ADVERTISEMENT

ಗುರುರಾಜ ಹುಣಸಿಮರದ ಹೇಳಿಕೆ ದಾಖಲು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 8:40 IST
Last Updated 4 ಡಿಸೆಂಬರ್ 2017, 8:40 IST
ಧಾರವಾಡದ ಗಾಂಧಿನಗರದಲ್ಲಿರುವ ಗುರುರಾಜ ಹುಣಸೀಮರದ ಅವರ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿ, ವಿಚಾರಣೆ ನಡೆಸಿದ ಬಳಿಕ ಹೊರಬಂದ ರವೀಂದ್ರ ಗಡಾದ.
ಧಾರವಾಡದ ಗಾಂಧಿನಗರದಲ್ಲಿರುವ ಗುರುರಾಜ ಹುಣಸೀಮರದ ಅವರ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿ, ವಿಚಾರಣೆ ನಡೆಸಿದ ಬಳಿಕ ಹೊರಬಂದ ರವೀಂದ್ರ ಗಡಾದ.   

ಧಾರವಾಡ: ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಡಿವೈಎಸ್‌ಪಿಗಳು ರಾಜಿಗೆ ಯತ್ನಿಸಿದ್ದಾರೆ ಎಂಬ ಗುರುನಾಥಗೌಡ ಗೌಡರ ಆರೋಪಕ್ಕೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಗೆ ನೇಮಕಗೊಂಡಿರುವ ಬೆಳಗಾವಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರವೀಂದ್ರ ಗಡಾದ, ಭಾನುವಾರ ಜೆಡಿಎಸ್‌ ಮುಖಂಡ ಗುರುರಾಜ ಹುಣಸಿಮರದ ಅವರ ಹೇಳಿಕೆ ದಾಖಲಿಸಿಕೊಂಡರು.

ಇಲ್ಲಿನ ಗಾಂಧಿನಗರದಲ್ಲಿರುವ ಹುಣಸಿಮರದ ಅವರ ಮನೆಗೆ ಭೇಟಿ ನೀಡಿದ ಗಡಾದ, ಒಂದೂವರೆ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡರು.

ನಂತರ ಹೊರ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲಿ ವರದಿ ನೀಡುವಂತೆ ಐಜಿಪಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆದಷ್ಟು ಬೇಗ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು

ADVERTISEMENT

ನಂತರ ಮಾತನಾಡಿದ ಗುರುರಾಜ ಹುಣಸಿಮರದ, ‘ಮೊರಬದಲ್ಲಿ ಕಳೆದ ಹಲವು ವರ್ಷಗಳಿಂದ ಅಂತೆ, ಕಂತೆ ಆಧಾರದ ಮೇಲೆಯೇ ಹಲವು ಕೊಲೆಗಳು ನಡೆದಿವೆ. ಯೋಗೀಶಗೌಡ ಕೊಲೆಗೆ ಸಂಬಂಧಿಸಿದಂತೆ ಸಚಿವ ವಿನಯ ಕುಲಕರ್ಣಿ ಹಾಗೂ ಗುರುನಾಥಗೌಡ ಕುರಿತಂತೆ ಹೊರಗೆ ಇಲ್ಲಸಲ್ಲದ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಇಬ್ಬರಿಗೂ ಪರಸ್ಪರ ಅಪನಂಬಿಕೆ ಮೂಡದಿರಲಿ ಎಂದು ಈ ಸಭೆ ನಡೆಸಿದ್ದು ನಿಜ. ಆದರೆ, ಕೊಲೆ ಆರೋಪಿಗಳ ರಕ್ಷಣೆಗೆ ಸಂಧಾನದ ಮಾತುಕತೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ನ.10 ರಂದು ನಾನು ಪಕ್ಷದ ಸಭೆಗಾಗಿ ಸರ್ಕೀಟ್‌ ಹೌಸ್‌ನಲ್ಲಿ ಇದ್ದೆ. ಅಲ್ಲಿಗೆ ಗುರುನಾಥ ಗೌಡ ಹಾಗೂ ಬೆಳಗಾವಿ ಐಜಿ ಕಚೇರಿಯ ಡಿವೈಎಸ್‌ಪಿ ತುಳಜಪ್ಪ ಸುಲ್ಫಿ ಬಂದರು. ಸಚಿವರ ಭೇಟಿಗೆ ಬರಹೇಳಿದ್ದಾರೆ ಎಂದರು. ಅಲ್ಲಿಗೆ ಹೋಟೆಲ್‌ ಉದ್ಯಮಿ ಮಹೇಶ ಶೆಟ್ಟಿ ಅವರೂ ಬಂದು ತಮ್ಮ ಮನೆಯಲ್ಲೇ ಸಭೆ ನಡೆಸೋಣ ಎಂದರು. ಸ್ಥಳಕ್ಕೆ ಧಾರವಾಡ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ ಹಾಗೂ ವಿನಯ ಕುಲಕರ್ಣಿ ಅವರು ಬಂದರು. ನಂತರ ಮಾತು ಆರಂಭಿಸಿದ ನಾನು, ಇಬ್ಬರ ನಡುವೆ ಪರಸ್ಪರ ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲದಂತೆ ಮುಕ್ತವಾಗಿ ಚರ್ಚಿಸಿ ಗೊಂದಲ ನಿವಾರಿಸಿಕೊಳ್ಳಿ ಎಂದೆ. ತಡರಾತ್ರಿ 11.30ರವರೆಗೆ ಮಾತುಕತೆ ನಡೆಯಿತು’ ಎಂದು ಹೇಳಿದರು.

'ನಾನೊಬ್ಬ ವಕೀಲನಾಗಿ ಹಾಗೂ ಸಕ್ರಿಯ ರಾಜಕಾರಣದಲ್ಲಿರುವ ನನಗೆ ಯಾವ ವಿಷಯದಲ್ಲಿ ಪಾಲ್ಗೊಳ್ಳಬೇಕು ಎಂಬ ಜ್ಞಾನವಿದೆ. ಇದು ಜಿಲ್ಲೆಯ ಹಿತದೃಷ್ಟಿಯಿಂದ ಮಾಡಿದ ಕಾರ್ಯ. ಇಲ್ಲಿ ಯಾವುದೇ ಕೊಲೆ ಆರೋಪಿಗಳ ರಕ್ಷಣೆಗೆ ಪ್ರಯತ್ನ ನಡೆದಿಲ್ಲ’ ಎಂದು ಹುಣಸಿಮರದ ಸ್ಪಷ್ಟಪಡಿಸಿದರು.

* * 

ಎಎಸ್‌ಪಿ ಅವರಿಗೂ ಅಂದು ನಡೆದ ಘಟನೆಯನ್ನೇ ವಿವರಿಸಿದ್ದೇನೆ. ಈ ಮಾತುಕತೆ ನಡೆದಿದೆಯೇ ಹೊರತು, ಸಂಧಾನವಲ್ಲ
ಗುರುರಾಜ ಹುಣಸಿಮರದ
ಜೆಡಿಎಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.