ADVERTISEMENT

ದೇಶದ ಆರೋಗ್ಯ ವೈದ್ಯರ ಕೈಯಲ್ಲಿ: ಲಾಡ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2013, 5:03 IST
Last Updated 8 ಜುಲೈ 2013, 5:03 IST

ಹುಬ್ಬಳ್ಳಿ: `ದೇಶದ ಆರೋಗ್ಯ ವೈದ್ಯ ಸಮೂಹದ ಕೈಯಲ್ಲಿದ್ದು, ಸೇವಾ ಮನೋಭಾವದಿಂದ ಅದನ್ನು ಕಾಪಾಡುವ ಕೆಲಸ ಮಾಡಬೇಕಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಕಿವಿಮಾತು ಹೇಳಿದರು.

ಇಲ್ಲಿನ ಐಎಂಎ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘದ ಹುಬ್ಬಳ್ಳಿ ಶಾಖೆ ವತಿಯಿಂದ ಭಾನುವಾರ ನಡೆದ ಡಾ.ಬಿ.ಸಿ.ರಾಯ್ ಜನ್ಮದಿನ ಹಾಗೂ ವೈದ್ಯರ ದಿನ ಆಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈದ್ಯಕೀಯ ಕ್ಷೇತ್ರ ಸೇರಿದಂತೆ ವಿವಿಧ ರಂಗಗಳಲ್ಲಿ ಇಂದು ಸೇವಾ ಮನೋಭಾವನೆ ಕಾಣೆಯಾಗಿ ಹಣ ಗಳಿಕೆ ಪ್ರಾಮುಖ್ಯತೆ ಪಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಿದ ಅವರು, ಸರಿ-ತಪ್ಪುಗಳ ಆತ್ಮವಿಮರ್ಶೆಯ ಮೂಲಕ ಆಗಿರುವ ಸೇವೆಗೆ ಆದ್ಯತೆ ನೀಡೋಣ  ಎಂದು ಸಲಹೆ ನೀಡಿದರು.

ಜನಸಾಮಾನ್ಯರಿಗೆ ವೈದ್ಯಕೀಯ ಸೇವೆ ಸುಲಭವಾಗಿ ದೊರೆಯುವಂತೆ ಎಲ್ಲರೂ ಪ್ರಯತ್ನಿಸೋಣ ಎಂದರು.
ಸಮಾರಂಭದಲ್ಲಿ ಜೀವಮಾನಸಾಧನೆಗಾಗಿ ಐಎಂಎ ಪುರಸ್ಕಾರ ಪಡೆದ ಡಾ.ಜಯಲಕ್ಷ್ಮಿ ಕಾಮತ್ ಮಾತನಾಡಿ, `ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮ ಹೇಳಿದಂತೆ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವ ಕೆಲಸ ಪ್ರಾಮಾಣಿಕವಾಗಿ ಮಾಡಿದರೆ ಒಂದಿಲ್ಲೊಂದು ದಿನ ಯಶಸ್ಸು ದೊರೆಯಲಿದೆ ಎಂಬ ಧ್ಯೇಯವನ್ನು ಅನುಸರಿಸೋಣ' ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಡಾ.ಬಿ.ಸಿ.ರಾಯ್ ಅವರ ಜೀವನಗಾಥೆ ಬಿಡಿಸಿಟ್ಟ ಐಎಂಎಯ  ಡಾ.ಭೂಷಣ ಗ್ರಾಮೋಪಾಧ್ಯಾಯ, ಕೋಲ್ಕತ್ತಾದಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿ ವೈದ್ಯಕೀಯ ಶಿಕ್ಷಣ ಪಡೆದ  ಡಾ.ಬಿ.ಸಿ.ರಾಯ್, ಸೈಕಲ್‌ನಲ್ಲಿ ರೋಗಿಗಳ ಬಳಿಗೆ ತೆರಳಿ ಆರೈಕೆ ಮಾಡುತ್ತಾ ಮೊಬೈಲ್ ವೈದ್ಯರು ಎಂದು ಹೆಸರಾಗಿದ್ದರು. ಬಿ.ಸಿ.ರಾಯ್ ಅವರ ಸೇವೆಯನ್ನು ಸ್ವತಃ ಬ್ರೀಟೀಷರು ಗುರುತಿಸಿದ್ದರು. ಜನಸಾಮಾನ್ಯರ ಬಗ್ಗೆ ಇದ್ದ ಅವರ ಕಾಳಜಿಯೇ ಮುಂದೆ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಲು ಅವಕಾಶ ಕಲ್ಪಿಸಿತು ಎಂದರು.

