ADVERTISEMENT

ಮಸೀದಿ ಧ್ವಂಸ: ಕರಾಳ, ಶೌರ್ಯ ದಿನಾಚರಣೆ

ಹಿಂದೂ ಸಂಘಟನೆಯಿಂದ ಹನುಮಾನ್‌ ಚಾಲೀಸಾ ಪಠಣ; ಎಸ್‌ಡಿಪಿಐನಿಂದ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 5:23 IST
Last Updated 7 ಡಿಸೆಂಬರ್ 2017, 5:23 IST
ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ನ ಪದಾಧಿಕಾರಿಗಳು ಹುಬ್ಬಳ್ಳಿಯ ಸಹಸ್ರಾರ್ಜುನ ವೃತ್ತದಲ್ಲಿ ‘ಶೌರ್ಯ ದಿನ’ ಆಚರಿಸಿದರು
ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ನ ಪದಾಧಿಕಾರಿಗಳು ಹುಬ್ಬಳ್ಳಿಯ ಸಹಸ್ರಾರ್ಜುನ ವೃತ್ತದಲ್ಲಿ ‘ಶೌರ್ಯ ದಿನ’ ಆಚರಿಸಿದರು   

ಹುಬ್ಬಳ್ಳಿ: ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಖಂಡಿಸಿ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ(ಎಸ್‌ಡಿಪಿಐ) ಕಾರ್ಯಕರ್ತರು ಬುಧವಾರ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸುವ ಮೂಲಕ ಕರಾಳ ದಿನ ಆಚರಿಸಿದರು.

ಕಪ್ಪು ಬಟ್ಟೆ ಧರಿಸಿದ್ದ ಎಸ್‌ಡಿಪಿಐನ ಕೆಲ ಕಾರ್ಯಕರ್ತರು, ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಪುನರ್‌ ನಿರ್ಮಾಣ ಮಾಡಬೇಕು, ಮಸೀದಿ ಧ್ವಂಸ ಮಾಡಿದವರನ್ನು ಜೈಲಿಗಟ್ಟಬೇಕು ಎಂದು ಘೋಷಣೆ ಕೂಗಿದರು.
ಎಸ್‌ಡಿಪಿಐನ ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಷಾದ್‌ ಅಹ್ಮದ್‌ ಅತ್ತಾರ, ‘ಪ್ರಕರಣದ ಪ್ರಮುಖ ಆರೋಪಿಗಳಿಗೆ ಶಿಕ್ಷೆಯಾಗುವವರೆಗೂ ದೇಶದಲ್ಲಿ ಜಾತ್ಯತೀತತೆ ಮರುಸ್ಥಾಪನೆ ಸಾಧ್ಯವಿಲ್ಲ. ಬಾಬರಿ ಮಸೀದಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ’ ಎಂದರು.

ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್‌ ರಫೀಕ್‌ ಲಷ್ಕರ್‌, ಉಪಾಧ್ಯಕ್ಷ ಅಬ್ದುಲ್‌ ಬೆಂಗಾಲಿ, ಅಬ್ದುಲ್ಲಾ ಕುಮಳೂರ, ಇರ್ಷಾದ್‌ ಅಹ್ಮದ್‌ ರಿತ್ತಿ ಪಾಲ್ಗೊಂಡಿದ್ದರು.
ಶೌರ್ಯ ದಿನ: ಬಾಬರಿ ಮಸೀದಿ ಧ್ವಂಸದ 25ನೇ ವರ್ಷಾಚರಣೆ ಅಂಗವಾಗಿ ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ ವತಿಯಿಂದ ಬುಧವಾರ ಸಂಜೆ ‘ಶೌರ್ಯ ದಿನ’ ಆಚರಿಸಲಾಯಿತು.

ADVERTISEMENT

ಇಲ್ಲಿನ ಸಹಸ್ರಾರ್ಜುನ ವೃತ್ತದಲ್ಲಿ ಹಣತೆ ಬೆಳಗಿ, ಹನುಮಾನ್‌ ಚಾಲೀಸ್‌ ಪಠಣ ಮಾಡುವ ಮೂಲಕ ಶ್ರೀರಾಮನ ಪರ ಘೋಷಣೆ ಕೂಗಿದರು.

‘ಅಯೋಧ್ಯೆಯಲ್ಲಿ ಮುಂದಿನ ವರ್ಷ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ’ ಎಂದು ವಿಶ್ವ ಹಿಂದೂ ಪರಿಷತ್‌ನ ಉತ್ತರ ಪ್ರಾಂತ ಕಾರ್ಯದರ್ಶಿ ರಮೇಶ ಕುಲಕರ್ಣಿ ಹೇಳಿದರು.

ವಿಶ್ವ ಹಿಂದೂ ವ್ಯಾಪಾರಿ ಪರಿಷತ್‌ನ ಹುಬ್ಬಳ್ಳಿ ಘಟಕದ ಉಪಾಧ್ಯಕ್ಷ ರಾಮ್‌ ಭದ್ರನ್‌, ಮುಖಂಡರಾದ ಅಶೋಕ ಅಮೀನಗಡ, ಗಣು ಜರತಾರಘರ್‌, ಸುರೇಶ ಜೈನ್‌, ಸಿದ್ದು ಶೆಟ್ಟರ್‌, ಅಮಿತ್‌ ಕಾಂಬಳೆ, ಮೋಹನ ಬಿಲಾನ್‌, ಅಂಬಸಾ ಕಾಟವೆ, ಗಜು ಪವಾರ್‌, ಅಭಯ ಕುಲಕರ್ಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.