ADVERTISEMENT

ನೀರಿಲ್ಲ, ಬೆಳಕಿಲ್ಲ ಇದು ಕಂದ್ಲಿ ಗ್ರಾಮ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 6:20 IST
Last Updated 1 ಆಗಸ್ಟ್ 2013, 6:20 IST

ಕಲಘಟಗಿ: ತಾಲ್ಲೂಕಿನ ಕೊನೆಯ ಹಳ್ಳಿಯಾಗಿರುವ ಕಂದ್ಲಿ ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ವಿದ್ಯುತ್ ಸೌಲಭ್ಯ ಇಲ್ಲವಾಗಿದ್ದು, ಇಡೀ ಗ್ರಾಮ ಕತ್ತಲೆಯಲ್ಲಿ ಮುಳುಗಿದೆ.

ಒಂದೆಡೆ ಹಿನ್ನೀರು, ಸುತ್ತ ಕಾಡಿನ ನಡುವೆ ಇರುವ ನೂರಾರು ಮನೆಗಳಲ್ಲಿ ವಿದ್ಯುತ್ ದೀಪ ಹೊತ್ತದೇ ನಾಲ್ಕು ದಿನಗಳಾಗಿದೆ. ಇದರಿಂದ ಮೊಬೈಲ್ ಚಾರ್ಜ್ ಸಹ ಇಲ್ಲವಾಗಿದ್ದು ಹೊರಗಿನವರ ಸಂಪರ್ಕ ಕಡಿದುಹೋಗಿದೆ. ವಿದ್ಯುತ್ ಇಲ್ಲದಿರುವುದರಿಂದ ಕುಡಿಯುವ ನೀರಿಗೂ ಬರ ಬಂದಂತಾಗಿದೆ.

ಗ್ರಾಮದಲ್ಲಿ ಮೇಲ್ಮಟ್ಟದ ಜಲಾಗಾರದ ಸೌಲಭ್ಯ ಇಲ್ಲದಿರುವುದರಿಂದ ಕೊಳವೆ ಬಾವಿಯ ನೀರನ್ನು ನೇರವಾಗಿ ಮನೆಗಳಿಗೆ ಪೂರೈಸಲಾಗುತ್ತಿತ್ತು. ವಿದ್ಯುತ್ ಇಲ್ಲದಿರುವು ದರಿಂದ ಜಲಾಶಯದ ಹಿನ್ನೀರ ನೀರನ್ನೇ ಕುಡಿಯುವಂತಾಗಿದೆ. ಗ್ರಾಮ ಪಟ್ಟಣದಿಂದ ದೂರ ಇರುವುದಲ್ಲದೇ, ಕಾಡಿನಲ್ಲಿ ಇರುವುದರಿಂದ ದಿನದ 24 ಗಂಟೆಯೂ ವಿದ್ಯುತ್ ಸೌಲಭ್ಯ ಒದಗಿಸುವಂತೆ  ಗ್ರಾಮಸ್ಥರ ಪರವಾಗಿ ಗ್ರಾ.ಪಂ ಸದಸ್ಯ ಮಂಜುನಾಥ ಟೋಸೂರ ಅವರ ಆಗ್ರಹವಾಗಿದೆ. ಗ್ರಾಮದಲ್ಲಿ ನಿರಂತರವಾಗಿ ವಿದ್ಯುತ್ ಸೌಲಭ್ಯ ಇಲ್ಲದಿದ್ದರೂ ಹೆಸ್ಕಾಂ ಸಿಬ್ಬಂದಿ ಇತ್ತ ತಲೆ ಹಾಕಿಲ್ಲ. ಇದೇ ಧೋರಣೆ ಮುಂದುವರಿ ಸಿದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಎಕ್ಸ್‌ಪ್ರೆಸ್ ರೈಲು ನಿಲ್ಲಿಸಲು ಒತ್ತಾಯ
ಗುಡಗೇರಿ
: ಇಲ್ಲಿನ ರೈಲು ನಿಲ್ದಾಣದಲ್ಲಿ ಕೇವಲ ಸಾಮಾನ್ಯ ರೈಲುಗಳು ಮಾತ್ರ ನಿಲುಗಡೆ ಆಗುತ್ತಿವೆ. ಇದರಿಂದ ಪ್ರಯಾಣಿಕ ರಿಗೆ ಬಹಳ ಅನಾನುಕೂಲವಾಗುತ್ತಿದೆ. ಗ್ರಾಮದಲ್ಲಿ ಎಕ್ಸ್‌ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡುವಂತೆ ಕಾಂಗ್ರೆಸ್ ಮುಖಂಡ ರವಿರಾಜ್ ಬಸ್ತಿ ರೈಲ್ವೆ ಇಲಾಖೆಯನ್ನು  ಆಗ್ರಹಿಸಿದ್ದಾರೆ.

  ಗುಡಗೇರಿ ನಿಲ್ದಾಣದ ಸುತ್ತಮುತ್ತಲಿನ ಗ್ರಾಮಗಳಿಂದ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ರೈಲಿನಲ್ಲಿ ಸಂಚರಿಸು ತ್ತಿದ್ದಾರೆ. ಬಸ್ ಪ್ರಯಾಣ ದರ ಗಗನಕ್ಕೇರಿದ್ದರಿಂದ ಪ್ರಯಾಣಿಕರೆಲ್ಲ ರೈಲನ್ನು ಅವಲಂಬಿಸಿದ್ದಾರೆ. ಈಗ ಈ ನಿಲ್ದಾಣದಿಂದ ಚಲಿಸುವ ಸಾಮಾನ್ಯ ರೈಲುಗಳಲ್ಲಿ ಪ್ರಯಾ ಣಿಕರ ದಟ್ಟಣೆ ಹೆಚ್ಚಾಗುತ್ತಿದ್ದು, ಹುಬ್ಬಳ್ಳಿ  ಹಾಗೂ ಬೆಂಗಳೂರು ನಗರಗಳಿಗೆ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಿದ್ದಾರೆ. ರೈಲು ಹೊರತು ಪಡಿಸಿದರೆ ಯಾವುದೇ ಸಂಚಾರಿ ಸೌಲಭ್ಯಗಳಿಲ್ಲದ ಕಾರಣ ಎಕ್ಸ್‌ಪ್ರೆಸ್ ರೈಲುಗಳನ್ನು ಈ ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.

ಗ್ರಾಮದ ರೈಲು ನಿಲ್ದಾಣದಲ್ಲಿ ಪ್ರತಿನಿತ್ಯ ಬೆಂಗಳೂರು ಕಡೆಯಿಂದ ಐದು ಹಾಗೂ ಹುಬ್ಬಳ್ಳಿ ಕಡೆಯಿಂದ ಬರುವ ಐದು ಸಾಮಾನ್ಯ ರೈಲುಗಳು ಮಾತ್ರ ನಿಲುಗಡೆಯಾಗುತ್ತಿವೆ. ಇದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಎಕ್ಸ್‌ಪ್ರೆಸ್ ರೈಲುಗಳನ್ನು ನಿಲುಗಡೆ ಮಾಡಿದಲ್ಲಿ ಸಮಸ್ಯೆ ಪರಿಹಾರವಾಗ ಲಿದೆ. ತಪ್ಪಿದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಪತ್ರಿಕೆಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.