ADVERTISEMENT

ಬೋಧನೆ ಅಲಕ್ಷಿಸಿದವರ ವಿರುದ್ಧ ಶಿಸ್ತುಕ್ರಮ

ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 6:09 IST
Last Updated 9 ಜೂನ್ 2018, 6:09 IST

ಧಾರವಾಡ: ‘ಬೋಧನಾ ಅವಧಿಯನ್ನು ಸಾರ್ಥಕಗೊಳಿಸಿಕೊಳ್ಳದ, ಮಕ್ಕಳ ಕನಿಷ್ಠ ಕಲಿಕೆಗೆ ಶ್ರಮಿಸದ ಹಾಗೂ ಬೋಧನೆಯನ್ನು ಅಲಕ್ಷಿಸುವ ಶಿಕ್ಷಕರ ಮೇಲೆ ಶಿಸ್ತು ಕ್ರಮ ಕೈಕೊಳ್ಳಲಾಗುವುದು’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಹೆಚ್ಚುವರಿ ಆಯುಕ್ತ ಸಿದ್ಧಲಿಂಗಯ್ಯ ಹಿರೇಮಠ ಎಚ್ಚರಿಕೆ ನೀಡಿದರು.

ಡಯಟ್‌ನಲ್ಲಿ ಪ್ರಸಕ್ತ ಸಾಲಿನ ’ಚಿಂತನಾಶೀಲ ಚಟುವಟಿಕೆಗಳ ದಾಖಲೀಕರಣದ ಕೃತಿ ದರ್ಪಣ’ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ವಿದ್ಯಾರ್ಥಿಗಳಲ್ಲಿ ಕನಿಷ್ಠ ಕಲಿಕೆಯೂ ಸಾಧ್ಯವಾಗದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು ನಿತ್ಯವೂ ಶಾಲಾ ಸಂದರ್ಶನ ಮಾಡುವುದನ್ನು ಕಡ್ಡಯಗೊಳಿಸಲಾಗಿದ್ದು, ವಿಶೇಷವಾಗಿ ತರಗತಿ ಪರಿಶೀಲನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲಾಖೆಯ ಉಳಿವು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಯನ್ನೇ ಅವಲಂಬಿಸಿದೆ’ ಎಂದರು.

‘ಶಿಕ್ಷಣ ವ್ಯಾಪಾರೀಕರಣದತ್ತ ವಾಲುತ್ತಿದ್ದು, ಎಲ್ಲರಿಗೂ ಶಿಕ್ಷಣ ದೊರೆಯುತ್ತಿಲ್ಲ. ಶುಲ್ಕರಹಿತ ಶಿಕ್ಷಣ ನೀಡುವುದರ ಜತೆಗೆ ಹಲವಾರು ಉಚಿತ ಯೋಜನೆಗಳು ಜಾರಿಯಲ್ಲಿವೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಅಗತ್ಯವಾದ ಗುಣಾತ್ಮಕ ಶಿಕ್ಷಣದ ಕೊರತೆ ಸರ್ಕಾರಿ ಶಾಲೆಗಳಲ್ಲಿ ಬಹಳಷ್ಟು ಎದ್ದು ಕಾಣುತ್ತಿದೆ’ ಎಂದು ಹಿರೇಮಠ ಹೇಳಿದರು.

ADVERTISEMENT

ಡಯಟ್ ಮಾಹಿತಿ ಪುಸ್ತಕ ಬಿಡುಗಡೆಗೊಳಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ.ಕೆ.ಎಸ್. ವರ್ಧನ್ ಮಾತನಾಡಿ, ‘ಶೈಕ್ಷಣಿಕ ನಾಯಕತ್ವ ಜಾಗತಿಕ ಮಟ್ಟದಲ್ಲಿ ಚಿಂತನಾ ವಿಷಯವಾಗಿದೆ’ ಎಂದರು.

ಸುಮಂಗಳಾ ಕುಚಿನಾಡ ಮಾತನಾಡಿ, ‘ಶಾಲೆಯಲ್ಲಿ ಶಿಸ್ತು, ಗುಣಾತ್ಮಕ ಕಲಿಕೆ, ವ್ಯಕ್ತಿತ್ವ ವಿಕಾಸದೊಂದಿಗೆ ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಚಾರದಲ್ಲಿ ಎಲ್ಲ ಹಂತಗಳಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು’ ಎಂದರು.

ಡಿಡಿಪಿಐ ಎನ್.ಎಚ್.ನಾಗೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.