ADVERTISEMENT

ಬಿರುಸಿನ ಪ್ರಚಾರ ನಡೆಸಿದ ಪ್ರಹ್ಲಾದ ಜೋಶಿ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 6:53 IST
Last Updated 22 ಮಾರ್ಚ್ 2014, 6:53 IST

ಧಾರವಾಡ:  ಬೆಳಿಗ್ಗೆ 8.15ರ ಸುಮಾರಿಗೆ ಧಾರವಾಡಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ, ಶುಕ್ರವಾರ ಸಂಜೆಯವರೆಗೂ ನಿರಂತರವಾಗಿ ಬಿರುಸಿನ ಪ್ರಚಾರ ಕೈಗೊಂಡರು.

ಮೊದಲಿಗೆ ಜೆಎಸ್‌ಎಸ್‌ ಸಂಸ್ಥೆಯ ಕಾರ್ಯದರ್ಶಿ ಡಾ.ನ.ವಜ್ರಕುಮಾರ ಅವರ ಮನೆಗೆ ಭೇಟಿ ನೀಡಿ ಅವರ ಬೆಂಬಲ ಕೋರಿದರು.
‘ನೀವು ಇಟ್ಟುಕೊಂಡ ಜನಸಂಪರ್ಕ ಹಾಗೂ ನರೇಂದ್ರ ಮೋದಿ ಅಲೆ­ಯಿಂದಾಗಿ ಖಚಿತವಾಗಿಯೂ ಗೆಲುವು ಸಾಧ್ಯ­ವಾಗುತ್ತದೆ. ಮಂಜುನಾಥ ಸ್ವಾಮಿ  ಆಶೀರ್ವಾದ ನಿಮಗಿದೆ’ ಎಂದು ವಜ್ರಕುಮಾರ ಧೈರ್ಯ ತುಂಬಿದರು.

ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತ­ನಾಡಿದ ಜೋಶಿ, ‘ನಾನು ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯ ಹಾಗೂ ಮೋದಿ ಅವರ ಅಲೆ ಎರಡೂ ಸಮಾನವಾಗಿ ನನ್ನ ಗೆಲುವಿಗೆ ಸಹಕರಿಸಲಿವೆ. ಗೆಲುವು ನಿಶ್ಚಿತ­ವಾಗಿದ್ದು, ಎಷ್ಟು ಮತಗಳ ಅಂತರದಿಂದ ಗೆಲ್ಲುವೆ ಎಂಬುದಷ್ಟೇ ಗೊತ್ತಾಗಬೇಕಿದೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯ 20 ಹಳ್ಳಿಗಳನ್ನು ಹೊರತುಪಡಿಸಿ ಉಳಿದ ಹಳ್ಳಿಗಳಿಗೆ ಕನಿಷ್ಟ ಎರಡು ಬಾರಿ ಭೇಟಿ ನೀಡಿದ್ದೇನೆ. ಪಕ್ಷದ ರಾಜ್ಯ ಅಧ್ಯಕ್ಷನೂ ಆಗಿರುವುದರಿಂದ ಬೇರೆ ಜಿಲ್ಲೆಗಳಿಗೆ ಪ್ರಚಾರಕ್ಕೆ ಹೋಗುವ ಸಂದರ್ಭವೂ ಬರುತ್ತದೆ. ವಾರದಲ್ಲಿ ಮೂರು ದಿನ ಹೊರಗಡೆ, ನಾಲ್ಕು ದಿನ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುತ್ತೇನೆ. ಅಗತ್ಯಬಿದ್ದರೆ ಹೆಲಿಕಾಪ್ಟರ್‌, ವಿಮಾನದ ಮೂಲಕ ಪ್ರಯಾಣ ಕೈಗೊಂಡು ಉಳಿದ ಜಿಲ್ಲೆಗಳ ಪ್ರಚಾರ ನಡೆಸುವೆ’ ಎಂದರು.

‘ನನ್ನ ಎದುರಾಳಿ ಯಾರಾಗುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಮತ­ದಾರರನ್ನು ಭೇಟಿ ಮಾಡಿ ಮತಯಾಚನೆ ಮಾಡುವುದೇ ನನ್ನ ಮೊದಲ ಆದ್ಯತೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನಂತರ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾದ ಪತ್ರಿಕಾ ಛಾಯಾಗ್ರಾಹಕ ರಾಮಚಂದ್ರ ಕುಲಕರ್ಣಿಯವರ ಮನೆಗೆ ತೆರಳಿ ಸಾಂತ್ವನ ಹೇಳಿದರು.

ಬಳಿಕ ದೈವಜ್ಞ ಕಲ್ಯಾಣಮಂಟಪದಲ್ಲಿ ನಡೆದ ಧಾರವಾಡ ಕ್ಷೇತ್ರದ ಕಾರ್ಯ­ಕರ್ತರ ಸಭೆಯಲ್ಲಿ ಮಾತನಾಡಿದರು.
ಶಾಸಕರಾದ ಬಸವರಾಜ ಬೊಮ್ಮಾ­ಯಿ, ಅರವಿಂದ ಬೆಲ್ಲದ, ಮೇಯರ್‌ ಶಿವು ಹಿರೇಮಠ, ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.