ADVERTISEMENT

ಭರವಸೆಗಳ ಸಾಕಾರದ ಸಂಭ್ರಮ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 6:44 IST
Last Updated 23 ಅಕ್ಟೋಬರ್ 2017, 6:44 IST

ಧಾರವಾಡ: ಇಲ್ಲಿನ ಕೃಷಿ ವಿಶ್ವ ವಿದ್ಯಾಲಯದ ಮೈದಾನದಲ್ಲಿ ಆಯೋಜಿ ಸಿರುವ ರಾಜ್ಯ ಸರ್ಕಾರದ ಭರವಸೆಗಳ ಸಾಕಾರದ ಸಂಭ್ರಮ ಕಾರ್ಯಕ್ರಮದಲ್ಲಿ ಏಳು ಜಿಲ್ಲೆಗಳ ಮಳಿಗೆಗಳನ್ನು ಸಚಿವರಾದ ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ, ಎಂ.ಬಿ.ಪಾಟೀಲ, ವಿನಯ ಕುಲಕರ್ಣಿ, ರುದ್ರಪ್ಪ ಲಮಾಣಿ ಸಂಯುಕ್ತವಾಗಿ ಉದ್ಘಾಟಿಸಿದರು.

ನಂತರ ಮಾತನಾಡಿದ ಆರ್‌.ವಿ.ದೇಶಪಾಂಡೆ, ‘ಪೊಳ್ಳು ಮಾತು, ಪೊಳ್ಳು ಘೋಷಣೆ ಮಾಡಿ ಸಮಾವೇಶ ಮಾಡುತ್ತಿಲ್ಲ. 156 ಭರವಸೆಗಳನ್ನು ಈಡೇರಿಸಿದ ನಂತರವಷ್ಟೇ ಸಾಧನಾ ಸಮಾವೇಶ ಆಯೋಜಿಸಲಾಗಿದೆ’ ಎಂದರು.

‘ನರೇಂದ್ರ ಮೋದಿ ಪ್ರಧಾನಿ ಆಗುವ ಮೊದಲು ಕಪ್ಪು ಹಣ ವಾಪಾಸ್‌ ತರುತ್ತೇನೆ ಎಂದಿದ್ದರು. ಆದರೆ, ಮೂರು ವರ್ಷ ಕಳೆದರೂ ಅದು ಅವರಿಂದ ಸಾಧ್ಯವಾಗಿಲ್ಲ. ಆದರೆ, ರಾಜ್ಯದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕಳೆದ ಚುನಾವಣೆಯಲ್ಲಿ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ನಾವು ಮುಂಚೂಣಿಯಲ್ಲಿದ್ದೇವೆ’ ಎಂದು ಅವರು ಹೇಳಿದರು.

ADVERTISEMENT

‘ಸಮಾವೇಶ ಕುರಿತು ಅನೇಕರು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಸರ್ಕಾರ ದಾರಿ ತಪ್ಪಿದಾಗ ಎಚ್ಚರಿಸುವುದು ವಿರೋಧಪಕ್ಷದ ಕೆಲಸ. ಆದರೆ, ನಾವು ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದೇವೆ. ಒಳ್ಳೆ ಕೆಲಸ ಮಾಡಿದಾಗ ಅಭಿನಂದಿಸಬೇಕು. ಪಕ್ಷಕ್ಕಿಂತ ರಾಷ್ಟ್ರ ಮತ್ತು ಜನಹಿತ ಮುಖ್ಯವಾಗಬೇಕು’ ಎಂದು ಹೇಳಿದರು.

ಸಚಿವೆ ಉಮಾಶ್ರೀ ಹಾಗೂ ರಮೇಶ ಜಾರಕಿಹೊಳಿ ಬಾರದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅನ್ಯ ಕಾರಣಗಳಿಂದ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ಬೆಳಗಾವಿ ವಿಭಾಗದ ವ್ಯಾಪ್ತಿಯ ಬೆಳಗಾವಿ, ಬಾಗಲಕೋಟೆ, ವಿಜಯ ಪುರ, ಧಾರವಾಡ, ಉತ್ತರ ಕನ್ನಡ, ಕಾರವಾರ, ಗದಗ ಹಾಗೂ ಹಾವೇರಿ ಜಿಲ್ಲೆಯ ಮಾಹಿತಿ ಮಳಿಗೆಗಳಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರದಿಂದ ಅನುಷ್ಠಾನಗೊಂಡಿರುವ ಅಭಿವೃದ್ಧಿ ಯೋಜನೆಗಳ ವಿವರಗಳನ್ನೊಳಗೊಂಡ ಮಾಹಿತಿ ಫಲಕ ಹಾಗೂ ದೃಶ್ಯಾವಳಿಗಳ ಪ್ರದರ್ಶನ ಆಯೋಜಿಸಲಾಗಿದೆ.

ತೋಟಗಾರಿಕೆ, ಕೃಷಿ, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ, ಆರೋಗ್ಯ,ಅಂಗವಿಕಲರ ಮತ್ತು ಹಿರಿಯ ನಾಗರಿಕ ಇಲಾಖೆ ಸೇರಿದಂತೆ ಹತ್ತು ಇಲಾಖೆಗಳ ಮಳಿಗೆಗಳಲ್ಲಿ ಇಲಾಖೆಯ ಸೌಲಭ್ಯಗಳ ಮಾಹಿತಿ ಹಾಗೂ ಪ್ರದರ್ಶನ ಆಯೋಜಿಸಲಾಗಿದೆ.

ಜತೆಗೆ ಏಳು ಜಿಲ್ಲೆಗಳ ಮಳಿಗೆಗಳಲ್ಲಿ ಆಯಾ ಜಿಲ್ಲೆಯ ವಿಶೇಷ ಕುರಿತ ಮಾಹಿತಿ ಲಭ್ಯ. ಮುಖ್ಯ ವೇದಿಕೆ ಪಕ್ಕದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರಾಜ್ಯಮಟ್ಟದ ಮಳಿಗೆ ಸ್ಥಾಪಿಸಲಾಗಿದೆ. ಇದರೊಂದಿಗೆ ಹತ್ತು ಆಹಾರ ಮಳಿಗೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.