ಹುಬ್ಬಳ್ಳಿ: ಧಾರವಾಡದ ಉದ್ಯಮಿ ವಿನಯ್ ಕುರ್ತಕೋಟಿ ಇಲ್ಲಿನ ಇಂದ್ರಾಳಿ ಸ್ಕೂಲ್ ಆಫ್ ಲೈಫ್ ಸ್ಕಿಲ್ಸ್ನಲ್ಲಿ ಭಾನುವಾರ ಮುಕ್ತಾಯಗೊಂಡ ಧಾರವಾಡ ಜಿಲ್ಲಾ ಮುಕ್ತ ಚೆಸ್ ಚಾಂಪಿಯನ್ಷಿಪ್ನ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸಹಯೋಗದಲ್ಲಿ ಆಯೋಜಿಸಿದ್ದ ಟೂರ್ನಿಯ ಏಳು ಸುತ್ತಿನ ಸ್ಪರ್ಧೆಯಲ್ಲಿ ವಿನಯ್ ಒಟ್ಟಾರೆ ಆರು ಪಾಯಿಂಟ್ ಕಲೆ ಹಾಕುವುದರೊಂದಿಗೆ ಈ ಗೌರವಕ್ಕೆ ಪಾತ್ರರಾದರು.
ಹುಬ್ಬಳ್ಳಿಯವರಾದ ಶಾಶ್ವತ್ ಮುದೇನಗುಡಿ ಹಾಗೂ ಆದಿತ್ಯ ಕಲ್ಯಾಣಿ ಕೂಡ ಆರು ಪಾಯಿಂಟ್ ಸಂಪಾದಿಸಿದರು.
ಆದರೆ ವಿವಿಧ ಸುತ್ತುಗಳಲ್ಲಿ ತೋರಿದ ಪ್ರದರ್ಶನ ಹಾಗೂ ಪ್ರಬಲ ಎದುರಾಳಿ ವಿರುದ್ಧ ಸೆಣಸಿದ ಆಧಾರದ ಮೇಲೆ ವಿನಯ್ ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.
ಶಾಶ್ವತ್ ಹಾಗೂ ಆದಿತ್ಯ ನಂತರದ ಸ್ಥಾನ ಪಡೆದರು. ಧಾರವಾಡದ ಆರ್. ಕೆ. ಮಹಿಷಿ ನಾಲ್ಕು ಹಾಗೂ ಹುಬ್ಬಳ್ಳಿಯ ವಾಣಿ ಇಂದ್ರಾಳಿ ಐದನೇ ಸ್ಥಾನ ಪಡೆದರು.
ಬಾಲಕ-ಬಾಲಕಿಯರು, ಹಿರಿಯರೂ ಸೇರಿದಂತೆ ಜಿಲ್ಲೆಯ 60ಕ್ಕೂ ಹೆಚ್ಚು ಚೆಸ್ ಪಟುಗಳು ಎರಡು ದಿನಗಳ ಈ ಮುಕ್ತ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು.
ಬಹುಮಾನ ವಿತರಣೆ
ಸಂಜೆ ನಡೆದ ಸಮಾರಂಭದಲ್ಲಿ ಚೆಸ್ ಸಂಸ್ಥೆ ಅಧ್ಯಕ್ಷ ವಿ.ವಿ. ಮಂಗಳವಾಡಕರ್ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳು ವಿಜೇತರಿಗೆ ಬಹುಮಾನ ವಿತರಿಸಿದರು. ಸಂಸ್ಥೆ ಉಪಾಧ್ಯಕ್ಷ ಡಾ. ಅರವಿಂದ ಯೆರಿ, ಜಂಟಿ ಕಾರ್ಯದರ್ಶಿ ರಾಜು ಹೆಗಡಿ, ಶ್ರೀನಿವಾಸ ಇಂದ್ರಾಳಿ ಇತರರು ಈ ಸಂದರ್ಭ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.