ಕಮರೀಪೇಟೆ ನಿವಾಸಿ ಶಿಲ್ಪಾ ಸುಣಗಾರ ದೂರು ನೀಡಿದ ಮಹಿಳೆ. ತನ್ನ ಪತಿ ಧಾರವಾಡದ ಮಂಜುನಾಥ ಮತ್ತು ಅತ್ತೆ ಹಾಗೂ ಮೈದುನ ಕಳೆದ ಕೆಲವು ದಿನಗಳಿಂದ ತನಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಕಿರುಕುಳ ನೀಡುತ್ತಿದ್ದಾರೆ ಎಂದು ಶಿಲ್ಪಾ ಮಹಿಳಾ ಠಾಣೆಗೆ ದೂರು ನೀಡಿದ್ದರು. ಶಿಲ್ಪಾ ಮತ್ತು ಮಂಜುನಾಥ್ ಮಧ್ಯೆ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಈ ದಂಪತಿಗೆ ಹೆಣ್ಣು ಮಗು ಇದೆ.
ದೂರು ದಾಖಲಿಸಿಕೊಂಡಿರುವ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಪುಷ್ಪಲತಾ ಅವರು ಮಂಜುನಾಥ ಮತ್ತು ಆತನ ತಾಯಿಯನ್ನು ಸೋಮವಾರ ಬಂಧಿಸಿದರು. ಮೈದುನ ತಲೆಮರೆಸಿಕೊಂಡಿದ್ದಾನೆ ಎಂದು ಪುಷ್ಪಲತಾ ತಿಳಿಸಿದರು.ಬಾಡಿಗೆ
ವಿವಾದ: ಬೀದಿಗೆ ಬಿದ್ದ ವಿದ್ಯಾರ್ಥಿಗಳು!
ಹುಬ್ಬಳ್ಳಿ: `ಮಧ್ಯಸ್ಥಿಕೆ~ದಾರನ ಜೊತೆ ಬಾಡಿಗೆ ಕುರಿತು ಎದ್ದ ವಿವಾದದಿಂದ ಮನೆ ಮಾಲೀಕ ಮನೆಗೆ ಬೀಗಜಡಿದು 20 ವಿದ್ಯಾರ್ಥಿಗಳನ್ನು ಬೀದಿಗೆ ತಳ್ಳಿದ ಘಟನೆ ಪೊಲೀಸರ ಮಧ್ಯಪ್ರವೇಶದಿಂದ ಇತ್ಯರ್ಥಗೊಂಡಿದೆ.
ವಿದ್ಯಾನಗರದ ರಂಭಾಪುರಿ ಕಲ್ಯಾಣ ಮಂಟಪದ ಬಳಿಯ ತಮ್ಮ ಕಟ್ಟಡವನ್ನು ನಾಗಣ ಗೌಡರ ಪಾಟೀಲ ಎಂಬವರಿಗೆ ಮಾಲೀಕ ನಾಗಪ್ಪ ಅಗಡಿ ನೀಡಿದ್ದರು. ಆ ಕಟ್ಟಡದಲ್ಲಿ 20 ಮಂದಿ ವಿದ್ಯಾರ್ಥಿಗಳು ಬಾಡಿಗೆಗೆ ಇದ್ದರು.
ಆದರೆ ನಾಗಣ ಗೌಡರ ಜೊತೆಗಿನ ವಿವಾದದ ಹಿನ್ನೆಲೆಯಲ್ಲಿ ನಾಗಪ್ಪ ಅಗಡಿ ತಮ್ಮ ಕಟ್ಟಡದ ಕೊಠಡಿಗಳಿಗೆ ಸೋಮವಾರ ಬೀಗ ಜಡಿದಿದ್ದರು. ಈ ಕುರಿತು ವಿದ್ಯಾರ್ಥಿಗಳು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹೀಗಾಗಿ ಇಬ್ಬರನ್ನೂ ಠಾಣೆಗೆ ಕರೆಸಿದ ಪೊಲೀಸ್ ಇನ್ಸ್ಪೆಕ್ಟರ್ 15 ದಿನಗಳ ಒಳಗಾಗಿ ಮನೆ ಖಾಲಿ ಮಾಡುವಂತೆ ಸೂಚಿಸಿ ವಿವಾದಕ್ಕೆ ತೆರೆ ಎಳೆದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.