ಧಾರವಾಡ: `ಒತ್ತಡದ ದಿನಗಳಲ್ಲಿ ಬದುಕುತ್ತಿರುವ ಇಂದಿನ ಮಕ್ಕಳಿಗೆ, ಮಕ್ಕಳ ಸಾಹಿತ್ಯ ಬಹಳ ಅವಶ್ಯವಾಗಿದೆ. ಆದರೆ ಎಲ್ಲೋ ಒಂದು ಕಡೆ ನಾವು ಮಕ್ಕಳ ಸಾಹಿತ್ಯವನ್ನು ಕಡೆಗಣಿಸುತ್ತಿದ್ದೇವೆ~ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ವಿಷಾದ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಈಶ್ವರ ಕಮ್ಮಾರ ಅವರ ಮಕ್ಕಳ ಸಾಹಿತ್ಯದ ಬಗೆಗಿನ ವಿಚಾರ ಸಂಕಿರಣ, ಮಕ್ಕಳ ಕವಿತೆಗಳು, ಪ್ರೊ.ಕೆ. ಮೀರಾಬಾಯಿ ರಚಿಸಿದ ಎಂ.ಫಿಲ್ ಕಿರು ಪ್ರಬಂಧ ಮತ್ತು ಇತರ 12 ಕೃತಿಗಳ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
`ಮೂರು, ನಾಲ್ಕು ವರ್ಷವಿದ್ದಾಗಲೇ ಮಗುವನ್ನು ರೆಸಿಡೆನ್ಸಿಯಲ್ಗೆ ಹಾಕಿ ಸ್ವಲ್ಪ ದೊಡ್ಡದಾದ ಮೇಲೆ ಹಾಸ್ಟೆಲ್ಗೆ ಕಳುಹಿಸಿ ನಂತರ ವಿದೇಶಕ್ಕೆ ಕಳುಹಿಸುವ ತಂದೆ-ತಾಯಿಗಳಿಂದ, ಮಗುವಿಗೆ ಪಾಲಕರ ಪ್ರೀತಿ ಸಿಗುತ್ತಿಲ್ಲ. ನಂತರ ಹೆತ್ತ ಮಗ ನಮ್ಮನ್ನು ನೋಡಿಕೊಳ್ಳುತ್ತಿಲ್ಲ ಎಂಬ ಮಾತುಗಳು ತಂದೆ-ತಾಯಿಗಳಿಂದ ಕೇಳಿ ಬರುತ್ತವೆ. ಆದ್ದರಿಂದ ಬಾಲ್ಯದಲ್ಲಿಯೇ ಮಗುವಿಗೆ ಪಾಲಕರ ಸರಿಯಾದ ಪ್ರೀತಿ ದೊರಕಬೇಕಿದೆ. ಈ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಆಹ್ಲಾದಕರ ವಾತಾವರಣ ಸೃಷ್ಟಿ ಮಾಡಬೇಕಿದೆ~ ಎಂದು ಹೇಳಿದರು.
ಕನ್ನಡ ಪ್ರಾಧ್ಯಾಪಕ ಡಾ.ಜಿ.ಎಂ. ಹೆಗಡೆ ಅವರು ಕಮ್ಮಾರರ ಮಕ್ಕಳ ಕವಿತೆಗಳು ಹಾಗೂ ರೂಪಕಗಳ ಕುರಿತು, ಡಾ.ಜಿನದತ್ತ ಹಡಗಲಿ ಮಕ್ಕಳ ಕಾದಂಬರಿ, ಕಥೆಗಳು, ಅಂಕಣ ಬರಹಗಳ ಕುರಿತು, ಮಕ್ಕಳ ಸಾಹಿತಿ ಜಂಬುನಾಥ ಕಂಚ್ಯಾಣಿ ಅವರು ಮಹಾನ್ ವ್ಯಕ್ತಿಗಳ ಪರಿಚಯ ಕೃತಿಗಳ ಕುರಿತು ಹಾಗೂ ಮಕ್ಕಳ ನಾಟಕಕಾರ ಡಾ.ನಿಂ.ಗು.ಸೊಲಗಿ ಮಕ್ಕಳ ಕಿರು ನಾಟಕಗಳು ಕುರಿತು ಮಾತನಾಡಿದರು.
ಲೇಖಕ ಈಶ್ವರ ಕಮ್ಮಾರ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರೊ.ಕೆ.ಮೀರಾಬಾಯಿ ಹಾಜರಿದ್ದರು. ಕವಿವ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಸ್ವಾಗತಿಸಿ, , ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.