ADVERTISEMENT

ಕಲಾವಿದರಿಗೆ ಪ್ರೋತ್ಸಾಹಧನ ನೀಡಬೇಕು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:20 IST
Last Updated 6 ಫೆಬ್ರುವರಿ 2012, 6:20 IST

ಧಾರವಾಡ: “ಕನ್ನಡ ವೃತ್ತಿ ರಂಗಭೂಮಿಯಲ್ಲಿ ಹಿರಿಯ ತಲೆಮಾರಿನ ಕಲಾವಿದರಲ್ಲಿ ಒಬ್ಬರಾಗಿದ್ದ ಗುಡಗೇರಿ ಎನ್.ಬಸವರಾಜ ಅವರು ಕಷ್ಟದ ದಿನಗಳಲ್ಲೂ ಈ ಕ್ಷೇತ್ರವನ್ನು ಉಳಿಸಿ ಬೆಳೆಸಿದ್ದಾರೆ. ಕಷ್ಟದಲ್ಲಿರುವ ಕಲಾ ವಿದರಿಗೆ ಸರ್ಕಾರ ಪ್ರೋತ್ಸಾಹಧನ ನೀಡಬೇಕು” ಎಂದು ಮಾಜಿ ಶಾಸಕ ವಿನಯ ಕುಲಕರ್ಣಿ ಹೇಳಿದರು.

ಇಲ್ಲಿನ ಸೃಜನಾ ರಂಗಮಂದಿರದಲ್ಲಿ ದಿ. ಎನ್. ಬಸವರಾಜ್ ಅವರ ನೆನಪಿಗಾಗಿ ಹಮ್ಮಿಕೊಂಡಿರುವ ಸೃಜನ ರಂಗ ತರಂಗ ಎಂಬ ವಾರಾಂತ್ಯ ನಾಟಕೋತ್ಸವ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೊಸ ತಲೆ ಮಾರಿನ ಯುವ ಜನತೆಯಲ್ಲಿ ರಂಗಭೂಮಿಯ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಬಸವರಾಜ ಅವರ ಪ್ರಯತ್ನ ಸಾಕಷ್ಟಿದೆ ಎಂದರು.

ಪತ್ರಕರ್ತ ಮನೋಜಗೌಡ ಪಾಟೀಲ ಮಾತನಾಡಿ, ಎನ್.ಬಸವರಾಜ ಅವರು ರಂಗಭೂಮಿಯ ಎಲ್ಲ ಆಯಾಮಗಳನ್ನು ತಮ್ಮ ಬದುಕಿನಲ್ಲಿ ಕಟ್ಟಿಕೊಳ್ಳುವದರ ಜೊತೆಗೆ ರಂಗಭೂಮಿ ಕಟ್ಟಿ ಬೆಳೆಸಲು ಪ್ರಯತ್ನ ಮಾಡಿದ ಏಕೈಕ ಕಲಾವಿದ ಎಂದು ಬಣ್ಣಿಸಿದರು.

ಮಾತಾಂಡಪ್ಪ ಕತ್ತಿ ರಚಿಸಿದ ಧರ್ಮಯುದ್ಧ ಎಂಬ ರಂಗಕೃತಿಯನ್ನು ಕೆ.ಜಗುಚಂದ್ರ ಬಿಡುಗಡೆ ಮಾಡಿ, ಧರ್ಮಯುದ್ಧ ಎನ್ನುವ ನಾಟಕ ಗ್ರಾಮೀಣ ಪ್ರದೇಶ ದಲ್ಲಿನ ಜನರ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ.
 
ಕತ್ತಿ ಅವರು ತಮ್ಮ ಅನುಭವಗಳನ್ನು ಬಿಚ್ಚಿಡುವದರ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಕೂಡ ತಿಳಿಸಿದ್ದಾರೆ ಎಂದರು.  ಡಾ. ಶಿವಾನಂದ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಉಮಾದೇವಿ ಗುಡಗೇರಿ, ಜಗನ್ನಾಥ ಜೋಶಿ, ಮಾರ್ತಾಂಡಪ್ಪ ಕತ್ತಿ, ಶಿವಪುತ್ರಪ್ಪ ಸಾವಕಾರ, ಸಾದಿಕ್ ಶೇಖ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಎನ್. ವೈ.ಅಣ್ಣಿಗೇರಿ ಹಾಗೂ ಶಂಕರ ಹಲಗತ್ತಿ ಅವರಿಗೆ ರಂಗ ಸನ್ಮಾನ ನೀಡಲಾಯಿತು. ಎಂ.ಪಿ.ಯಡಳ್ಳಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.