ADVERTISEMENT

ಈದ್ ಮಿಲಾದ್ ನಾಳೆ: ಮಾರ್ಗ ಬದಲು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 5:05 IST
Last Updated 4 ಫೆಬ್ರುವರಿ 2012, 5:05 IST

ಹುಬ್ಬಳ್ಳಿ: ಮಹ್ಮದ್ ಪೈಗಂಬರರ ಜನ್ಮ ದಿನೋತ್ಸವ ಅಂಗವಾಗಿ ಇದೇ 5ರಂದು ಈದ್‌ಮಿಲಾದ್ ಹಬ್ಬ ಆಚರಿಸಲಾಗುತ್ತಿದ್ದು, ಅಂದು ಮಧ್ಯಾಹ್ನ 2ಕ್ಕೆ ಇಸ್ಲಾಂಪುರ ಹಾಗೂ ಗಣೇಶಪೇಟೆಯಿಂದ ಮೆರವಣಿಗೆ ಹೊರಡಲಿದೆ.

ಹಳೇಹುಬ್ಬಳ್ಳಿಯ ಇಸ್ಲಾಂಪುರದಿಂದ ಹೊರಡುವ ಮೆರವಣಿಗೆ ಬಂಕಾಪುರ ಚೌಕ್, ಪಿಬಿ ರಸ್ತೆ, ಪಾಟೀಲಗಲ್ಲಿ, ಯಲ್ಲಾಪುರ ಓಣಿ, ವೀರಾಪುರ ಓಣಿ, ರಾಧಾಕೃಷ್ಣಗಲ್ಲಿ, ದುರ್ಗದಬೈಲ್, ಬಾಬಾಸಾನಗಲ್ಲಿ, ಬೆಳಗಾವಿಗಲ್ಲಿ, ಪೆಂಡಾರಗಲ್ಲಿ, ಕಾಳಮ್ಮನಅಗಸಿ, ಮುಲ್ಲಾ ಬಾಡಾ, ಡಾಕಪ್ಪನ ಸರ್ಕಲ್, ಕೌಲಪೇಟೆ, ಬಮ್ಮಾಪುರ ಚೌಕ್ ಮೂಲಕ ಆಸಾರ ಓಣಿಯ ದರ್ಗಾ ತಲುಪಲಿದೆ.

ಮೆರವಣಿಗೆ ನೇತೃತ್ವವನ್ನು ಮಹಾನಗರ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎ.ಎಂ.ಹಿಂಡಸಗೇರಿ ವಹಿಸಲಿದ್ದಾರೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಎ. ಶೇಖ್ ತಿಳಿಸಿದ್ದಾರೆ. ಈದ್ ಮಿಲಾದ್ ಹಿನ್ನೆಲೆಯಲ್ಲಿ ಗಣೇಶಪೇಟೆಯಲ್ಲಿ ದೊಡ್ಡದಾದ ಹಸಿರು ಕಮಾನುಗಳನ್ನು ಕಟ್ಟಲಾಗಿದ್ದು, ಹಸಿರು ಧ್ವಜಗಳ ತೋರಣವನ್ನು ಕಟ್ಟಲಾಗಿದೆ. ಮುಖ್ಯ ರಸ್ತೆಯುದ್ದಕ್ಕೂ ದೀಪದ ಚಪ್ಪರ ಹಾಕಲಾಗಿದೆ. ಮಸೀದಿಗಳಲ್ಲಿ ಹಬ್ಬದ ತಯಾರಿಗಳು ಜೋರಾಗಿ ನಡೆದಿವೆ.

ಮಾರ್ಗ ಬದಲಾವಣೆ: ಮೆರವಣಿಗೆ ಹೊರಡಲಿರುವ ಹಿನ್ನೆಲೆಯಲ್ಲಿ 5ರಂದು ನಗರದ ವಿವಿಧ ರಸ್ತೆಗಳಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಅವುಗಳ ವಿವರ ಈ ಕೆಳಗಿನಂತಿದೆ:

* ಬೆಂಗಳೂರು ಕಡೆಯಿಂದ ಬರುವ ಎಲ್ಲ ವಾಹನಗಳು ಗಬ್ಬೂರ ಬೈಪಾಸ್ ಮುಖಾಂತರ ಹಾಯ್ದು ತಾರಿಹಾಳ ಸೇತುವೆಯ ಇಂಟರ್‌ಚೇಂಜ್ ಮೂಲಕ ನಗರದಲ್ಲಿ ಬರಬೇಕು.

