ADVERTISEMENT

ಫೋರ್ಟಿಸ್‌ನಿಂದ ಆಧುನಿಕ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 7:30 IST
Last Updated 13 ಜುಲೈ 2012, 7:30 IST

ಹುಬ್ಬಳ್ಳಿ: ಮಿದುಳಿನಲ್ಲಿ ಗಡ್ಡೆ, ಗುಳ್ಳೆ, ಬೆನ್ನುಹುರಿ ಸಮಸ್ಯೆ ಇದೆಯೇ...?ನರ ಸಂಬಂಧಿ ಕಾಯಿಲೆಯಿಂದ ಬರುವ ಈ ರೋಗಗಳಿಗೆ ರಾಮಬಾಣವಾಗಿ ಬಂದಿದೆ `ಅಡ್ವಾನ್ಸ್‌ಡ್ ಮಿನಿಮಲ್ ಏಕ್ಸ್‌ಸ್ ಸರ್ಜರಿ~ (ಕೀ ಹೋಲ್ ಸರ್ಜರಿ- ಅತಿ ಸೂಕ್ಷ್ಮರಂಧ್ರ ಶಸ್ತ್ರಚಿಕಿತ್ಸೆ)!

`ಈ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ ಸದ್ಯ ದಕ್ಷಿಣ ಭಾರತದಲ್ಲಿ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದೆ. ಮಿದುಳಿನಲ್ಲಿ ಕಾಣಿಸಿಕೊಳ್ಳುವ ಅಸಹಜ ಬೆಳವಣಿಗೆ, ಗಡ್ಡೆ, ಬೊಬ್ಬೆ, ಬೆನ್ನು ಹುರಿ ಸಮಸ್ಯೆ ಇರುವವರಿಗೆ ಇತ್ತೀಚಿನವರೆಗೆ ಸಾಂಪ್ರದಾಯಿಕ ಶಸ್ತ್ರಕ್ರಿಯೆ ವಿಧಾನದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಅತ್ಯಾಧುನಿಕವಾಗಿ ಬಂದಿರುವ ಸೂಕ್ಷ್ಮ ಸಾಧನಗಳಿಂದ ಸರಳ ಮತ್ತು ಹೆಚ್ಚು ಪರಿಣಾಮಕಾರಿ ಶಸ್ತ್ರಚಿಕಿತ್ಸಾ ವ್ಯವಸ್ಥೆ ಬಂದಿದೆ~ ಎಂದು ಫೋರ್ಟಿಸ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ದೇಶಪಾಂಡೆ ವಿ. ರಾಜಕುಮಾರ್ ತಿಳಿಸಿದರು.

ನಗರದ ಮರಾಠಾ ಗಲ್ಲಿಯಲ್ಲಿರುವ ಫೋರ್ಟಿಸ್ ಮಾಹಿತಿ ಕೇಂದ್ರದಲ್ಲಿ ಗುರುವಾರ ಈ ಚಿಕಿತ್ಸಾ ಕ್ರಮದ ಕುರಿತು ಮಾಹಿತಿ ನೀಡಿದ ಅವರು, `ಮಿನಿಮಲ್ ಏಕ್ಸ್‌ಸ್ ಸರ್ಜರಿ~ ಸಂದರ್ಭದಲ್ಲಿ ಕನಿಷ್ಠ ಪ್ರಮಾಣದಲ್ಲಿ ರಕ್ತ ನಷ್ಟವಾಗುತ್ತದೆ.

ದೇಹದಲ್ಲಿ ಸಣ್ಣ ಗಾತ್ರದ ರಂಧ್ರ ಕೊರೆಯುವ ಮೂಲಕ ಇಡೀ `ಆಪರೇಷನ್~ ನಡೆಯುವುದರಿಂದ ರೋಗಿಗೆ ನೋವಿನ ಅನುಭವ ಕಡಿಮೆ. ಅಲ್ಲದೆ ರೋಗಿ ಮರುದಿನವೇ ಕ್ರಿಯಾಶೀಲಾಗುವುದರಿಂದ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಬಹುದು. 3-4 ದಿನಗಳಲ್ಲಿ ಎಂದಿನಂತೆ ಚಟುವಟಿಕೆಯಲ್ಲಿ ನಿರತರಾಗಬಹುದು~ ಎಂದರು.

