ADVERTISEMENT

ಧನಂಜಯಗೆ ನೋಟಿಸ್ ನೀಡಿದ್ದು ವಿಷಾದಕರ: ಲಕ್ಷ್ಮೀನಾರಾಯಣ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 5:45 IST
Last Updated 8 ಅಕ್ಟೋಬರ್ 2012, 5:45 IST

ಧಾರವಾಡ: `ಕಾವೇರಿ ನದಿ ನೀರಿನ ವಿವಾದ ಹಾಗೂ ಬರಗಾಲದಂತಹ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಇಲ್ಲ~ ಎಂದು ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ ಹೇಳಿದರು.

ಭಾನುವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, `ಯಡಿಯೂರಪ್ಪ ಅವರದು ಮಗುವಿನಂತ ಮನಸ್ಸು ಅವರು ಪಕ್ಷ ಬಿಡುವ ವಿಚಾರವಿಲ್ಲ. ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ದೊರೆಯಬೇಕಿದೆ. ಅವರು ಪಕ್ಷ ಬಿಡುವ ವಿಚಾರದ ಬಗ್ಗೆ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ನಡೆಯಬೇಕಿದೆ. ಪಕ್ಷದ ಹೈಕಮಾಂಡ್ ಹಾಗೂ ಪಕ್ಷ ಕಟ್ಟಿದ ಪ್ರಮುಖರು ಇದರ ಬಗ್ಗೆ ಆಂತರಿಕ ಚರ್ಚೆ ಮಾಡಬೇಕು.

ಇಲ್ಲವೇ ಪಕ್ಷದ ಹೈಕಮಾಂಡ್ ಯಡಿಯೂರಪ್ಪ ಅವರನ್ನು ದೆಹಲಿಗೆ ಕರೆಸಿ ಚರ್ಚೆ ನಡೆಸಬೇಕಿತ್ತು. ಅವರು ಪಕ್ಷ ತೊರೆಯುವ ವಿಚಾರ ಕೈಗೊಂಡಿದ್ದು ಏಕೆ? ಅವರ ಮನಸ್ಸಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡವರು ಯಾರು?

ಎಂಬುದರ ಬಗ್ಗೆ ಸಮಗ್ರವಾದ ಚರ್ಚೆ ನಡೆಯಬೇಕಿದೆ. ಬಿಜೆಪಿ ಹಿರಿಯ ನಾಯಕ ಧನಂಜಯಕುಮಾರ ಅವರಿಗೆ ನೋಟಿಸ್ ನೀಡಿರುವುದು ತುಂಬಾ ಬೇಸರ ಮೂಡಿಸಿದೆ. ಇಂಥ ಆಂತರಿಕ ವಿಷಯಗಳ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಜರುಗಿಸಬಹುದಿತ್ತು~ ಎಂದು ಅಭಿಪ್ರಾಯಪಟ್ಟರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.