ADVERTISEMENT

ಮನೆ ತೆರವು ನಿರ್ಣಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 4:30 IST
Last Updated 1 ಆಗಸ್ಟ್ 2012, 4:30 IST

ಧಾರವಾಡ: ಹುಬ್ಬಳ್ಳಿಯ ವಾರ್ಡ್ ಸಂ.27 ವ್ಯಾಪ್ತಿಯ ಸರ್ವೆ ನಂ.68ರಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ನಿವಾಸಿಗಳನ್ನು ತೆರವುಗೊಳಿಸುವ ಕ್ರಮವನ್ನು ಖಂಡಿಸಿ ಸುಭಾನಿ ನಗರ ಹಾಗೂ ಗವಿಸಿದ್ದೇಶ್ವರ ನಗರದ ನೂರಾರು ನಿವಾಸಿಗಳು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ಮನೆಗಳು ಅನಧಿಕೃತವಾಗಿದ್ದು, ಅವುಗಳನ್ನು ತೆರವುಗೊಳಿಸಬೇಕು ಎಂದು ಸೂಚಿಸಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸ್ ಕಮೀಷನರ್ ಡಾ.ಕೆ.ರಾಮಚಂದ್ರರಾವ್ ಕಿಮ್ಸ ನಿರ್ದೇಶಕಿ ಡಾ.ವಸಂತಾ ಕಾಮತ್ ಅವರಿಗೆ ಜೂನ್ 6ರಂದು ಪತ್ರ ಬರೆದಿದ್ದು, ಸೂಕ್ತ ಬಂದೋಬಸ್ತ್ ನೀಡಲು ದಿನಾಂಕ ಹಾಗೂ ಸಮಯ ತಿಳಿಸಬೇಕು ಎಂದು ಕೋರಿರುವುದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಹುಟ್ಟಿಸಿದೆ. ಕಳೆದ 45 ವರ್ಷಗಳಿಂದ ಈ ಸರ್ವೆ ನಂಬರ್‌ನಲ್ಲಿ ವಾಸವಾಗಿದ್ದು, ಪಾಲಿಕೆಗೆ ನೀರಿನ ಕರ, ಆಸ್ತಿ ಕರ, ವಿದ್ಯುತ್ ಬಿಲ್ ತುಂಬಲಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಾಲಿಕೆಯ ಮಾಜಿ ಸದಸ್ಯ ತಿಪ್ಪಣ್ಣ ಮಜ್ಜಗಿ, `ಇಲ್ಲಿ ಸುಮಾರು 200 ಕುಟುಂಬಗಳು ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿವೆ. ಕಿಮ್ಸಗೆ ಲೀಸ್ ಆಧಾರದ ಮೇಲೆ ಅರಣ್ಯ ಇಲಾಖೆ ನೀಡಿದ ಜಾಗ ಯಾವುದು ಎಂಬುದು  ತಿಳಿದು ಬಂದಿಲ್ಲ.

ಹಾಗಿದ್ದ ಮೇಲೆ ಇವರ ಮನೆಗಳನ್ನು ಏಕೆ ಕೆಡವಬೇಕು? ಇಲ್ಲಿ ವಾಸಿಸುವ ಜನರ ಹಿತರಕ್ಷಣೆಗಾಗಿ ಜಿಲ್ಲಾಧಿಕಾರಿಗಳು ಮನೆ ತೆರವುಗೊಳಿಸುವ ನಿರ್ಧಾರ ಕೈಬಿಡುವಂತೆ ಅಗತ್ಯ ನಿರ್ದೇಶನ ನೀಡಬೇಕು. ಇಲ್ಲದಿದ್ದರೆ ಮುಂದೆ ಇನ್ನೂ ಉಗ್ರ ಹೋರಾಟ ಮಾಡಲಾಗುವುದು~ ಎಂದರು.

ಚಂದ್ರಶೇಖರ ಬೆಳಗೇರಿ, ದೇವರಾಜ ಭಜಂತ್ರಿ, ಇಮಾಮ್‌ಸಾಬ್ ಗರಗದ, ಸುಮಿತ್ರಾ ಬೆಳಗೇರಿ, ಸಿದ್ದಪ್ಪ ಪೂಜಾರ, ಕಲ್ಲಪ್ಪ ಮುಳಗುಂದ, ರುಕ್ಮಮ್ಮ ವಾಡಕರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT