ADVERTISEMENT

ದ್ವಿದಳ ಧಾನ್ಯ ಸಂಶೋಧನಾ ಕೇಂದ್ರ: ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 10:50 IST
Last Updated 20 ಅಕ್ಟೋಬರ್ 2011, 10:50 IST

ಧಾರವಾಡ: ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಖಾನಾಪುರದ ಭಾರತೀಯ ದ್ವಿದಳ ಧಾನ್ಯ ಸಂಶೋಧನಾ ಸಂಸ್ಥೆ ಮಧ್ಯೆ ಪ್ರಾದೇಶಿಕ ದ್ವಿದಳ ಧಾನ್ಯ ಬೆಳೆಗಳ ಸಂಶೋಧನಾ ಕೇಂದ್ರ ಸ್ಥಾಪಿಸುವ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಯಿತು.

ಕೃಷಿ ವಿವಿ ಆವರಣದಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ದೇಶದಲ್ಲಿ ಬೇಳೆ ಕಾಳುಗಳ ಉತ್ಪಾ ದನೆಯನ್ನು ಗರಿಷ್ಠಮಟ್ಟಕ್ಕೆ ಕೊಂಡೊಯ್ಯುವ ಮುಖ್ಯ ಉದ್ದೇಶವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಒಡಂಬಡಿಕೆ ನಡೆಯಿತು.

ಕುಲಪತಿ ಡಾ. ಆರ್.ಆರ್.ಹಂಚಿನಾಳ ಮಾತ ನಾಡಿ, ಕೃಷಿ ವಿವಿಯಲ್ಲಿ ಪ್ರಾದೇಶಿಕ ದ್ವಿದಳ ಧಾನ್ಯಗಳ ಸಂಶೋಧನಾ ಕೇಂದ್ರ ಸ್ಥಾಪಿಸುವ ನಿರ್ಣಯ ಶ್ಲಾಘ ನೀಯ. ಈ ಕೇಂದ್ರದಿಂದ ಉತ್ತಮ ಫಲಿತಾಂಶಗಳನ್ನು ನೀಡಿ ಬೇಳೆಕಾಳುಗಳ ಉತ್ಪಾದನೆಯಲ್ಲಿ ರೈತರಿಗೆ ಸಹಕಾರಿಯಾಗಲಿದೆ ಎಂದರು.

ಸಂಸ್ಥೆಯ ನಿರ್ದೇಶಕ ಡಾ. ಎನ್.ನಡುರಾಜನ್ ಮಾತನಾಡಿ, ಪ್ರಾದೇಶಿಕ ದ್ವಿದಳ ಧಾನ್ಯ ಬೆಳೆಗಳ ಸಂಶೋಧನಾ ಕೇಂದ್ರ ಸ್ಥಾಪಿಸಲು 9 ಹೆಕ್ಟೇರ್ ಕೃಷಿ ಕ್ಷೇತ್ರ ಒದಗಿಸಿದ್ದಕ್ಕೆ ಕೃಷಿ ವಿವಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂಶೋಧನಾ ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸ ಲಾಗುವುದು. ಮುಂಬರುವ ದಿನಗಳಲ್ಲಿ ವಿಜಾಪುರದ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸಹ ಬೇಳೆಕಾಳುಗಳ ಸಂಶೋಧನಾ ಕೇಂದ್ರ ಸ್ಥಾಪಿಸುವ ಬಗ್ಗೆ ಚಿಂತನೆ ನಡೆ ಸಿದ್ದೇವೆ ಎಂದು ಹೇಳಿದರು.

ಡಾ. ನಡುರಾಜನ್ ಹಾಗೂ ಕೃಷಿ ವಿವಿ ಕುಲಸಚಿವ ಡಾ. ಎಚ್.ಎಸ್.ವಿಜಯಕುಮಾರ ಹಸ್ತಾಕ್ಷರ ಹಾಕಿದ ಒಡಂಬಡಿಕೆಯ ಪ್ರತಿಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು.

ಡಾ. ಎನ್.ಪಿ.ಸಿಂಗ್, ಕೃಷಿ ವಿವಿ ಅಧಿಕಾರಿಗಳು, ವಿಜ್ಞಾನಿಗಳು ಉಪಸ್ಥಿತರಿದ್ದರು. ಸಂಶೋಧನಾ ನಿರ್ದೇ ಶಕ ಡಾ. ಎಂ.ಪಿ.ಸಾಲಿಮಠ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.