ADVERTISEMENT

ತಮಾಟಗಾರ ಸತ್ಯಾಗ್ರಹ ಆರಂಭ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 9:20 IST
Last Updated 7 ಅಕ್ಟೋಬರ್ 2011, 9:20 IST

ಧಾರವಾಡ: ನಗರದ ಸೂಪರ್ ಮಾರ್ಕೆಟ್‌ಗೆ ಮೂಲಭೂತ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಜೆಡಿಎಸ್ ಶಹರ  ಘಟಕದ ಕಾರ್ಯದರ್ಶಿ ಇಸ್ಮಾಯಿಲ್ ತಮಾಟಗಾರ ಸುಭಾಷ ರಸ್ತೆಯಲ್ಲಿ ಗುರುವಾರ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಇದುವರೆಗೆ ಅನೇಕ ಬಾರಿ ಶಾಸಕರು, ಮೇಯರ್, ಪಾಲಿಕೆ ಆಯುಕ್ತರು, ಸದಸ್ಯರು ಹಾಗೂ ಅಧಿಕಾರಿಗಳು ಭೇಟಿ ನೀಡಿದರೂ ಸಹ ಯಾವುದೇ ಅಭಿವೃದ್ದಿ ಕಾರ್ಯ ಆಗಿಲ್ಲ. ಆಡಳಿತ ಪಕ್ಷ ಈ ವಿಷಯದಲ್ಲಿ ನಿರ್ಲಕ್ಷ್ಯ ತಾಳಿದೆ. ಅದನ್ನ್ನು ಖಂಡಿಸಿ ಈ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು ಜನತೆ ಈ ಸತ್ಯಾಗ್ರಹಕ್ಕೆ ಬೆಂಬಲ ನೀಡಬೇಕು ಎಂದು ಪಕ್ಷದ ಮುಖಂಡರು ಕೋರಿದರು.

ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದಲ್ಲಿ ಸೂಪರ್ ಮಾರುಕಟ್ಟೆಯ ಅವಲೋಕನ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹೊರಟ್ಟಿ, ಧಾರವಾಡದ ಸೂಪರ್ ಮಾರ್ಕೆಟ್ ಅನ್ನು ಇದುವರೆಗೆ ಅಭಿವೃದ್ಧಿ ಮಾಡದಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯ ಸರ್ಕಾರ ಮಾರುಕಟ್ಟೆ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ತಮಾಟಗಾರ ಕೈಗೊಂಡಿರುವ ಹೋರಾಟಕ್ಕೆ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದರು.


ತರಕಾರಿ, ಮೀನು, ಮಟನ್ ಮಾರ್ಕೆಟ್ ಇರುವ ಈ ಪ್ರದೇಶದಲ್ಲಿ ರಸ್ತೆ, ಗಟಾರು, ನೀರು, ಶೌಚಾಲಯದ ಸೌಲಭ್ಯವಿಲ್ಲದ ಕಾರಣ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಕುರಿತು ಪಾಲಿಕೆಗೆ ಹಲವು ಬಾರಿ ಮನವಿ ಮಾಡಿಕೊಂಡರೂ ಪಾಲಿಕೆ ಈ ಕಡೆ ಗಮನ ಹರಿಸಿಲ್ಲ ಎಂದು ಆರೋಪಿಸಿದರು.

ಎನ್.ಎಚ್. ಕೋನರೆಡ್ಡಿ, ಸುರೇಶ ಹಿರೇಮಠ, ಮೋಹನ ಅರ್ಕಸಾಲಿ, ಮುಜಾಹಿದ್ ಕಾಂಟ್ರ್ಯಾಕ್ಟರ್, ಪಾಲಿಕೆ ಸದಸ್ಯರಾದ ರಾಜಣ್ಣ ಕೊರವಿ, ವಿಜಯಲಕ್ಷ್ಮೀ ಲೂತಿಮಠ, ಸರೋಜಾ ಪಾಟೀಲ, ಖಾತೂನಬಿ ತಮಾಟಗಾರ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT