ADVERTISEMENT

ಖಾಸಗಿ ವ್ಯಕಿ್ತಗಳ ಪ್ರವೇಶಕ್ಕೆ ಅನುಮತಿ ಕಡ್ಡಾ ಯ

ಎಪಿಎಂಸಿ: ಸಾಮಾನ್ಯ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 5:53 IST
Last Updated 17 ಡಿಸೆಂಬರ್ 2013, 5:53 IST

ಹುಬ್ಬಳ್ಳಿ: ಇಲ್ಲಿನ ಅಮರಗೋಳ ಎಪಿಎಂಸಿ ಪ್ರಾಂಗಣದೊಳಗೆ ಕೃಷಿ ಉತ್ಪನ್ನಗಳನ್ನು ಮಾರಾಟಕ್ಕೆ ತರುವ ರೈತರ ಹೊರತುಪಡಿಸಿ ಬೇರೆಯವರ ಪ್ರವೇಶ ನಿಷೇಧಿಸಿ ಮಾರುಕಟ್ಟೆ ಆಡಳಿತ ಆದೇಶ ಹೊರಡಿಸಿದೆ.

ಕಳೆದ 13ರಂದು ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಮೇಲಿನಂತೆ ತೀರ್ಮಾನ ಕೈಗೊಂಡು ಅದೇ ದಿನದಿಂದ ಜಾರಿಯಾಗುವಂತೆ ಆದೇಶ ಹೊರಡಿಸಲಾಗಿದೆ. ಪದೇ ಪದೇ ಬಾಹ್ಯ ಶಕ್ತಿಗಳು ಮಾರುಕಟ್ಟೆಯಲ್ಲಿ ಗಲಭೆಗೆ ಪ್ರಚೋದಿಸುತ್ತಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದ ಪ್ರತಿಯಲ್ಲಿ ಸ್ಪಷ್ಟಪಡಿಸಲಾಗಿದೆ.

ಆದೇಶದನ್ವಯ ಇನ್ನು ಮುಂದೆ ಅಮರ­ಗೋಳದ ಮುಖ್ಯ ಮಾರುಕಟ್ಟೆ ಪ್ರಾಂಗಣ­ದೊಳಗೆ ರೈತರು, ವರ್ತಕರು. ಖರೀದಿದಾರರು, ಹಮಾಲರು, ಎಪಿಎಂಸಿ ಅಧಿಕಾರಿಗಳು, ಸಿಬ್ಬಂದಿ, ಆಡಳಿತ ಮಂಡಳಿ ಸದಸ್ಯರು ಹಾಗೂ ಮಾರು­ಕಟ್ಟೆಯೊಳಗೆ ಕೆಲಸ ಮಾಡುವವರ ಹೊರತಾಗಿ ಖಾಸಗಿ ವ್ಯಕ್ತಿ, ವಾಹನಗಳ ಪ್ರವೇಶ ನಿಷೇಧಿಸಲಾಗಿದೆ.

ಅಕಸ್ಮಾತ್ ಪ್ರಾಂಗಣದೊಳಗೆ ತೆರಳುವ ಅನಿ­ವಾರ್ಯತೆ ಇರುವವರು ಸೂಕ್ತ ಕಾರಣ ನೀಡಿ ಆಡಳಿತ ಸಮಿತಿಯಿಂದ ಅನುಮತಿ ಪಡೆದು ನಂತರ ಒಳಗೆ ಪ್ರವೇಶಿಸಬಹುದಾಗಿದೆ.

ಏನಿದು ಸ್ಥಾಯಿ ಆದೇಶ: 1966ರ ಕರ್ನಾ­ಟಕ ಕೃಷಿ ಉತ್ಪನ್ನ ಮಾರಾಟ (ನಿಯಂತ್ರಣ ಮತ್ತು ಅಭಿವೃದ್ಧಿ) ಶಾಸನದ ಎರಡನೇ ಪರಿಚ್ಛೇ­ದದ 42ನೇ ನಿಯಮಾವಳಿ ಅನ್ವಯ ಎಪಿಎಂಸಿ ಆವರಣ­ದೊಳಗೆ ಕಾನೂನು ಬಾಹಿರ ಚಟು­ವ­ಟಿಕೆ­­­ಗಳನ್ನು ನಿಯಂತ್ರಿಸಲು ಸಾಮಾನ್ಯ ಸಭೆಯಲ್ಲಿ ಠರಾವು ಮಾಡಿ ನಂತರ ಸ್ಥಳೀಯ­ವಾಗಿ ಆದೇಶ ರೂಪದಲ್ಲಿ ಹೊರಡಿಸಬಹುದಾಗಿದೆ.

ಕಾನೂನು ಕ್ರಮಕ್ಕೆ ಅವಕಾಶ:  ಕಾಯ್ದೆಯ 44ನೇ ನಿಯಮಾವಳಿ ಅನ್ವಯ ಆದೇಶ ಮೀರಿ ಅಕ್ರಮವಾಗಿ ಒಳಗೆ ಪ್ರವೇಶಿಸಿದವರು, ಆವರಣ­ದೊಳಗೆ ಗಲಭೆಗೆ ಪ್ರಚೋದಿಸಿದವರು. ಮಾರು­ಕಟ್ಟೆಯ ಆಸ್ತಿಗೆ ಧಕ್ಕೆಯುಂಟು ಮಾಡು­ವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಮಿತಿಗೆ ಅವಕಾಶವಿರುತ್ತದೆ.

