ಶಿರಸಿ: ವಿಶ್ವ ಪರಿಸರದ ದಿನದಂದು ಪುಟಾಣಿಗಳು ಕೆಮ್ಮಣ್ಣು, ಸಗಣಿ ಮಿಶ್ರಣ ಮಾಡಿ ಅದರೊಳಗೆ ಬೀಜಗಳನ್ನು ಸೇರಿಸುತ್ತ ಭವಿಷ್ಯದ ಹಸಿರು ಕನಸು ಹೆಣೆದರು. ಲಯನ್ಸ್ ಶಾಲೆಯ ನೂರಾರು ಮಕ್ಕಳು ಸೇರಿ ಸೋಮವಾರ 6000ಕ್ಕೂ ಅಧಿಕ ಬೀಜದುಂಡೆಗಳನ್ನು ಸಿದ್ಧಪಡಿಸಿದರು.
ಉತ್ತಿಷ್ಠ ಭಾರತ, ಲಯನ್ಸ್ ಕ್ಲಬ್, ಲಯನ್ಸ್ ಶಿಕ್ಷಣ ಸಂಸ್ಥೆ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಉತ್ತಿಷ್ಠ ಭಾರತದ ಅಧ್ಯಕ್ಷ ವಿಜಯಸಾರಥಿ ಶಾಸ್ತ್ರಿ ಅವರು ಮಕ್ಕಳಿಗೆ ಬೀಜದುಂಡೆ ತಯಾರಿಸುವ ಬಗೆ ತಿಳಿಸಿದರು.
ಕೆಮ್ಮಣ್ಣು, ದೇಸಿ ಹಸುವಿನ ಗಂಜಲ, ಗೊಬ್ಬರ ಸೇರಿಸಿ ಉಂಡೆಯ ಆಕಾರ ಮಾಡಿ ಅದರೊಳಗೆ ಬೇಕಾದ ಬಗೆಯ ಬೀಜ ಸೇರಿಸಬೇಕು. ಮುಂಗಾರು ಹಾಗೂ ಹಿಂಗಾರು ಮಳೆ ಆರಂಭದೊಂದಿಗೆ ಬೆಟ್ಟಗುಡ್ಡಗಳಲ್ಲಿ ಸಣ್ಣ ಕುಳಿ ಮಾಡಿ ಈ ಉಂಡೆಯನ್ನು ನಾಟಿ ಮಾಡಿದರೆ ಶೇ 50ಕ್ಕಿಂತ ಹೆಚ್ಚು ಬೀಜಗಳು ಮೊಳಕೆಯೊಡೆದು ಸಸಿಯಾಗುತ್ತವೆ ಎಂದರು.
ಕಾಡು, ಹಣ್ಣಿನ ಗಿಡ ಬೆಳೆಸುವ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವ ನಿಟ್ಟಿನಲ್ಲಿ ಬೀಜದುಂಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾರೆ
ಕಾಯಿ, ಅವರೆ, ಅಣಲೆಕಾಯಿ, ನೆಲ್ಲಿ, ಮತ್ತಿ, ಚಿಗರೆ, ಸಿಬಾಬುಲ್ ಬೀಜಗಳನ್ನು ಶಿರಸಿ ಭಾಗದಲ್ಲಿ ಹಾಕಲಾಗುತ್ತಿದೆ. ಕಸಿ ಗಿಡ ತಯಾರಿಕೆಗೆ ಸುಮಾರು
₹ 500 ಖರ್ಚಾದರೆಮ ಬೀಜದುಂಡೆಯು ಅತ್ಯಂತ ಕನಿಷ್ಠ ವೆಚ್ಚದಲ್ಲಿ ಸಿದ್ಧವಾಗುತ್ತದೆ ಎಂದರು.
ರಾಜ್ಯದಾದ್ಯಂತ ಒಟ್ಟು 3 ಕೋಟಿ ಬೀಜದುಂಡೆ ಸಿದ್ಧಪಡಿಸುವ ಯೋಜನೆ ಇದ್ದು, ನಾಲ್ಕು ದಿನಗಳಲ್ಲಿ 13.80 ಲಕ್ಷ ಉಂಡೆಗಳು ಸಿದ್ಧವಾಗಿವೆ ಎಂದರು.
ಪ್ರಪಂಚದ ವಿಷಾನಿಲ ಹೀರಿ ಉಸಿರಾಟಕ್ಕೆ ಆಮ್ಲಜನಕ ನೀಡುವ ಏಕೈಕ ಜೀವಿ ಸಸ್ಯ. ಸಸ್ಯ ಸಂಪತ್ತನ್ನು ನಾಶ ಮಾಡಿದರೆ ಜೀವಲೋಕವೇ ನಾಶವಾಗುತ್ತದೆ. ಹೀಗಾಗಿ ಪರಿಸರ ರಕ್ಷಿಸುವ ಕೆಲಸ ಆಗಬೇಕು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.