ADVERTISEMENT

ದಸರಾ: ವಸ್ತುಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 5:50 IST
Last Updated 15 ಅಕ್ಟೋಬರ್ 2012, 5:50 IST

ಧಾರವಾಡ: `ಸರ್ಕಾರದಿಂದ ಧಾರ ವಾಡ ಜಿಲ್ಲಾ ಜಂಬೂ ಸವಾರಿ ಸಮಿತಿಗೆ ಮುಖ್ಯಮಂತ್ರಿಗಳೊಡನೆ ಮಾತನಾಡಿ ತವರು ಜಿಲ್ಲೆಯ ದಸರಾ ಜಂಬೂ ಸವಾರಿ ಉತ್ಸವಕ್ಕೆ ಧನ ಸಹಾಯ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು~ ಎಂದು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಭೀಮಸೇನ್‌ರಾವ್ ಶಿಂಧೆ ಹೇಳಿದರು.

ಇಲ್ಲಿಯ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಕಡಪಾ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಖಾದಿ ಮತ್ತು ಗೃಹಬಳಕೆ ವಸ್ತು ಪ್ರದರ್ಶನ ಮತ್ತು ಮಾರಾಟ ಕಾಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವಿಜಯ ದಶಮಿ ಹಬ್ಬದ ಅಂಗವಾಗಿ ಆಚರಿಸುವ ದಸರಾ ಜಂಬೂ ಸವಾರಿ ದೇಶದ ಹೆಮ್ಮೆಯ ಮತ್ತು ಸಾಂಸ್ಕೃತಿಕ ಹಿರಿಮೆಯ ಪ್ರತೀಕವಾಗಿದೆ. ಮೈಸೂರಿನ ದಸರಾ ನೋಡುವ ಭಾಗ್ಯ ವಂಚಿತ ಸಾರ್ವಜನಿಕರಿಗೆ ಪರ್ಯಾಯವಾಗಿ ಹಾಗೂ ಅಷ್ಟೇ ಸಂಭ್ರಮದ ದಸರಾ ಜಂಬೂ ಸವಾರಿ ನೋಡುವ ಸುಯೋಗವನ್ನು ಇಲ್ಲಿಯ ಉತ್ಸವ ಸಮಿತಿ ಕಲ್ಪಿಸಿದ್ದು ನಿಜಕ್ಕೂ ಶ್ಲಾಘನೀಯ~ ಎಂದರು.

ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಮಾತನಾಡಿ, `ಸತತ 10 ವರ್ಷಗಳಿಂದ ನಗರದಲ್ಲಿ ಜನತೆಯ ಅಭಿಮಾನದ ಪ್ರತೀಕವಾಗಿ ಸರ್ವ ಧರ್ಮ ಸಹಿಷ್ಣುತೆ ಹಬ್ಬವಾಗಿ ಸಾಂಸ್ಕೃತಿಕ ಹಿರಿಮೆಯ ದ್ಯೋತಕವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ವಿಜಯ ದಶಮಿ ಅಂಗವಾಗಿ ದಸರಾ ಜಂಬೂ ಸವಾರಿ ಕಾರ್ಯಕ್ರಮ ನಡೆಸುತ್ತ ಬರಲಾಗುತ್ತಿದೆ~ ಎಂದರು.

ಪಾಲಿಕೆ ಸಭಾನಾಯಕ ಪ್ರಕಾಶ ಗೋಡಬೋಲೆ ಮಾತನಾಡಿದರು.  ಮುಖ್ಯಮಂತ್ರಿಗಳ ಇನ್ನೊಬ್ಬ ಜಂಟಿ ಕಾರ್ಯದರ್ಶಿ ಜೋಶಿ, ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ರಾಜೇಂದ್ರ ಕಪಲಿ, ಎಸ್.ಬಿ.ಬಸವರಾಜ ಗದಗ ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ, ಎಸ್.ಎಸ್. ಬಸವರಾಜ, ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ನಾರಾಯಣ ಕೋಪರ್ಡೆ ಇದ್ದರು. ರಂಜಿತಾ ಹಾಗೂ ಸೋನಾಲಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.