ಸ್ವಾಸ್ಥ್ಯ ಕಾಪಾಡಲು ಕ್ರಮ ಅನಿವಾರ್ಯ...: ಅಮರಗೋಳ ಎಪಿಎಂಸಿ ಮಾರುಕಟ್ಟೆಯ ಸ್ವಾಸ್ಥ್ಯ ಕಾಪಾಡಲು ಈ ಆದೇಶ ಅನಿವಾರ್ಯ ಎನ್ನು­ತ್ತಾರೆ ಮಾರುಕಟ್ಟೆ ಸಮಿತಿ ಅಧ್ಯಕ್ಷ ಸುರೇಶ ದಾಸನೂರ. ಕಾಯ್ದೆಯಡಿ ನಾವು ರೈತರು ಮಾರುಕಟ್ಟೆ ಪ್ರವೇಶಿಸುವುದನ್ನು ಅಥವಾ ಅವರು ಪ್ರತಿಭಟನೆ ಮಾಡುವುದನ್ನು ನಿಷೇಧಿ­ಸುತ್ತಿಲ್ಲ. ಬದಲಿಗೆ ಪಟ್ಟಭದ್ರ ಹಿತಾಸಕ್ತಿಗಳಿಂದ ಮಾರುಕಟ್ಟೆ ರಕ್ಷಿಸಬೇಕಿದೆ. ಆದೇಶದ ಕುರಿತು ಜಿಲ್ಲಾಡಳಿತಕ್ಕೂ ಮಾಹಿತಿ ನೀಡಲಾಗಿದೆ ಎಂದು ದಾಸನೂರ ಹೇಳುತ್ತಾರೆ.

‘ದುರುದ್ದೇಶವಿದ್ದರೆ ವಿರೋಧ’
ರೈತರ ಹೊರತಾಗಿ ಗಲಭೆ ಸೃಷ್ಟಿಸಲು ಬರುವವರ ನಿಯಂತ್ರಿಸಲು ಆದೇಶ ಹೊರ­ಡಿಸಿದಲ್ಲಿ ಅದು ಸ್ವಾಗತಾರ್ಹ. ಆದರೆ ಅದು ದುರುದ್ದೇಶದಿಂದ ಕೂಡಿದಲ್ಲಿ ವಿರೋಧಿಸುತ್ತೇವೆ ಎಂದು ರಾಜ್ಯ ಪಕ್ಷಾತೀತ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಿ.ಎಂ.ಹನಸಿ. ‘ರಾಜಕೀಯ ದುರುದ್ದೇಶಕ್ಕಾಗಿ ಕೆಲವರು ರೈತರನ್ನು ಪ್ರಚೋದಿ­ಸುತ್ತಿದ್ದಾರೆ.  ಎಪಿಎಂಸಿಯ ಈ ಕ್ರಮ ಸೂಕ್ತ’ ಎಂದು ಉಳ್ಳಾಗಡ್ಡಿ ವ್ಯಾಪಾರಸ್ಥ ಮಹೇಶ ಗದಗ ಹೇಳುತ್ತಾರೆ.

ಮಾರುಕಟ್ಟೆಯ ವ್ಯವಸ್ಥಿತ ನಿರ್ವಹಣೆಗೆ ಇಂತಹ­ದೊಂದು ಆದೇಶ ಅಗತ್ಯವಿತ್ತು ಅದೇ ನೆಪ­ದಲ್ಲಿ ಪ್ರಜಾಸತ್ತಾತ್ಮಕವಾಗಿ ನಡೆಯುವ ಹೋರಾಟಗಳ ಹತ್ತಿಕ್ಕಬಾರದು ಎಂಬುದು ರಾಜ್ಯ ಹಮಾಲರ ಸಂಘದ ಅಧ್ಯಕ್ಷ ಮಹೇಶ ಪತ್ತಾರ ಅನಿಸಿಕೆ.

ಪೊಲೀಸ್ ರಕ್ಷಣೆಯಲ್ಲಿ ವಹಿವಾಟು ಆರಂಭ...

ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಪೊಲೀಸರ ರಕ್ಷಣೆಯಲ್ಲಿ ಉಳ್ಳಾಗಡ್ಡಿ ವಹಿ­ವಾಟು ಪುನಾರಂಭವಾಯಿತು. ನವನಗರ ಠಾಣೆ ಇನ್ ಸ್ಪೆಕ್ಟರ್ ಕೆ.ಡಿ.ಪುಟ್ಟಯ್ಯ ನೇತೃತ್ವದಲ್ಲಿ ಭದ್ರತೆ ನೀಡಲಾಗಿತ್ತು. ಮಾರು­ಕಟ್ಟೆಗೆ 8,279 ಕ್ವಿಂಟಲ್ ಉಳ್ಳಾಗಡ್ಡಿ ಆವಕವಾಗಿದ್ದು, ಸ್ಥಳೀಯ ಈರುಳ್ಳಿಗೆ ಮಾದರಿ ಬೆಲೆ ಕ್ವಿಂಟಲ್ ಗೆ ರ₨900 ಇದ್ದು, ಪೂನ ಉಳ್ಳಾಗಡ್ಡಿ ₨1000 ಹಾಗೂ ತೆಲಗಿ ತಳಿ ಕ್ವಿಂಟಲ್ ಗೆ ₨950 ಬೆಲೆ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT