ಧಾರವಾಡ: ಇಲ್ಲಿಯ ಸೂಪರ್ ಮಾರುಕಟ್ಟೆಯಲ್ಲಿ ಇದ್ದ 34 ಬಟ್ಟೆ ಅಂಗಡಿಗಳು, ಕಳೆದ ಡಿ 4 ರಂದು ಬೆಂಕಿಗೆ ಆಹುತಿಯಾದ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರಿಗೆ ಮುಖ್ಯಮಂತ್ರಿಗಳು ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಚಿಕ್ಕವರ್ತಕರ ಸಂಘದ ವ್ಯಾಪಾರಸ್ಥರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬೆಂಕಿ ಅವಘಡದಿಂದ ಹಾನಿಗೊಳಗಾದ ಅಂಗಡಿ ವ್ಯಾಪಾರಸ್ಥರು ಬೀದಿ ಪಾಲಾಗಿದ್ದಾರೆ. 20 ವರ್ಷಗಳಿಂದ ಮಹಾನಗರ ಪಾಲಿಕೆಯವರು ನಿಗದಿಪಡಿಸಿದ ಪರ್ಮಿಟ್ ಫೀ ಆಧಾರದಲ್ಲಿ ಮಾಸಿಕ ಬಾಡಿಗೆ ತಪ್ಪದೇ ತುಂಬುತ್ತ ಜೀವನ ಸಾಗಿಸುತ್ತಿದ್ದರು ಎಂದು ಪ್ರತಿಭಟನಾಕಾರರು ಹೇಳಿದರು.
ಬ್ಯಾಂಕುಗಳಿಂದ ಸಾಲ ಪಡೆದು ಮತ್ತು ಠೋಕ್ ವ್ಯಾಪಾರಸ್ಥರಿಂದ ಉದ್ರಿ ರೂಪದಲ್ಲಿ ಸಿದ್ಧ ಉಡುಪುಗಳನ್ನು ತಂದು ಮಾರುತ್ತ, ಬಂದ ಲಾಭದಲ್ಲಿ ಈ ವ್ಯಾಪಾರಸ್ಥರು ಜೀವನ ಸಾಗಿಸುತ್ತಿದ್ದರು. ಆದರೆ ರಾತ್ರೋರಾತ್ರಿ ಆದ ಈ ಆಘಾತಕಾರಿ ಹಾನಿಯಿಂದ ವ್ಯಾಪಾರಸ್ಥರಿಗೆ ದುಡಿಮೆಗೆ ಮಾರ್ಗವಿಲ್ಲದೇ ಬೀದಿಪಾಲಾಗುವ ಪರಿಸ್ಥಿತಿ ಬಂದಿದೆ ಎಂದು ಅವರು ಹೇಳಿದರು.
ಧಾರವಾಡದಲ್ಲಿ ಅಗ್ನಿಶಾಮಕ ದಳದ ವಾಹನ ಇದ್ದಿದ್ದರೆ ಇಷ್ಟೊಂದು ಹಾನಿಯಾಗುತ್ತಿರಲಿಲ್ಲ. ಆದ್ದರಿಂದ ಕೂಡಲೇ ಎರಡು ಅಗ್ನಿಶಾಮಕ ದಳದ ವಾಹನಗಳು ಪಾಲಿಕೆ ಆವರಣದಲ್ಲಿ ನಿಲ್ಲಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಇಸ್ಮಾಯಿಲ್ ತಮಟಗಾರ ಒತ್ತಾಯಿಸಿದರು.
ಬೆಂಕಿ ಹೊತ್ತಿದ ಸಂದರ್ಭವನ್ನೇ ಸದುಪಯೋಗಪಡಿಸಿಕೊಂಡ ಕಳ್ಳರು ಅಂದು ಸುಮಾರು 30 ರಿಂದ 40 ಸಾವಿರ ರೂಪಾಯಿ ಬೆಲೆ ಬಾಳುವ ಬಟ್ಟೆಗಳನ್ನೂ ಕಳ್ಳತನ ಮಾಡಿದ್ದಾರೆ. ಆದ್ದರಿಂದ ಕಳ್ಳತನವಾದ ಅಂಗಡಿಗಳ ಮಾಲೀಕರಿಗೂ ತಲಾ 35 ಸಾವಿರ ರೂಪಾಯಿ ಪರಿಹಾರ ನೀಡಬೇಕು. ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು. ಪಾಲಿಕೆ ಸದಸ್ಯೆ ವಿಜಯಲಕ್ಷ್ಮೀ ಲೂತಿಮಠ, ಮಹ್ಮದ್ ಅಲಿ ಗೂಡುಭಾಯಿ ವ್ಯಾಪಾರಸ್ಥರಿಗೆ ಬೆಂಬಲ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.