ಡಾ.ಡಿ.ಜಿ.ಹಳ್ಳಿಕೇರಿ ಅವರಿಗೂ ಐಎಂಎಯಿಂದ ನೀಡುವ ಜೀವಮಾನ ಪುರಸ್ಕಾರವನ್ನು ಸಚಿವ ಸಂತೋಷ್‌ಲಾಡ್ ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ 70 ವರ್ಷ ಪೂರೈಸಿದ ವೈದ್ಯ ಡಾ.ಸುಭಾಷ್‌ಜೋಶಿ ದಂಪತಿಯನ್ನು ಐಎಂಎ ವತಿಯಿಂದ ಗೌರವಿಸಲಾಯಿತು.

ಸಮಾರಂಭದಲ್ಲಿ ಐಎಂಎ ಕಾರ್ಯದರ್ಶಿ ಡಾ.ಪ್ರಮೋದ ಜಿ.ಹಿರೇಮಠ ಹಾಜರಿದ್ದರು.
ಸನ್ಮಾನಿತರು: ವೈದ್ಯರ ದಿನದ ಅಂಗವಾಗಿ ಡಾ.ಅಜರ್ ಕಿತ್ತೂರು, ಕಲಘಟಗಿಯ ಡಾ.ವೈ.ಪಿ.ಡಂಬಳ, ಕಿಮ್ಸನ ಡಾ.ಮಂಜುನಾಥ್, ಐಎಂಎ ಮಹಿಳಾ ವೈದ್ಯರ ಸಂಘದ ಅಧ್ಯಕ್ಷೆ ಡಾ.ಶೈಲಜಾ ಸುರೇಶ್, ಉಪಾಧ್ಯಕ್ಷೆ ಡಾ.ಶೈಲಾ ಎನ್.ಹಿರೇಮಠ, ಸಾರ್ವಜನಿಕ ಸೇವೆಯಡಿ ಡಾ.ಮಹೇಶ ನಾಲವಾಡ, ಸಂಗೀತ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಡಾ.ಎಂ.ಬಿ.ಶೆಟ್ಟಿ, ಪರಿಸರ ಕ್ಷೇತ್ರದ ಸೇವೆಗೆ ಡಾ.ಎಂ.ಸಿ.ತಪಶೆಟ್ಟಿ, ವೈದ್ಯಕೀಯ ಕ್ಷೇತ್ರದ ಸೇವೆ ಪರಿಗಣಿಸಿ ಡಾ.ಜಿ.ಬಿ.ಸತ್ತೂರು, ಡಾ.ಬಿ.ಎನ್. ಅಣ್ಣಿಗೇರಿ. ಡಾ.ಆರ್.ಜಿ.ಬಬ್ರುವಾಡ, ಡಾ.ಸಚಿನ್ ರೇವಣಕರ್, ಡಾ.ಎ.ಎಸ್.ಮನಗಾಣಿಕರ್, ಡಾ.ಎಸ್.ವಿ.ಕೊಣ್ಣೂರು, ಡಾ.ಎಚ್‌ಬಿ.ಕೋಟಬಾಗಿ, ಡಾ.ದೇವೇಂದ್ರಪ್ಪ, ಐಎಂಎಯಲ್ಲಿನ ಸೇವೆ, ಸಂಘಟನೆ ಪರಿಗಣಿಸಿ ಡಾ.ಕೆಎಂಪಿ ಸುರೇಶ್ ಅವರನ್ನು ಸಚಿವರು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.