`ಶಸ್ತ್ರಚಿಕಿತ್ಸೆ ಅಗತ್ಯವಿರುವ ದೇಹದ ಭಾಗದಲ್ಲಿ ವೈದ್ಯಕೀಯವಾಗಿ ವಿಶೇಷ ವಿನ್ಯಾಸದ ಸೂಕ್ಷ್ಮ ಸೂಜಿಯ ಮೂಲಕ ರಂಧ್ರ ಮಾಡಿ ಸಪೂರ ನಾಳವನ್ನು ದೇಹದ ಒಳಗೆ ತೂರಿಸಿ ಚಿಕಿತ್ಸೆ ನೀಡಲಾಗುವುದು. ಈ ಸಂದರ್ಭದಲ್ಲಿ ಕೇವಲ 30 ಎಂ.ಎಲ್.ನಷ್ಟು ರಕ್ತ ನಷ್ಟವಾಗುತ್ತದೆ. ಸಾಮಾನ್ಯ ಶಸ್ತ್ರಚಿಕಿತ್ಸೆಗೆ 5ರಿಂದ 6 ಗಂಟೆ ತಗುಲಿದರೆ, `ಮಿನಿಮಲ್ ಏಕ್ಸ್‌ಸ್ ಸರ್ಜರಿ~ ಕೇವಲ ಒಂದೂವರೆ ಗಂಟೆಯಲ್ಲಿ ಮುಕ್ತಾಯವಾಗುತ್ತದೆ. ಸಾಮಾನ್ಯ ಸರ್ಜರಿ ಮತ್ತು ಈ ವಿಧಾನದ ಸರ್ಜರಿಗೆ ತಗಲುವ ವೆಚ್ಚ ಸಮಾನ~ ಎಂದರು.

`ಮಿದುಳು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರಕ್ತನಾಳಗಳಿಗೆ ಹಾನಿಯಾಗುವ ಅಪಾಯವಿದೆ ಮತ್ತು ಇದರಿಂದ ದೇಹದ ಯಾವುದಾದರೂ ಭಾಗ ಚಟುವಟಿಕೆ ಸ್ಥಗಿತಗೊಳಿಸುವ ಆತಂಕವಿದೆ. ಹೀಗಾಗಿ ಇಂತಹ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯರು ಎಚ್ಚರ ವಹಿಸುವ ಅಗತ್ಯವಿದೆ~ ಎಂದರು.
 
`ಆರೋಗ್ಯಕ್ಕೆ ಅಪಾಯಕಾರಿ~
`ತಂಬಾಕು, ಗುಟ್ಕಾ, ಪಾನ್ ಸೇವನೆ ಆರೋಗ್ಯಕ್ಕೆ ಅಪಾಯಕಾರಿ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬಹುತೇಕ ಮಂದಿ ಇದರ ದಾಸರಾಗಿದ್ದಾರೆ. ಇಂಥವರಲ್ಲಿ ಮಿದುಳು ಸಂಬಂಧಿ ಕಾಯಿಲೆಗಳು ಹೆಚ್ಚು ಕಂಡು ಬರುವ ಸಾಧ್ಯತೆಗಳಿವೆ~ ಎಂದು ಡಾ.ದೇಶಪಾಂಡೆ ವಿ. ರಾಜಕುಮಾರ್ ತಿಳಿಸಿದರು.

`ಸ್ಟಿರಾಯ್ಡ ಸೇವನೆ ಹೆಚ್ಚು ಹಾನಿಕರ. ನೋವು ಶಮನ, ವಾತ, ಆಸ್ತಮಾಕ್ಕೂ ಸ್ಟಿರಾಯ್ಡ ಬಳಸುವುದು ಸಾಮಾನ್ಯವಾಗಿದೆ. ಇದರಿಂದ ದೇಹಾರೋಗ್ಯ ಕೆಡುತ್ತದೆ~ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.