ADVERTISEMENT

‘ಮನೋರೋಗ ವಾಸಿಯಾಗಬಲ್ಲ ಕಾಯಿಲೆ’

ವಿಶ್ವ ಮನೋವ್ಯಾಕುಲತೆ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ. ಹಳ್ಯಾಳ

​ಪ್ರಜಾವಾಣಿ ವಾರ್ತೆ
Published 26 ಮೇ 2018, 10:26 IST
Last Updated 26 ಮೇ 2018, 10:26 IST

ಧಾರವಾಡ: 'ಮನೋವ್ಯಾಕುಲತೆ ವಾಸಿಯಾಗಬಲ್ಲ ಕಾಯಿಲೆಯಾಗಿದ್ದು ಸೂಕ್ತ ಹಾಗೂ ಸಕಾಲಿಕ ಚಿಕಿತ್ಸೆ ಅಗತ್ಯ' ಎಂದು ಕರ್ನಾಟಕ ವಿಶ್ವವಿದ್ಯಾಲಯದ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್.ಹಳ್ಯಾಳ ಹೇಳಿದರು.

ಇಲ್ಲಿನ ಮಿಚಿಗನ್ ಕಂಪೌಂಡ್‌ನಲ್ಲಿರುವ ಶ್ರೀ ಸೈಕ್ಯಾಟ್ರಿಕ್ ಕೇಂದ್ರದಲ್ಲಿ ಶುಕ್ರವಾರ ವಿಶ್ವ ಮನೋವ್ಯಾಕುಲತೆ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಂದೆ ಮನೋರೋಗ ಎದುರಾದಾಗ ಜನರು ಗುಡಿ, ಗುಂಡಾರ, ಮಸೀದಿ ಚರ್ಚ್‌ಗಳಿಗೆ ಹೋಗುತ್ತಿದ್ದರು. ಯಾರಿಗೂ ಗೊತ್ತಾಗದ ಹಾಗೆ ಚಿಕಿತ್ಸೆ ವಾಸಿಯಾಗಬೇಕೆಂದು ಬಯಸುತ್ತಿದ್ದರು. ಮನೋರೋಗಗಳ ಕುರಿತು ಅನೇಕ ತಪ್ಪು ಕಲ್ಪನೆಗಳಿದ್ದವು. ಆದರೆ ಬದಲಾದ ಸನ್ನಿವೇಶದಲ್ಲಿ ಈಗ ಮನೋರೋಗಕ್ಕೂ ಚಿಕಿತ್ಸೆಯಿದ್ದು, ಎಲ್ಲವನ್ನೂ ಗುಣಪಡಿಸಬಹುದಾಗಿದೆ’ ಎಂದರು.
’ಮನೆಯವರ ಮೇಲೆ ಅತಿಯಾದ ಸಂಶಯ, ಹಿಂಸಾತ್ಮಕ ಚಟುವಟಿಕೆಗಳಿಗೆ ಇಳಿಯುವುದು, ಬೇರೆ ಯಾರೋ ತನ್ನ ಮೇಲೆ ಹಲ್ಲೆ ಮಾಡಲು ಬರುತ್ತಿದ್ದಾರೆ ಎಂದುಕೊಳ್ಳುವುದು ಮನೋವ್ಯಾಕುಲತೆ ರೋಗದ ಲಕ್ಷಣವಾಗಿದ್ದು ಶೇ 80ರಷ್ಟು ಅನುವಂಶೀಯವಾಗಿ ಈ ರೋಗ ಬರುತ್ತದೆ. ರೋಗಿ ವಾಸಿಸುವ ಮನೆ ಪರಿಸರವನ್ನು ಚೆನ್ನಾಗಿ ಇಟ್ಟುಕೊಳ್ಳುವುದು, ಆತನಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದೇ ಆದಲ್ಲಿ ಮನೋವ್ಯಾಕುಲತೆಗೆ ಶೀಘ್ರ ಪರಿಹಾರ ಸಾಧ್ಯ’ ಎಂದು ಹೇಳಿದರು.

ಡಾ.ಆನಂದ ಪಾಂಡುರಂಗಿ ಮಾತನಾಡಿ, ’ಮನೋರೋಗಗಳ ನಿರ್ಲಕ್ಷ್ಯ ಸಲ್ಲ. ಜತೆಗೆ ಮನೋರೋಗಿಗಳ ಬಗ್ಗೆ ಕೀಳರಿಮೆಯೂ ಹೊಂದಬಾರದು. ಮನೋರೋಗ ವಾಸಿಯಾಗಬಲ್ಲ ಕಾಯಿಲೆಯಾಗಿದ್ದು ಯಾವುದೇ ಹಿಂಜರಿಕೆ ಇಲ್ಲದೇ ವೈದ್ಯರ ಬಳಿ ಹೋಗಬೇಕು. ಮನ ಬಿಚ್ಚಿ ಸಮಸ್ಯೆ ವಿವರಿಸಿ ಪರಿಹಾರ ಕಂಡುಕೊಳ್ಳಬೇಕು’ ಎಂದರು.

ADVERTISEMENT

ಅನುಪಮಾ ಪಾಂಡುರಂಗಿ. ಡಾ.ಸಪ್ನಾ ಪಾಂಡುರಂಗಿ, ಡಾ.ಪ್ರೀತಿ ಪಾಂಡುರಂಗಿ, ವೈಷ್ಣವಿ ಸಂಕೇಶ್ವರ, ದತ್ತಾತ್ರೇಯ ರಾಯ್ಕರ್, ವಿಶ್ವನಾಥ ದೀಕ್ಷಿತ್, ನಾಗೇಶ ಮೊಕಾಶಿ, ಗಿರೀಶ ದೇಶಪಾಂಡೆ, ಪ್ರೊ.ಜಿ.ಎ.ತಿಗಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.