ಧಾರವಾಡ: ‘ಕೆ.ಎಸ್.ಐ.ಸಿ. ಉತ್ಪಾದನೆಯ ರೇಷ್ಮೆ ಸೀರೆಗಳಿಗೆ ದೇಶದಲ್ಲಿ ಮಾತ್ರವಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ತನ್ನದೇ ಆದ ಬೇಡಿಕೆ ಇದೆ’ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.
ಇಲ್ಲಿನ ಭಾವಸಾರ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರದಿಂದ ಆರಂಭವಾದ ಕೆ.ಎಸ್.ಐ.ಸಿ. ಮೈಸೂರು ಸಿಲ್ಕ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಉದ್ಘಾಟಿಸಿ ಮಾತನಾಡಿದ ಅವರು, ‘ಈ ರೀತಿಯ ಪ್ರದರ್ಶನ ಮತ್ತು ಮಾರಾಟದಿಂದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಉತ್ಪಾದನೆಗಳು ದೊರೆಯುವುದರ ಜೊತೆ ರೇಷ್ಮೆ ಬೆಳೆಗಾರರಿಗೂ ಪ್ರೋತ್ಸಾಹ ದೊರೆಯುತ್ತದೆ’ ಎಂದರು.
ಸಂಸ್ಥೆ ನೂತನವಾಗಿ ಉತ್ಪಾದಿಸಿರುವ ಹೊಸ ಮಾದರಿಯ ₹70 ಸಾವಿರ ಮೌಲ್ಯದ ಸೀರೆಯನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು. ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಭಾನುಪ್ರಕಾಶ್ ಮಾತನಾಡಿ, ‘ಮೈಸೂರು ಸಿಲ್ಕ್ ತನ್ನ ಗುಣಮಟ್ಟದಿಂದಾಗಿ ಖ್ಯಾತಿ ಪಡೆದಿದೆ. ಕೆ.ಎಸ್.ಐ.ಸಿ.ಗೆ ರಾಜ್ಯ ಸರ್ಕಾರ ‘ಮುಖ್ಯಮಂತ್ರಿ ವಾರ್ಷಿಕ ರತ್ನ ಪ್ರಶಸ್ತಿ’ ನೀಡಿದೆ. ಈ ಸೀರೆಗಳಿಗೆ ಭೌಗೋಳಿಕ ಗುರುತಿನ ನೋಂದಣಿ ದೊರೆತಿದೆ. ಪ್ರದರ್ಶನ ಮತ್ತು ಮಾರಾಟ ಡಿ.4 ರವರೆಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ನಡೆಯಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.