ADVERTISEMENT

ಕುಡಿಯುವ ನೀರಿಗಾಗಿ ಪರದಾಟ

ಧಾರವಾಡದ ರಾಜೀವ್‌ ಗಾಂಧಿ ನಗರದಲ್ಲಿ ತೀರದ ನೀರಿನ ದಾಹ

​ಪ್ರಜಾವಾಣಿ ವಾರ್ತೆ
Published 22 ಮೇ 2018, 8:21 IST
Last Updated 22 ಮೇ 2018, 8:21 IST
ಧಾರವಾಡ ರಾಜೀವ್ ಗಾಂಧಿ ನಗರದಲ್ಲಿ ಜಲಮಂಡಳಿ ವಾಹನದಲ್ಲಿ ಪೂರೈಯಾಗುತ್ತಿರುವ ಟ್ಯಾಂಕರ್‌ ನೀರು ತುಂಬಲು ಮುಗಿಬಿದ್ದ ನಿವಾಸಿಗಳು
ಧಾರವಾಡ ರಾಜೀವ್ ಗಾಂಧಿ ನಗರದಲ್ಲಿ ಜಲಮಂಡಳಿ ವಾಹನದಲ್ಲಿ ಪೂರೈಯಾಗುತ್ತಿರುವ ಟ್ಯಾಂಕರ್‌ ನೀರು ತುಂಬಲು ಮುಗಿಬಿದ್ದ ನಿವಾಸಿಗಳು   

ಧಾರವಾಡ: ಒಂದೆಡೆ ನಿರಂತರ ನೀರು ಪೂರೈಕೆಯ ಯೋಜನೆ, ಮತ್ತೊಂದೆಡೆ ನೀರೇ ಸಿಗದೆ ಟ್ಯಾಂಕರ್ ನೀರಿಗೆ ಚಾತಕಪಕ್ಷಿಯಂತೆ ಕಾಯುವ ಪರಿಸ್ಥಿತಿ. ನಗರದಲ್ಲಿ ಇಂಥ ಎರಡೂ ವೈರುಧ್ಯಗಳು ಕಂಡು ಬರುತ್ತವೆ.

ಇಲ್ಲಿನ ರಾಜೀವ್ ಗಾಂಧಿ ನಗರ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ.  ಶುದ್ಧ ಕುಡಿಯುವ ನೀರಿನ ಘಟಕಗಳೂ ಕೆಟ್ಟು ಹೋಗಿವೆ. ವಾರದಲ್ಲಿ ಎರಡು ಬಾರಿ ಬರುವ ಟ್ಯಾಂಕರ್ ನೀರಿಗಾಗಿ ಇಲ್ಲಿನ ಜನ ಗಂಟೆಗಟ್ಟಲೇ ಸಾಲಿನಲ್ಲಿ ನಿಲ್ಲುವುದು ಸಾಮಾನ್ಯವಾಗಿದೆ.

‘ಕೇವಲ ಜನ ವಸತಿ ಗಮನಿಸಿ ಎರಡು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಅದರೆ, ಅವು ಕಾರ್ಯ ನಿರ್ವಹಿಸುತ್ತಿಲ್ಲ. ಕೂಲಿಕಾರರು ತಮ್ಮ ಕೆಲಸಕ್ಕೆ ಹೋಗದೇ ಟ್ಯಾಂಕರ್‌ ನೀರಿಗಾಗಿ ಬೆಳಿಗ್ಗೆ ಹಾಗೂ ಸಂಜೆ ಸಾಲಿನಲ್ಲಿ ಕಾಯಬೇಕಾಗಿದೆ. ಟ್ಯಾಂಕರ್‌ ನೀರು ಬಂದರೂ ಅದು ರಾಜೀವ್ ಗಾಂಧಿನಗರದ ಬಸ್‌ ನಿಲ್ದಾಣದ ಬಳಿ ನಿಲ್ಲುತ್ತದೆ.  ಕೆಲವರಿಗೆ ಟ್ಯಾಂಕರ್‌ ಬಂದಿದ್ದೇ ಗೊತ್ತಾಗುವುದಿಲ್ಲ. ಹಾಗಾಗಿ ಕೆಲವರಿಗೆ ನೀರು ಸಿಗುವುದೇ ಇಲ್ಲ’ ಎಂದು ಅಲ್ಲಿನ ನಿವಾಸಿ ರಮೇಶ ನಾಝರೆ ದೂರುತ್ತಾರೆ.

ADVERTISEMENT

‘ಒಂದು ಕೊಡ ನೀರು ಸಿಗುತ್ತಿಲ್ಲ. ಬೇಸಿಗೆ ಕಳೆಯುವುದೇ ದೊಡ್ಡ ಚಿಂತೆಯಾಗಿದೆ. 8 ದಿನಗಳಿಗೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ. ಹೀಗಾಗಿ, ಜನತೆ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ನೀರು ಸಂಗ್ರಹ ಮಾಡಿಕೊಳ್ಳಲು ಬ್ಯಾರೆಲ್‌ ಇದ್ದರೂ ಎಂಟು ದಿನಗಳಿಗೆ ಬೇಕಾಗುವಷ್ಟು ಸಂಗ್ರಹ ಮಾಡಕೊಳ್ಳುವುದು ಅಸಾಧ್ಯ’ ಎಂದೆನ್ನುತ್ತಾರೆ ಬಡಾವಣೆ ನಿವಾಸಿ ಸತೀಶ.

**
ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಲು ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತದೆ. ಆದರೆ, ಸಮರ್ಪಕ ರೀತಿಯಲ್ಲಿ ನೀರು ಪೂರೈಕೆಯಾಗುತ್ತಿಲ್ಲ. ಹಾಗಾಗಿ, ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ’ ಎನ್ನುತ್ತಾರೆ
ಶಿವಕುಮಾರ ಹಳ್ಯಾಳ

**
ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲಿನ ಕೊಳವೆಬಾವಿಗಳು ಬತ್ತಿವೆ. ಹೀಗಾಗಿ, ಟ್ಯಾಂಕರ್‌ ಬಳಸುತ್ತಿದ್ದೇವೆ. ನೀರಿನ ಸಮಸ್ಯೆ ಪರಿಹರಿಸಲು ಕ್ರಮಕೈಗೊಂಡಿದ್ದೇವೆ
ಚಂದ್ರಪ್ಪ, ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್

**
ರಾಜೀವ್‌ ಗಾಂಧಿ ನಗರದಲ್ಲಿರುವ ಸಮಸ್ಯೆಯನ್ನು ಬಗೆಹರಿಸಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಕೂಡಲೇ ಮುಮದಾಗಬೇಕು
ರಮೇಶ ನಾಝರೆ, ರಾಜೀವ್ ಗಾಂಧಿ ನಗರ ನಿವಾಸಿ.

**
ಪ್ರತಿ ವರ್ಷ ಬೇಸಿಗೆ ಆರಂಭದಿಂದಲೇ ಕುಡಿಯುವ ನೀರಿನ ಸಮಸ್ಯೆ ಪ್ರಾರಂಭವಾಗುತ್ತದೆ. ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಎರಡೂ ಸ್ಥಗಿತಗೊಂಡಿವೆ. ಕೂಡಲೇ ಸರಿಪಡಿಸಬೇಕು
ಸತೀಶ ಕೊಣ್ಣೂರ, ರಾಜೀವ್ ಗಾಂಧಿ ನಗರ ನಿವಾಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.