ADVERTISEMENT

ನೌಕರರಿಗೆ ನಿವೇಶನ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 6:05 IST
Last Updated 5 ಜುಲೈ 2012, 6:05 IST

ಧಾರವಾಡ: ನಿವೇಶನ ರಹಿತ ಗ್ರೂಪ್ ಡಿ ನೌಕರರಿಗೆ ರಿಯಾಯಿತಿ ದರದಲ್ಲಿ ನಿವೇಶನ ಮಂಜೂರು ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಡಿ ಗ್ರೂಪ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಮಂಗಳವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿ ತಾಲ್ಲೂಕು ಗ್ರೂಪ್ ಡಿ ಸರ್ಕಾರಿ ನೌಕರರ ಸಂಘವು ತನ್ನ ಸದಸ್ಯರ ಒಳಿತಿಗಾಗಿ ಅನೇಕ ಕಾರ್ಯ ಕ್ರಮಗಳನ್ನು ಮಾಡುತ್ತಾ ಬಂದಿದೆ.

ಸದ್ಯ ಸುಮಾರು 500ಕ್ಕೂ ಅಧಿಕ ಸದಸ್ಯರು ಇದ್ದು, ಇದರಲ್ಲಿ 25ಕ್ಕೂ ಹೆಚ್ಚು ಇಲಾಖೆಗಳಿಂದ ಸದ್ಯರನ್ನು ಹೊಂದಿದೆ. ಸಂಘದವರು ಮನವಿ ಮಾಡಿಕೊಂಡ ಆಧಾರದ ಮೇಲೆ ಮತ್ತು ಸರ್ಕಾರದ ಯೋಜನೆಯ ಆಧಾರದ ಮೇಲಿಂದ ಹುಬ್ಬಳ್ಳಿ ತಾಲ್ಲೂಕು ಪೈಕಿ ಕೃಷ್ಣಾಪುರದಲ್ಲಿ 21 ಎಕರೆ 32 ಗುಂಟೆ ಜಮೀನನ್ನು ನೌಕರರಿಗೆ ನಿವೇಶನಕ್ಕಾಗಿ ನೀಡಬೇಕು ಎಂದು ಕಂದಾಯ ಇಲಾಖೆಯ ಕಾರ್ಯದರ್ಶಿಗಳು ಜಿಲ್ಲಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ಜಿಲ್ಲಾಧಿಕಾರಿಗಳು ಅವರ ಆದೇಶದಂತೆ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಕೋಶದ ನಿರ್ದೇಶಕರ ಜೊತೆಗೆ ಜಂಟಿಯಾಗಿ ಸಭೆ ನಡೆಸಿ ಕೂಲಂಕಷವಾಗಿ ಚರ್ಚಿಸಿ ಜಮೀನಿನಲ್ಲಿ ವಸತಿ ವಿನ್ಯಾಸ ರಚಿಸಿ ನೀಡಲು ಮತ್ತು ಎಲ್ಲಾ ರೀತಿಯ ಶುಲ್ಕವನ್ನು ರಿಯಾ ಯಿತಿ ದರದಲ್ಲಿ ಡಿ ದರ್ಜೆ ಸರ್ಕಾರಿ ನೌಕರರಿಗೆ ನೀಡಲು ತೀರ್ಮಾನ ವಾಗಿತ್ತು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆ ಜಮೀನಿನಲ್ಲಿ ನಿವೇಶನ ರಚಿಸಿ ಸಂಘದ ಫಲಾನುಭವಿಗಳಿಗೆ ಹಂಚುವ ಕಾರ್ಯ ನೆನೆಗುದಿಗೆ ಬಿದ್ದಿದೆ. ಈ ಕುರಿತು ಸಂಘದ ವತಿಯಿಂದ ಜಿಲ್ಲಾಧಿ ಕಾರಿಗಳಿಗೆ ಅನೇಕ ಬಾರಿ ಲಿಖಿತವಾಗಿ ಮನವಿ ಮಾಡಿಕೊಂಡರೂ ಕೇವಲ ಭರವಸೆ ಮಾತುಗಳನ್ನೇ ಹೇಳುತ್ತಿದ್ದಾರೆ. ಇವರಿಗೆ ಸರ್ಕಾರಿ ಡಿ ಗ್ರೂಪ್ ನೌಕರರ ಮೇಲೆ ಕಾಳಜಿ ಇಲ್ಲದಂತಾಗಿದೆ. ಕಾನೂನು ರೀತಿಯ ಎಲ್ಲ ಕ್ರಮ ಮತ್ತು ವಿಧಾನಗಳನ್ನು ಎಲ್ಲ ಇಲಾಖೆಯವರು ಪರಿಶೀಲಿಸಿ ಒಪ್ಪಿಗೆ ನೀಡಿದ ಆಧಾರದ ಮೇಲೆ ಹುಬ್ಬಳ್ಳಿ ಡಿ ಗ್ರೂಪ್ ನೌಕರರಿಗೆ ನಿವೇಶನ ರಚಿಸಿ ಹಂಚುವ ಪ್ರಕ್ರಿಯೆಗೆ ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಿದ್ದರೂ ಯಾವ ಪ್ರಯೋಜನ ದೊರೆತಿಲ್ಲ.

ಆದ್ದರಿಂದ ಈಗಲಾದರೂ ಕಾರ್ಯ ಪ್ರವೃತ್ತರಾಗಿ ಕೃಷ್ಣಾಪುರ ಗ್ರಾಮದ ರಿ.ಸಂ.ನಂ.86 ಮತ್ತು 87ರಲ್ಲಿ ನಿವೇಶನ ರಚಿಸಿ ಹಂಚಬೇಕು. ತಪ್ಪಿದ್ದಲ್ಲಿ ಸಂಘದ ವತಿಯಿಂದ ವಿವಿಧ ರೀತಿಯ ಹೋರಾಟ ಮಾಡಲಾಗುತ್ತದೆ ಎಂದು ನೌಕರರು ಮನವಿಯಲ್ಲಿ ಎಚ್ಚರಿ ಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.