* ಹುಬ್ಬಳ್ಳಿ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ಎಲ್ಲ ವಾಹನಗಳನ್ನು ಹೊಸೂರ ಕ್ರಾಸ್, ಗೋಕುಲ ರಸ್ತೆ ಕಡೆಯಿಂದ ತಾರಿಹಾಳ ಇಂಟರ್‌ಚೇಂಜ್ ಬೈಪಾಸ್ ಮುಖಾಂತರ ಬಿಡಲಾಗುತ್ತದೆ.

* ಗದಗ ಹಾಗೂ ನವಲಗುಂದ ಕಡೆಯಿಂದ ಬರುವ ಎಲ್ಲ ವಾಹನಗಳನ್ನು ಹೊಸೂರ ಕ್ರಾಸ್ ಹಾಗೂ ಗೋಕುಲ ರಸ್ತೆ ಕಡೆಯಿಂದ ತಾರಿಹಾಳ ಇಂಟರ್‌ಚೇಂಜ್ ಬೈಪಾಸ್ ಮುಖಾಂತರ ಬಿಡಲಾಗುತ್ತದೆ.

*ಕಿತ್ತೂರ ಚನ್ನಮ್ಮ ಸರ್ಕಲ್‌ದಿಂದ ಗಬ್ಬೂರ ಬೈಪಾಸ್ ಕಡೆಗೆ ಹೋಗುವ ವಾಹನಗಳು ಕಮರಿಪೇಟೆ ಪೊಲೀಸ್ ಠಾಣೆಯಿಂದ ಬಲಕ್ಕೆ ತಿರುಗಿ ಚಟ್ನಿಮಠ ಕ್ರಾಸ್ ಹಾಗೂ ಎಂ.ಟಿ. ಮಿಲ್ ಕ್ರಾಸ್ ಮೂಲಕ ಕಾರವಾರ ರಸ್ತೆಗೆ ಹೋಗಬೇಕು. ಕಮರಿಪೇಟೆ ಠಾಣೆಯಿಂದ ಬಂಕಾಪುರ ಚೌಕ ಹಾಗೂ ಗಬ್ಬೂರ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

* ಇಂಡಿ ಪಂಪ್ ಸರ್ಕಲ್‌ದಿಂದ ಹಳೇಹುಬ್ಬಳ್ಳಿ ದುರ್ಗದ ಬೈಲ್ ನ್ಯೂ ಇಂಗ್ಲಿಷ್ ಸ್ಕೂಲ್ ಹಾಗೂ ನ್ಯೂ ಇಂಗ್ಲಿಷ್ ಸ್ಕೂಲ್‌ದಿಂದ ಕಸಬಾಪೇಟೆ ಠಾಣೆ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. 

* ಚಟ್ನಿಮಠ ಕ್ರಾಸ್‌ದಿಂದ ಮಿಸ್ಕಿನ್ ಖಾರಪುಡಿ ಕಾರ್ಖಾನೆ ತನಕ, ಅಲ್ಲಿಂದ ಬಲಕ್ಕೆ ತಿರುಗಿ ಕಾರವಾರ ರಸ್ತೆ ಕಡೆಗೆ ಹೋಗಬೇಕು. ಚನ್ನಪೇಟೆ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

* ಗಣೇಶಪೇಟೆಯಿಂದ ಮೆರವಣಿಗೆ ಹೋಗುವಾಗ ಸ್ಟೇಷನ್ ರಸ್ತೆಯಲ್ಲಿ ವಾಹನಗಳನ್ನು ಬಿಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಡಾ.ಕೆ.ರಾಮಚಂದ್ರರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.