ADVERTISEMENT

ತೇಲಂಗ ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2011, 5:35 IST
Last Updated 3 ಜೂನ್ 2011, 5:35 IST

ಕಾರವಾರ: ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿ ನಗರದ ತೇಲಂಗ ರಸ್ತೆಯ ನಿವಾಸಿಗಳು ನಗರಸಭೆ ಎದುರು ಗುರುವಾರ ಪ್ರತಿಭಟನೆ ನಡೆಸಿದರು.ಕಳೆದ ಎರಡು ವರ್ಷದಿಂದ ತೇಲಂಗ ರಸ್ತೆ ಸ್ಥಿತಿ ಶೋಚನೀಯವಾಗಿದೆ. ವಾಹನ ಓಡಾಟಕ್ಕಲ್ಲ ಸಾರ್ವಜನಿಕರ ನಡೆದಾಟಕ್ಕೂ ಯೋಗ್ಯವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ರಸ್ತೆ ದುರಸ್ತಿಗೆ ಆಗ್ರಹಿಸಿ ಮೂರು ತಿಂಗಳ ಹಿಂದೆ ಕಾಜುಭಾಗ- ನಂದನಗದ್ದಾ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್ ಹಾಗೂ ನಗರಸಭೆ ಆಯುಕ್ತ ಎ.ಡಿ. ರೇವಣಕರ್ ತಕ್ಷಣವೇ ರಸ್ತೆ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ್ದರು.

ಈ ಭರವಸೆ ನೀಡಿ ತಿಂಗಳುಗಳೇ ಕಳೆದಿವೆ ಆದರೂ ರಸ್ತೆ ಮಾತ್ರ ದುರಸ್ತಿ ಕಂಡಿಲ್ಲ. ಮಳೆ ಬೀಳಲು ಪ್ರಾರಂಭವಾದ ರಂತೂ ಈ ರಸ್ತೆಯಲ್ಲಿ ನಡೆದಾಡಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷರು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಆದರೆ ತೀವ್ರ ಆಕ್ರೋಶ ಭರಿತರಾದ ಪ್ರತಿಭಟನಾಕಾರರ ಹಾಗೂ ಅಧ್ಯಕ್ಷರ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಗರಸಭೆ ಆವರಣದಲ್ಲಿ ಕೆಲಹೊತ್ತು ಏನು ನಡೆಯುತ್ತಿದೆ ಎನ್ನುವುದು ತಿಳಿಯಲ್ಲಿಲ್ಲ.ನಂತರ ನಗರಸಭೆ ಅಧ್ಯಕ್ಷರು ಇಂದು ಸಂಜೆಯೇ ಕಾಮಗಾರಿ ಆರಂಭಿಸುವ ಭರವಸೆ ನೀಡಿದ ಮೇಲೆ ಪ್ರತಿಭಟನಾಕಾರರು ಶಾಂತರಾದರು.

ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಕೃಷ್ಣಾ ಕೊಚರೇಕರ್, ಸಂದೇಶ ನಾಯ್ಕ, ಮಹಾದೇವ ನಾಯ್ಕ, ಶ್ಯಾಮ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.